ಜಕಾರ್ತ (ಎಪಿ): ಇಂಡೊನೇಷ್ಯಾದ ಸುಮಾತ್ರ ದ್ವೀಪದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 10 ಜನ ಮೃತಪಟ್ಟು, ಕನಿಷ್ಠ 400 ಜನರು ಗಾಯಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ.
ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿಶುಕ್ರವಾರ ಬೆಳಿಗ್ಗೆ ಸಂಭವಿಸಿದ ಈ ಭೂಕಂಪದಲ್ಲಿ ಕುಸಿದುಬಿದ್ದ ಮನೆಗಳ ಅವಶೇಷಗಳಿಂದ ಶನಿವಾರ ತಡರಾತ್ರಿ ಎರಡು ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಉಪಶಮನ ಸಂಸ್ಥೆಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.
ಪಸಮನ್ ಜಿಲ್ಲೆಯಲ್ಲಿ ಆರು ಮತ್ತು ಪಕ್ಕದ ಪಶ್ಚಿಮ ಪಸಮನ್ ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಭೂಕಂಪದ ತೀವ್ರತೆಗೆ ನಲುಗಿರುವ ಸುತ್ತಮುತ್ತಲಿನ ಬೆಟ್ಟ ಸಾಲುಗಳಿಂದ ಕೆಳಗೆ ಬಿದ್ದ ಟನ್ಗಟ್ಟಲೆ ಮಣ್ಣಿನಲ್ಲಿ ನಾಲ್ವರು ಸಿಲುಕಿಕೊಂಡಿರುವ ಮಾಹಿತಿ ಇದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದರು.
13 ಸಾವಿರಕ್ಕಿಂತ ಹೆಚ್ಚು ಜನರನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಪಸಮಾನ್ ಮತ್ತು ಪಶ್ಚಿಮ ಪಸಮಾನ್ ಜಿಲ್ಲೆಗಳ ಪ್ರದೇಶಗಳು ಭೂಪಂಪದಿಂದ ಧ್ವಂಸಗೊಂಡಿವೆ. ಇಲ್ಲಿಯ 1,400 ವಸತಿ ಪ್ರದೇಶಗಳು ಮತ್ತು ಇತರ ಕಟ್ಟಡಗಳು ಹಾನಿಗೊಂಡಿವೆ ಎಂದು ಮುಹಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.