ADVERTISEMENT

ನೇಪಾಳದಲ್ಲಿ ವಿಮಾನ ಪತನ: 18 ಸಾವು; ಪೈಲಟ್‌ಗಳಿಗೆ ‌ತರಬೇತಿ ಕೊರತೆ

ತೀವ್ರ ಗಾಯಗೊಂಡಿರುವ ಪೈಲಟ್‌ * ಪತನಕ್ಕೆ ತಿಳಿದುಬಾರದ ಕಾರಣ

ಏಜೆನ್ಸೀಸ್
Published 24 ಜುಲೈ 2024, 23:22 IST
Last Updated 24 ಜುಲೈ 2024, 23:22 IST
<div class="paragraphs"><p>ನೇಪಾಳದ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೂರ್ಯ ಏರ್‌ಲೈನ್ಸ್‌ನ ವಿಮಾನ ಬುಧವಾರ ಪತನಗೊಂಡಿತು</p></div>

ನೇಪಾಳದ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೂರ್ಯ ಏರ್‌ಲೈನ್ಸ್‌ನ ವಿಮಾನ ಬುಧವಾರ ಪತನಗೊಂಡಿತು

   

(ರಾಯಿಟರ್ಸ್ ಚಿತ್ರ)

ಕಠ್ಮಂಡು: ಇಲ್ಲಿನ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೊಖರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದ ವಿಮಾನವೊಂದು ಬುಧವಾರ ಪತನಗೊಂಡಿದೆ. ವಿಮಾನದಲ್ಲಿದ್ದ 19 ಮಂದಿಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ವಿಮಾನದ ಪೈಲಟ್‌ ಮಾತ್ರವೇ ಬದುಕುಳಿದಿದ್ದು, ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ADVERTISEMENT

ಟೇಕ್‌ ಆಫ್‌ ಆಗುತ್ತಿದ್ದಂತೆಯೇ ವಿಮಾನವು ಪತನಗೊಂಡಿದೆ. ಟೇಕ್‌ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ಬಲಕ್ಕೆ ವಾಲಿದೆ ಮತ್ತು ರನ್‌ವೇಗೆ ಅಪ್ಪಳಿಸಿದೆ. ಬೆಳಿಗ್ಗೆ ಸುಮಾರು 11.11 ಗಂಟೆಗೆ ಈ ಅವಘಡ ಸಂಭವಿಸಿದ್ದು, 15 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೂವರು ಮೃತಪಟ್ಟಿದ್ದಾರೆ. ನೇಪಾಳದ ದೇಶೀಯ ವಿಮಾನಯಾನ ಸಂಸ್ಥೆ ಸೂರ್ಯ ಏರ್‌ಲೈನ್ಸ್‌ನ ವಿಮಾನ ಇದಾಗಿದೆ.

‘ಯಾಕಾಗಿ ವಿಮಾನವು ಪತನಗೊಂಡಿತು ಎನ್ನುವುದು ತಿಳಿದುಬಂದಿಲ್ಲ’ ಎಂದು ತ್ರಿಭುವನ್‌ ವಿಮಾನ ನಿಲ್ದಾಣದ ಮುಖ್ಯಸ್ಥ ಜಗನ್ನಾಥ ನಿರೌಲಾ ಮಾಹಿತಿ ನೀಡಿದ್ದಾರೆ. ‘ವಿಮಾನವು ಪತನಗೊಂಡಿದ್ದನ್ನು ನಮಗೆ ಟ್ರ್ಯಾಕ್‌ ಮಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ, ವಿಮಾನದಲ್ಲಿ ಅತ್ಯಾಧುನಿಕವಾದ ಎಡಿಎಸ್‌–ಬಿ ಟ್ರಾನ್ಸ್‌ಸ್ಪಾಂಡರ್‌ ಅಳವಡಿಸಿರಲಿಲ್ಲ’ ಎಂದು ಫೈಟ್‌ಟ್ರೇಡರ್‌ 24 ಸಂಸ್ಥೆ ಹೇಳಿದೆ. ಟ್ರಾನ್ಸ್‌ಸ್ಪಾಂಡರ್‌ ಎಂದರೆ, ವಿಮಾನ ಹಾರಾಟದ ವೇಳೆ ವಿಮಾನವು ಎಲ್ಲಿದೆ ಎನ್ನುವುದನ್ನು ಏರ್‌ ಟ್ರಾಫಿಕ್‌ ಕಂಟ್ರೋಲರ್‌ಗೆ ರೇಡಿಯೊ ತರಂಗಾಂತರಗಳ ಮೂಲಕ ತಿಳಿಸುವ ಯಂತ್ರವಾಗಿದೆ.

