ADVERTISEMENT

ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ: ಬರಗೂರು ರಾಮಚಂದ್ರಪ್ಪ ಕಳವಳ

ಸುಬ್ಬು ಹೊಲೆಯಾರ್ ಅವರ ‘ದುಃಖ ಆರದ ನೆಲದಲ್ಲಿ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 16:20 IST
Last Updated 21 ಸೆಪ್ಟೆಂಬರ್ 2024, 16:20 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ‘ಸಮಕಾಲೀನ ಸಂದರ್ಭದಲ್ಲಿಯೂ ದುಃಖ ಆರದ ನೆಲದಲ್ಲಿಯೇ ನಾವು ಬದುಕುತ್ತಿದ್ದೇವೆ. ದಲಿತರ ಮೇಲಿನ ದೌರ್ಜನ್ಯಗಳು ಕಡಿಮೆಯಾಗುವ ಬದಲು ಹೆಚ್ಚಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪ‍ಡಿಸಿದರು.

ಕೌದಿ ಪ್ರಕಾಶನ ಹಾಗೂ ತಮಟೆ ಮೀಡಿಯಾ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸುಬ್ಬು ಹೊಲೆಯಾರ್ ಅವರ ‘ದುಃಖ ಆರದ ನೆಲದಲ್ಲಿ’ ಪುಸ್ತಕ ಬಿಡುಗಡೆಮಾಡಿ, ಮಾತನಾಡಿದರು. 

‘ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಮಾಹಿತಿ ಪ್ರಕಾರ 2021ರ ನಂತರ ಪರಿಶಿಷ್ಟ ಜಾತಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಶೇ 13.1 ರಷ್ಟು ಹೆಚ್ಚಾಗಿದೆ. ಸ್ವತಂತ್ರ ಭಾರತದಲ್ಲಿ ದಲಿತರು, ಹಿಂದುಳಿದವರು ಹಾಗೂ ಶೋಷಿತರ ಮೇಲೆ ನಡೆಯುವ ದೌರ್ಜನ್ಯಗಳು ಕಡಿಮೆಯಾಗುವ ಬದಲು, ಹೆಚ್ಚಾಗುತ್ತಿದೆ. ಎನ್‌ಸಿಆರ್‌ಬಿ ಪ್ರಕಾರ ದೇಶದಲ್ಲಿ ಪ್ರತಿನಿತ್ಯ ಹತ್ತು ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿದೆ. ಅದೆಷ್ಟೋ ಪ್ರಕರಣಗಳ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ADVERTISEMENT

‘ಹಿಂಸಾತ್ಮಕ ಭಾಷೆಗಳ ವಿಜೃಂಭಣೆಯಲ್ಲಿ ನಾವು ಬದುಕುತ್ತಿದ್ದೇವೆ. ಭಾಷಿಕ ಭ್ರಷ್ಟಾಚಾರವನ್ನೂ ಇತ್ತೀಚೆಗೆ ನೋಡುತ್ತಿದ್ದೇವೆ. ಭಾಷೆಯನ್ನು ಕೆಡಿಸುವ ಕೆಲಸ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಕೂಡಿಸುವ ಕವಿ ಮನಸ್ಸು ಅಗತ್ಯ. ಸುಬ್ಬು ಹೊಲೆಯಾರ್ ಅವರು ಸ್ವಂತ ಅನುಭವದ ಮೂಲಕ ದಲಿತ ಕಥನವನ್ನು ಕಟ್ಟಿಕೊಟ್ಟಿದ್ದಾರೆ’ ಎಂದರು. 

ಕೃತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ನೆಲ್ಲುಕುಂಟೆ ವೆಂಕಟೇಶ್, ‘ದೇಶದಲ್ಲಿ ಪ್ರತಿಯೊಬ್ಬರು ತಮ್ಮ ಕಾಲು ಇನ್ನೊಬ್ಬರ ತಲೆಯ ಮೇಲಿದೆಯೆಂಬ ಅಹಂಕಾರ ಹೊಂದಿದ್ದಾರೆ. ಇದರಿಂದಾಗಿ ಕಟ್ಟ ಕಡೆಯ ವ್ಯಕ್ತಿಯ ದುಃಖ ಅರ್ಥವಾಗುತ್ತಿಲ್ಲ. ಕೃತಿ ಆತ್ಮಕಥೆಯ ಮಾದರಿಯಲ್ಲಿದೆ’ ಎಂದು ಹೇಳಿದರು.  

ಲೇಖಕ ಸುಬ್ಬು ಹೊಲೆಯಾರ್, ಎನ್. ವೆಂಕಟೇಶ್ ಹಾಗೂ ಕೆ.ಪಿ. ಅಶ್ವಿನಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.