ಕೊಲಂಬೊ: ಶ್ರೀಲಂಕಾದ ಜಲ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 18 ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, 3 ಮೀನುಗಾರಿಕಾ ಹಡಗುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ಶನಿವಾರ ರಾತ್ರಿಯ ಶೋಧ ಕಾರ್ಯಾಚರಣೆ ವೇಳೆ ಉತ್ತರ ಸಮುದ್ರದ ನೆಡುಂತೀವು ದ್ವೀಪದ ಸಮೀಪ ಮೀನುಗಾರರನ್ನು ಬಂಧಿಸಲಾಗಿದೆ.
ಬಂಧಿತರನ್ನು ಕಂಕೆಸಂತುರೈ ಮೀನುಗಾರಿಕಾ ಬಂದರಿಗೆ ಕರೆದೊಯ್ದು ಮುಂದಿನ ಕಾನೂನು ಪ್ರಕ್ರಿಯೆ ನಡೆಸುವುದಾಗಿ ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಗಯನ್ ವಿಕ್ರಮಸೂರ್ಯ ತಿಳಿಸಿದ್ದಾರೆ.
ತಮ್ಮ ದೇಶಕ್ಕೆ ಸೇರಿದ ಜಲ ಪ್ರದೇಶದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಳೆದ ವಾರ ನಾಲ್ವರು ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಂಧಿಸಿತ್ತು.
ಈ ಹೊಸ ಪ್ರಕರಣಗಳನ್ನು ಹೊರತುಪಡಿಸಿ, ಅಕ್ರಮ ಮೀನುಗಾರಿಕೆ ಆರೋಪದಡಿ ಈ ವರ್ಷ 180 ಮೀನುಗಾರರನ್ನು ಬಂಧಿಸಲಾಗಿದ್ದು, 25 ಮೀನುಗಾರಿಕಾ ಬೋಟ್ಗಳನ್ನು ಶ್ರೀಲಂಕಾ ನೌಕಾಪಡೆ ವಶಕ್ಕೆ ಪಡೆದಿದೆ ಎಂದು ಶ್ರೀಲಂಕಾ ಅಧಿಕಾರಿಗಳು ತಿಳಿಸಿದ್ದಾರೆ.
2023ರಲ್ಲೂ 240 ಮಂದಿ ಬಂಧನವಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಈ ಎಲ್ಲರನ್ನು ತಮಿಳುನಾಡು ಮತ್ತು ಶ್ರೀಲಂಕಾವನ್ನು ಬೇರ್ಪಡಿಸುವ ಪಾಕ್ ಜಲಸಂಧಿ ಬಳಿಯೇ ಬಂಧಿಸಲಾಗಿದೆ. ಎರಡೂ ರಾಷ್ಟ್ರಗಳ ಮೀನುಗಾರಿಕೆಗೆ ಸಮೃದ್ಧ ಪ್ರದೇಶ ಇದಾಗಿದೆ.
ಮೀನುಗಾರರ ವಿವಾದವು ಭಾರತ ಮತ್ತು ಶ್ರೀಲಂಕಾ ಬಾಂಧವ್ಯಕ್ಕೆ ತೊಡಲಾಗಿದೆ ಎಂದು ವರದಿ ತಿಳಿಸಿದೆ. ಕೆಲವೊಮ್ಮೆ, ಶ್ರೀಲಂಕಾದ ನೌಕಾ ಪಡೆ ಅಧಿಕಾರಿಗಳು ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿರುವ ಪ್ರಕರಣಗಳೂ ವರದಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.