ADVERTISEMENT

ತೃಪ್ತಿ, ಸಂತೋಷದ ಮಾರ್ಗ ತೋರಿಸಿದ ಭಾರತ: ಮೋಹನ್ ಭಾಗವತ್

ಮೂರನೇ ವಿಶ್ವ ಹಿಂದೂ ಕಾಂಗ್ರೆಸ್‌ ಅಧಿವೇಶನದಲ್ಲಿ ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್ ಭಾಗವತ್

ಪಿಟಿಐ
Published 24 ನವೆಂಬರ್ 2023, 15:40 IST
Last Updated 24 ನವೆಂಬರ್ 2023, 15:40 IST
<div class="paragraphs"><p>ಮೋಹನ್ ಭಾಗವತ್</p></div>

ಮೋಹನ್ ಭಾಗವತ್

   

ಬ್ಯಾಂಕಾಕ್‌ (ಪಿಟಿಐ): ‘ಕಮ್ಯುನಿಸಂ, ಬಂಡವಾಳಶಾಹಿಯ ಪ್ರಯೋಗದಿಂದ ಎಡವುತ್ತಿರುವ ಜಗತ್ತಿಗೆ, ಭಾರತವು ಸಂತೋಷ ಮತ್ತು ತೃಪ್ತಿಯ ಮಾರ್ಗವನ್ನು ತೋರಿಸುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.

ಶುಕ್ರವಾರ ಇಲ್ಲಿ ನಡೆದ ಮೂರನೇ ಹಿಂದೂ ಕಾಂಗ್ರೆಸ್‌ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಪ್ರಪಂಚದಾದ್ಯಂತ ಇರುವ ಹಿಂದೂಗಳು ಪರಸ್ಪರ ಸಂಪರ್ಕದಿಂದಿರಬೇಕು‘ ಎಂದರು.

ADVERTISEMENT

’ಪ್ರತಿಯೊಬ್ಬ ಹಿಂದೂವಿನ ಜೊತೆಗೆ ಸಂಪರ್ಕ ಸಾಧಿಸಬೇಕು. ಈ ಸಂಪರ್ಕವನ್ನು ಬಲಪಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಈ ಮೂಲಕ ಜಗತ್ತಿನಲ್ಲಿರುವ ಪ್ರತಿಯೊಬ್ಬರ ಜತೆ ಸಂಪರ್ಕ ಸಾಧಿಸಿ ಎಲ್ಲರ ಹೃದಯ ಗೆಲ್ಲಬೇಕು’ ಎಂದು ಅವರು ವಿಶ್ವದ ವಿವಿಧೆಡೆಯ ಚಿಂತಕರು, ಹೋರಾಟಗಾರರು, ನಾಯಕರು ಮತ್ತು ಉದ್ಯಮಿಗಳ ಸಭೆಯನ್ನುದ್ದೇಶಿಸಿ ಹೇಳಿದರು.

‘ಎಲ್ಲರನ್ನೂ ನಾವು ಸಂಪರ್ಕಿಸಬೇಕು. ಸೇವೆಯಿಂದಲೇ ನಮ್ಮೊಟ್ಟಿಗೆ ಕರೆದೊಯ್ಯಬೇಕು. ನಮ್ಮೊಳಗೆ ಆ ಶಕ್ತಿಯಿದೆ. ನಿಸ್ವಾರ್ಥ ಸೇವೆಯ ವಿಷಯದಲ್ಲಿ ಪ್ರಪಂಚದಲ್ಲೇ ಛಾಪು ಮೂಡಿಸಿದ್ದೇವೆ. ಇದು ನಮ್ಮ ಸಂಪ್ರದಾಯ, ಮೌಲ್ಯಗಳಲ್ಲೂ ಇದೆ. ಆದ್ದರಿಂದಲೇ ಜನರನ್ನು ತಲುಪಿ, ಅವರ ಹೃದಯ ಬಿಟ್ಟು ಬೇರೆ ಇನ್ನೇನನ್ನು ಗೆಲ್ಲಲ್ಲ’ ಎಂದರು.

‘ಭಾರತವು ಸಂತೋಷ ಮತ್ತು ತೃಪ್ತಿಗೆ ದಾರಿ ಮಾಡಿಕೊಡುತ್ತಿದೆ ಎಂಬುದನ್ನು ಕೋವಿಡ್‌ ಸಾಂಕ್ರಾಮಿಕದ ನಂತರ ಅರಿತಿರುವ ಜಗತ್ತು, ಇದೀಗ ಅವಿರೋಧವಾಗಿ ಈ ಬಗ್ಗೆಯೇ ಯೋಚಿಸುತ್ತಿದ್ದು, ಹಿಂದೂ ಧರ್ಮದ ಕಡೆಗೆ ತಿರುಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.