ಇಸ್ಲಾಮಾಬಾದ್: ಗಡಿಯಾಚೆಗಿನ ಚಟುವಟಿಕೆಗಳು ಭಯೋತ್ಪಾದನೆ, ಉಗ್ರವಾದ ಮತ್ತು ಪ್ರತ್ಯೇಕವಾದದಿಂದ ಕೂಡಿದ್ದರೆ, ವಾಣಿಜ್ಯ, ಇಂಧನ ಮತ್ತು ಸಂಪರ್ಕದಂತಹ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿ ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಹೇಳಿದ್ದಾರೆ. ಆ ಮೂಲಕ ಪಾಕಿಸ್ತಾನಕ್ಕೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ಇಸ್ಲಾಮಾಬಾದ್ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಸಮಾವೇಶದಲ್ಲಿ ಭಾರತೀಯ ನಿಯೋಗವು ಜೈಶಂಕರ್ ನೇತೃತ್ವದಲ್ಲಿ ಪಾಲ್ಗೊಂಡಿದೆ.
ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಸಚಿವ, 'ಸಹಕಾರವು ಪರಸ್ಪರ ಗೌರವ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರಗಳ ಸಾರ್ವಭೌಮತೆಯನ್ನು ಗೌರವಿಸುವುದರ ಆಧಾರದಲ್ಲಿ ಇರಬೇಕು' ಎಂದು ಪ್ರತಿಪಾದಿಸಿದ್ದಾರೆ.
ಎಲ್ಲರೂ ಒಟ್ಟಾಗಿ ಸಾಗಿದರೆ ಮಾತ್ರ, 'ಎಸ್ಸಿಒ ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರ ಮತ್ತು ಲಾಭ ಸಾಧ್ಯ' ಎಂದು ಒತ್ತಿ ಹೇಳಿದ್ದಾರೆ.
'ಸಹಕಾರವು ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗುರುತಿಸಬೇಕು. ಯಾವುದೇ ರೀತಿಯ ಏಕಪಕ್ಷೀಯ ಕಾರ್ಯಸೂಚಿಗಳಿಲ್ಲದೆ ಪ್ರಾಮಾಣಿಕ ಪಾಲುದಾರಿಕೆಯಲ್ಲಿ ಅದು ರಚನೆಯಾಗಬೇಕು. ಮುಖ್ಯವಾಗಿ ವಾಣಿಜ್ಯ ಮತ್ತು ಸಂಪರ್ಕದ ವಿಚಾರದಲ್ಲಿ ಜಾಗತಿಕ ಕ್ರಮಗಳನ್ನು ಅನುಸರಿಸಿದರೆ ಪ್ರಗತಿ ಸಾಧ್ಯವಿಲ್ಲ' ಎಂದು ಸಲಹೆ ನೀಡಿದ್ದಾರೆ. ಆ ಮೂಲಕ ಪ್ರಮುಖ ವಿಚಾರಗಳಲ್ಲಿ ಮೂಗು ತೂರಿಸುವ ಚೀನಾದ ನಡೆಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.