ಬೆಂಗಳೂರು: ‘ಹಣ ಅಕ್ರಮ ವರ್ಗಾವಣೆಯ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಯಾಕೆ ಇ.ಡಿ ನೋಟಿಸ್ ಕೊಟ್ಟಿಲ್ಲ’ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಪಕ್ಷಕ್ಕೆ ಯಾಕೆ ನೋಟಿಸ್ ಕೊಡಲಾಗಿದೆ. ಕೇಜ್ರಿವಾಲ್ ಮೇಲೆ ಯಾವ ಆರೋಪವೂ ಇಲ್ಲ. ಕೆಲವು ಸಾಕ್ಷ್ಯಗಳನ್ನು ಬಳಸಿಕೊಂಡು ಅವರನ್ನು ಬಂಧಿಸಲಾಗಿದೆ’ ಎಂದು ಕಿಡಿಕಾರಿದರು.
‘350 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿರುವ ಶೋಭಾ ಮೇಲೆ ₹ 48 ಕೋಟಿ ಹಣ ವರ್ಗಾವಣೆ ಆರೋಪವಿದೆ. ಇದು 2010ರಲ್ಲಿ ನಡೆದ ಹಗರಣ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಈ ಪ್ರಕರಣವಿದೆ. ಶೋಭಾ ಮೇಲೆ 24 ಗಂಭೀರ ಆರೋಪಗಳೂ ಇವೆ. ಇಷ್ಟಿದ್ದರೂ ಅವರನ್ನು ಕೇಂದ್ರದಲ್ಲಿ ಹೇಗೆ ಮಂತ್ರಿ ಮಾಡಲಾಗಿದೆ’ ಎಂದು ಪ್ರಶ್ನಿಸಿದರು.
ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ.ರಾಜೀವ್ ಗೌಡ ಅವರು, ‘ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಇ.ಡಿ ಪ್ರಕರಣದಲ್ಲಿ ಆರೋಪಿ. ಅವರು ಇಲ್ಲಿ ನಾಮಪತ್ರ ಸಲ್ಲಿಕೆಗೂ ಮೊದಲು ಅವರ ಮೇಲೆ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.