ADVERTISEMENT

ಮುಂಬೈನಲ್ಲಿ ತೈವಾನ್ ಕಚೇರಿ: ಭಾರತದ ವಿರುದ್ಧ ಪ್ರತಿಭಟನೆ ದಾಖಲಿಸಿದ ಚೀನಾ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 4:53 IST
Last Updated 18 ಅಕ್ಟೋಬರ್ 2024, 4:53 IST
   

ಬೀಜಿಂಗ್‌: ತೈವಾನ್‌ ತನ್ನ ತೈಪೇಯಿ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನು (ಟಿಇಸಿಸಿ) ಮುಂಬೈನಲ್ಲಿ ತೆರೆದಿರುವ ಸಂಬಂಧ ಭಾರತದ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿರುವುದಾಗಿ ಚೀನಾ ತಿಳಿಸಿದೆ.

ತೈವಾನ್ ಕೇಂದ್ರಕ್ಕೆ ಸಂಬಂಧಿಸಿದಂತೆ ಮಾದ್ಯಮದವರೊಂದಿಗೆ ಮಾತನಾಡಿರುವ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್‌, 'ಜಗತ್ತಿನಲ್ಲಿರುವುದು ಏಕೈಕ ಚೀನಾ. ತೈವಾನ್‌, ಚೀನಾದ ಅವಿಭಾಜ್ಯ ಅಂಗವಾಗಿದೆ' ಎಂದು ಹೇಳಿದ್ದಾರೆ.

'ಪರಸ್ಪರ ಪ್ರತಿನಿಧಿ ಕಚೇರಿಗಳನ್ನು ತೆರೆಯುವುದೂ ಸೇರಿದಂತೆ, ಯಾವುದೇ ರಾಷ್ಟ್ರವು ತೈವಾನ್‌ನೊಂದಿಗೆ ಹೊಂದಿರುವ ಅಧಿಕೃತ ಸಂಪರ್ಕ ಮತ್ತು ಸಂವಹನವನ್ನು ಚೀನಾ ಬಲವಾಗಿ ವಿರೋಧಿಸುತ್ತದೆ. ಭಾರತದ ವಿರುದ್ಧ ಪ್ರತಿಭಟನೆ ದಾಖಲಿಸಿದ್ದೇವೆ' ಎಂದು ತಿಳಿಸಿದ್ದಾರೆ.

ADVERTISEMENT

ಚೀನಾ–ಭಾರತದ ಬಾಂಧವ್ಯಕ್ಕೆ ರಾಜಕೀಯ ಬದ್ಧತೆಯೇ ಅಡಿಪಾಯವಾಗಿದೆ. ಅದಕ್ಕೆ ಅನುಗುಣವಾಗಿ ಭಾರತ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

'ಚೀನಾದೊಂದಿಗಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ತೊಡಕು ಆಗದಂತೆ ರಾಜಕೀಯ ಬದ್ಧತೆಯನ್ನು ಭಾರತ ಕಟ್ಟುನಿಟ್ಟಾಗಿ ಪಾಲಿಸಬೇಕು. ತೈವಾನ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿವೇಚನೆಯಿಂದ ಮತ್ತು ಸೂಕ್ತ ರೀತಿಯಲ್ಲಿ ಇತ್ಯರ್ಥಸುವುದಕ್ಕಾಗಿ ತೈವಾನ್‌ ಜೊತೆ ಯಾವುದೇ ರೀತಿಯ ಅಧಿಕೃತ ಸಂವಾದನ್ನು ನಡೆಸಬಾರದು' ಎಂದು ಮಾವೊ ಹೇಳಿದ್ದಾರೆ.

ಟಿಇಸಿಸಿಯ ಶಾಖೆಯನ್ನು ಮುಂಬೈನಲ್ಲಿ ಬುಧವಾರ ಆರಂಭಿಸಲಾಗಿದೆ. ದೆಹಲಿ ಮತ್ತು ಚೆನ್ನೈನಲ್ಲಿಯೂ ಟಿಇಸಿಸಿ ಕಚೇರಿಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.