ರನ್‌ವೇಗೆ ಬಂದು ಅಪ್ಪಳಿಸುತ್ತಿದ್ದಂತೆಯೇ ವಿಮಾನವು ಹೊತ್ತಿ ಉರಿದಿದೆ. ರನ್‌ವೇನಲ್ಲಿಯೇ ಇದ್ದ ಕೆಲವು ಸಿಬ್ಬಂದಿ ರಕ್ಷಣೆಗೆ ಧಾವಿಸಿದರಾದರೂ ಬೆಂಕಿಯ ತಾಪ ಅವರನ್ನು ಹಿಂದಕ್ಕೆ ಸರಿಯುವಂತೆ ಮಾಡಿತು. ನಂತರ, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ನೇಪಾಳ ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಪತನಗೊಂಡ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಸಂಬಂಧ ಕೆಲಕಾಲ ತ್ರಿಭುವನ್‌ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ವಿಮಾನ ಹಾರಾಟವು ಪುನರಾರಂಭಗೊಂಡಿದೆ.

ಕೆನಡಾದ ಬೊಂಬಾರ್ಡಿಯರ್‌ ಎನ್ನುವ ಸಂಸ್ಥೆ ‘ಬೊಂಬಾರ್ಡಿಯರ್‌ ಸಿಆರ್‌ಜೆ–200’ ವಿಮಾನವನ್ನು ನಿರ್ಮಿಸಿದೆ. ಈ ವಿಮಾನವನ್ನು ಸೂರ್ಯ ಏರ್‌ಲೈನ್ಸ್ ಖರೀದಿಸಿದೆ. ಇದೇ ವಿಮಾನವೇ ಈಗ ಪತನಗೊಂಡಿರುವುದು. ಇದೇ ಮಾದರಿಯ ವಿಮಾನವು ಸೂರ್ಯ ಸಂಸ್ಥೆಯ ಬಳಿ ಇನ್ನೊಂದು ಇದೆ. ಈಗ ಕೆನಡಾ ಸಂಸ್ಥೆಯ ಬಗೆಗೆ ಹಲವು ಪ್ರಶ್ನೆಗಳು ಮೂಡುತ್ತಿವೆ. ಸಂಸ್ಥೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

****

ಹಾರಾಟ ನಡೆಸಲು ವಿಮಾನವು ಸುಸ್ಥಿತಿಯಲ್ಲಿ ಇದೆಯೇ ಎನ್ನುವುದನ್ನು ಪರೀಕ್ಷಿಸಲು ವಿಮಾನ ಹಾರಾಟ ನಡೆಸಲಾಗುತ್ತಿತ್ತು

-ಮುಖೇಶ್‌ ಖಾನಲ್‌ ಸೂರ್ಯ ಏರ್‌ಲೈನ್ಸ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ

****

ಘಟನೆಯಿಂದ ಮನನೊಂದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪತನಕ್ಕೆ ಕಾರಣಗಳನ್ನು ತಿಳಿದುಕೊಳ್ಳಲು ಅಧಿಕಾರಿಗಳ ಜೊತೆಗೂ ಮಾತನಾಡಿದ್ದೇನೆ

