ADVERTISEMENT

ಹಸೀನಾ ಸರ್ಕಾರ ಪತನದ ಬಳಿಕ ನಡೆದ ಹಿಂಸಾಚಾರದಲ್ಲಿ 232 ಮಂದಿ ಸಾವು: ವರದಿ

ಪಿಟಿಐ
Published 8 ಆಗಸ್ಟ್ 2024, 13:01 IST
Last Updated 8 ಆಗಸ್ಟ್ 2024, 13:01 IST
<div class="paragraphs"><p>ಬಾಂಗ್ಲಾದೇಶದ ಬಾವುಟ ಹಿಡಿದ ವ್ಯಕ್ತಿ</p></div>

ಬಾಂಗ್ಲಾದೇಶದ ಬಾವುಟ ಹಿಡಿದ ವ್ಯಕ್ತಿ

   

ರಾಯಿಟರ್ಸ್‌ ಚಿತ್ರ

ಢಾಕಾ: ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸುಮಾರು 560 ಮಂದಿ ಮೃತಪಟ್ಟಿದ್ದಾರೆ. ಹಸೀನಾ ನೇತೃತ್ವದ ಸರ್ಕಾರ ಪತನದ ಬಳಿಕ ದೇಶದಾದ್ಯಂತ ಭುಗಿಲೆದ್ದ ಹಿಂಸಾಚಾರದಲ್ಲಿ 232 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ADVERTISEMENT

ಢಾಕಾದಲ್ಲಿ ಪ್ರಧಾನಿ ತಂಗುವ ಅರಮನೆಗೆ ಪ್ರತಿಭಟನಾಕಾರರು ನುಗ್ಗಿದ್ದರು. ದೇಶದಲ್ಲಿ ಉಂಟಾದ ಅರಾಜಕತೆಗೆ ನಲುಗಿದ ಶೇಕ್‌ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದರು.

ಹಸೀನಾ ಅವರು ಸೋಮವಾರ (ಆಗಸ್ಟ್‌ 5) ರಾಜೀನಾಮೆ ನೀಡಿದ ಬಳಿಕ ಬುಧವಾರ ಸಂಜೆಯವರೆಗೂ ಸುಮಾರು 232 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರೋಥೋಮ್ ಅಲೋ ಬಂಗಾಳಿ ಪತ್ರಿಕೆ ವರದಿ ಮಾಡಿದೆ.

ಹಿಂಸಾಚಾರದಿಂದ ಕಂಗೆಟ್ಟ ಪೊಲೀಸರು ಕರ್ತವ್ಯಕ್ಕೆ ಗೈರಾಗಿದ್ದು, ಮತ್ತಷ್ಟು ಸಾವು–ನೋವುಗಳಿಗೆ ಕಾರಣವಾಯಿತು. ಬುಧವಾರದಂದು ಹೊಸದಾಗಿ ನೇಮಕಗೊಂಡ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಎಂ.ಡಿ. ಮೈನುಲ್ ಇಸ್ಲಾಂ ಅವರು ದೇಶದಾದ್ಯಂತ ಎಲ್ಲಾ ಪೊಲೀಸರು 24 ಗಂಟೆಗಳ ಒಳಗೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದರು.

ಗಾಜಿಪುರ ಜಿಲ್ಲೆಯ ಕಾಶಿಂಪುರದ ಹೈ–ಸೆಕ್ಯುರಿಟಿ ಜೈಲಿನಿಂದ 209 ಖೈದಿಗಳು ಮಂಗಳವಾರ ಓಡಿ ಹೋಗಿದ್ದಾರೆ. ಈ ವೇಳೆ ಖೈದಿಗಳನ್ನು ತಡೆಯಲು ಮುಂದಾದ ಜೈಲು ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಮೂವರು ಉಗ್ರರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ.

ಜುಲೈ 16ರಿಂದ ಆರಂಭವಾದ ಪ್ರತಿಭಟನೆಯಲ್ಲಿ ಸರಿ ಸುಮಾರು 560 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಾಂಗ್ಲಾ ಸ್ವಾತಂತ್ರ್ಯ ಸಮರದಲ್ಲಿ ಭಾಗಿಯಾಗಿದ್ದವರ ಸಂಬಂಧಿಕರಿಗೆ ಸರ್ಕಾರದ ಹುದ್ದೆಗಳಲ್ಲಿ ಶೇ 30ರಷ್ಟು ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮೀಸಲು ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂಬುದು ಪ್ರತಿಭಟನಕಾರರ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.