ADVERTISEMENT

ಟರ್ಬುಲೆನ್ಸ್‌ಗೆ ಸಿಲುಕಿದ ವಿಮಾನ | 22 ಮಂದಿ ಬೆನ್ನುಹುರಿ, 6 ಮಂದಿ ಮಿದುಳಿಗೆ ಗಾಯ

ಪಿಟಿಐ
Published 24 ಮೇ 2024, 3:29 IST
Last Updated 24 ಮೇ 2024, 3:29 IST
   

ಸಿಂಗಪುರ: ಮೇ 21ರಂದು ಸಿಂಗಪುರ ಏರ್‌ಲೈನ್ಸ್ ಕಂಪನಿಯ ವಿಮಾನವೊಂದು ಹಿಂದೂ ಮಹಾಸಾಗರದ ಮೇಲೆ ಸಾಗುತ್ತಿದ್ದಾಗ ತೀವ್ರ ಟರ್ಬುಲೆನ್ಸ್‌ಗೆ (ಗಾಳಿಯ ಏರುಪೇರಿನಿಂದ ಆಗುವಕ್ಷೋಭೆ) ಸಿಲುಕಿ, ಮೂರೇ ನಿಮಿಷಗಳ ಅವಧಿಯಲ್ಲಿ ಆರು ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿದಿತ್ತು. ಇದರ ಪರಿಣಾಮವಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬ್ರಿಟನ್‌ ಪ್ರಜೆಯೊಬ್ಬರು ಮೃತಪಟ್ಟಿದ್ದರು, ಇದೀಗ, ವಿಮಾನದಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿರುವುದು ಬೆಳಕಿಗೆ ಬಂದಿದೆ.

22 ಪ್ರಯಾಣಿಕರಿಗೆ ಬೆನ್ನುಹುರಿ ಗಾಯ, 6 ಮಂದಿಗೆ ಮಿದುಳು ಮತ್ತು ಬುರುಡೆಯಲ್ಲಿ ಗಾಯಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

20 ಮಂದಿ ಇನ್ನೂ ತೀವ್ರ ನಿಗಾ ಘಟಕದಲ್ಲಿದ್ದು, ಯಾರಿಗೂ ಜೀವಕ್ಕೆ ಅಪಾಯವಿಲ್ಲ ಎಂದು ಬ್ಯಾಂಕಾಕ್‌ನ ಸಮಿತಿವೇಜ್ ಶ್ರೀನಕರಿನ್ ಆಸ್ಪತ್ರೆಯ ನಿರ್ದೇಶಕ ಡಾ. ಅದಿನುನ ಕಿಟ್ಟಿರಾಟನಪೈಬುಲ್ ಹೇಳಿರುವುದಾಗಿ ದಿ ಸ್ಟ್ರೇಟ್ ಟೈಮ್ಸ್ ವರದಿ ಮಾಡಿದೆ.

ADVERTISEMENT

ಚಿಕಿತ್ಸೆ ಪಡೆಯುತ್ತಿರುವ ಅತ್ಯಂತ ಹಿರಿಯ ಪ್ರಯಾಣಿಕರಿಗೆ 83 ವರ್ಷ ವಯಸ್ಸಾಗಿದ್ದು, ಕಿರಿಯ ವಯಸ್ಸಿನ ಪ್ರಯಾಣಿಕರೆಂದರೆ 2 ವರ್ಷ ಮಗು ಚಿಕಿತ್ಸೆ ಪಡೆಯುತ್ತಿದೆ.

ಲಂಡನ್‌ನಿಂದ ಸಿಂಗಪುರಕ್ಕೆ ತೆರಳುತ್ತಿದ್ದ SQ321 ವಿಮಾನವು ಬ್ಯಾಂಕಾಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. 40 ಪ್ರಯಾಣಿಕರು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಟೇಕಾಫ್ ಆಗಿ 10 ಗಂಟೆಗಳ ಬಳಿಕ ವಿಮಾನವು ಇರಾವಾಡಿ ಬಳಿ 37,000 ಅಡಿ ಎತ್ತರದಲ್ಲಿದ್ದಾಗ ಟರ್ಬುಲೆನ್ಸ್‌ನ ಹೊಡೆತಕ್ಕೆ ಸಿಕ್ಕಿತ್ತು. ಬಳಿಕ, ಮೂರೇ ನಿಮಿಷಗಳ ಅವಧಿಯಲ್ಲಿ ಆರು ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿದಿತ್ತು. ಘಟನೆಯಲ್ಲಿ 60ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದರು.

65 ಪ್ರಯಾಣಿಕರು ಮತ್ತು ಇಬ್ಬರು ವಿಮಾನದ ಸಿಬ್ಬಂದಿ ಚಿಕಿತ್ಸೆಗಾಗಿ ಈಗಲೂ ಥಾಯ್ಲೆಂಡ್ ರಾಜಧಾನಿಯಲ್ಲೇ ಇದ್ದಾರೆ.

ವಿಮಾನಕ್ಕೆ ಟರ್ಬುಲೆನ್ಸ್ ಎದುರಾಗುತ್ತಿದ್ದಂತೆ 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಇದ್ದ ವಿಮಾನವನ್ನು ಪೈಲೆಟ್ ಬ್ಯಾಂಕಾಕ್‌ನ ಸುವರ್ಣ ಭೂಮಿ ವಿಮಾನ ನಿಲ್ದಾಣದತ್ತ ತಿರುಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.