ಕೊಲೊಂಬೊ: ಆನ್ಲೈನ್ ಹಣಕಾಸು ವಂಚನೆಗಳಲ್ಲಿ ತೊಡಗಿರುವ ಗುಂಪಿನ ಭಾಗವಾಗಿರುವ ಕನಿಷ್ಠ 60 ಭಾರತೀಯ ಪ್ರಜೆಗಳನ್ನು ಶ್ರೀಲಂಕಾದ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಂಧಿಸಿದೆ.
ಕೊಲಂಬೊದ ಉಪನಗರಗಳಾದ ಮಡಿವೇಲಾ ಮತ್ತು ಬಟ್ಟರಮುಲ್ಲಾ ಹಾಗೂ ಪಶ್ಚಿಮ ಕರಾವಳಿ ಪಟ್ಟಣವಾದ ನೆಗೊಂಬೊದಿಂದ ಅವರನ್ನು ಬಂಧಿಸಲಾಗಿದೆ.
ಈ ಪ್ರದೇಶಗಳಲ್ಲಿ ಏಕಕಾಲದಲ್ಲಿ ಸಿಐಡಿ ದಾಳಿ ನಡೆಸಿದ್ದು, 135 ಮೊಬೈಲ್ ಫೋನ್ಗಳು ಮತ್ತು 57 ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹತ್ವದ ಸಾಕ್ಷ್ಯಾಧಾರಗಳು ಲಭಿಸಿವೆ. ವಂಚಕರಿಗೆ ದುಬೈ ಮತ್ತು ಅಫ್ಗಾನಿಸ್ತಾನದಲ್ಲಿನ ಅಂತರರಾಷ್ಟ್ರೀಯ ನಂಟು ಇರುವುದು ಬಹಿರಂಗಗೊಂಡಿದೆ. ವಂಚನೆಗೆ ಒಳಗಾದ ಸಂತ್ರಸ್ತರಲ್ಲಿ ಸ್ಥಳೀಯರು ಮತ್ತು ವಿದೇಶಿಯರು ಸೇರಿದ್ದಾರೆ ಎಂದು ಪೊಲೀಸ್ ವಕ್ತಾರ ಎಸ್ಎಸ್ಪಿ ನಿಹಾಲ್ ತಾಲ್ದುವಾ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಸಂವಹನಕ್ಕಾಗಿ ನಗದು ಭರವಸೆ ನೀಡಿ ವಾಟ್ಸಾಪ್ ಗ್ರೂಪ್ಗೆ ಸೇರುವಂತೆ ಆಮಿಷವೊಡ್ಡಿ ವಂಚಿಸಲಾಗಿರುವ ಪ್ರಕರಣದ ಸಂತ್ರಸ್ತರೊಬ್ಬರು ನೀಡಿದ ದೂರು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಆರಂಭಿಕವಾಗಿ ಹಣ ಠೇವಣಿ ಇಡುವಂತೆ ಸಂತ್ರಸ್ತರ ಮೇಲೆ ವಂಚಕರು ಒತ್ತಡ ಹೇರಿರುವುದು ತನಿಖೆಯಲ್ಲಿ ಕಂಡುಬಂದಿದೆ. ಪೆರಾಡೆನಿಯಾದಲ್ಲಿ ತಂದೆ-ಮಗ ಇಬ್ಬರೂ ವಂಚಕರಿಗೆ ನೆರವು ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಲಂಕಾದ ಸುದ್ದಿಪತ್ರಿಕೆ ‘ಡೈಲಿ ಮಿರರ್’ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.