-ಕೆ.ಪಿ. ಶರ್ಮಾ ಓಲಿ ನೇಪಾಳ ಪ್ರಧಾನಿ

****

ಮಗುವೂ ಸೇರಿದಂತೆ ಕಮರಿದ ಜೀವಗಳು

ವಿಮಾನ ಪತನ ಸುದ್ದಿ ಹೊರಬರುತ್ತಿದ್ದಂತೆಯೇ ವಿಮಾನದಲ್ಲಿದ್ದವರ ವಿವರಗಳೂ ಹೊರಬಂದವು. ವಿಮಾನದಲ್ಲಿದ್ದ 18 ಜನರು ಸೂರ್ಯ ಏರ್‌ಲೈನ್ಸ್‌ನ ಸಿಬ್ಬಂದಿ ಎನ್ನಲಾಗಿತ್ತು. ಇನ್ನೊಬ್ಬರು ಯೆಮೆನ್‌ ದೇಶದ ಎಂಜಿನಿಯರ್‌ ಆಗಿದ್ದರು. ಆದರೆ ವಿಮಾನದಲ್ಲಿ ಸಂಸ್ಥೆಯ ಸಿಬ್ಬಂದಿಯ ಕುಟುಂಬವೂ ಪ್ರಯಾಣಿಸುತ್ತಿತ್ತು ಎಂದು ಸಂಜೆ ವೇಳೆಗೆ ತಿಳಿದುಬಂದಿದೆ.  ‘ಸೂರ್ಯ ಏರ್‌ಲೈನ್ಸ್‌ ಸಂಸ್ಥೆಯ ತಂತ್ರಜ್ಞ ಮನು ರಾಜ್‌ ಶರ್ಮಾ ಅವರ ಪತ್ನಿ ಹಾಗೂ ನಾಲ್ಕು ವರ್ಷ ಅವರ ಮಗ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಪೈಲಟ್‌ 37 ವರ್ಷದ ಕ್ಯಾಪ್ಟನ್‌ ಮನೀಶ್‌ ಶಕ್ಯಾ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ’ ಎಂದು ನೇಪಾಳದ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.

ಪೈಲಟ್‌ಗಳಿಗೆ ‌ತರಬೇತಿ ಕೊರತೆ

ನೇಪಾಳದಲ್ಲಿ ಪದೇ ಪದೇ ವಿಮಾನ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಇದಕ್ಕೆ ಅಲ್ಲಿನ ಭೌಗೋಳಿಕ ಸಂರಚನೆಯೂ ಮುಖ್ಯ ಕಾರಣ. ವಿಮಾನ ನಿಲ್ದಾಣಗಳನ್ನು ಪರ್ವತಗಳ ಮಧ್ಯೆಯೇ ನಿರ್ಮಿಸಲಾಗಿವೆ. ಈ ಕಾರಣದಿಂದಾಗಿರುವ ಕಿರಿದಾದ ರನ್‌ವೇ ಅಲ್ಲಿನ ಮಂಜು ಕವಿದ ವಾತಾವರಣವೂ ದುರಂತ ಸಂಭವಿಸುವುದಕ್ಕೆ ಕಾರಣಗಳಾಗಿವೆ. ಈ ‌ಎಲ್ಲದರ ಜೊತೆಗೆ ದೇಶದಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದಂತೆ ಕಳಪೆ ಸುರಕ್ಷತಾ ವ್ಯವಸ್ಥೆ ಇದೆ ಎಂದು ಈಗ ಚರ್ಚಿಸಲಾಗುತ್ತಿದೆ. ನುರಿತ ಪೈಲಟ್‌ ಕೂಡ ಈ ಪ್ರದೇಶಗಳಲ್ಲಿ ಹಾರಾಟ ನಡೆಸಲು ಕಷ್ಟಪಡುತ್ತಾರೆ. ಆದರೆ ನೇಪಾಳದ ಪೈಲಟ್‌ಗ‌ಳಿಗೆ ಸರಿಯಾದ ತರಬೇತಿ ದೊರೆಯುತ್ತಿಲ್ಲ ಹಾಗೂ ವಿಮಾನಗಳ ನಿರ್ವಹಣೆ ಕುರಿತು ಅಲಕ್ಷ್ಯ ತೋರಲಾಗುತ್ತದೆ ಎನ್ನಲಾಗಿದೆ. ‘ವಿಮಾನಯಾನ ಸುರಕ್ಷತಾ ವರದಿ’ಯನ್ನು 2023ರಲ್ಲಿ ವಿಮಾನಯಾನ ಸಚಿವಾಲಯವು ಬಿಡುಗಡೆ ಮಾಡಿದೆ. ಇಲ್ಲಿ ಪೈಲಟ್‌ಗಳ ನಿರ್ಲಕ್ಷ್ಯದ ಕುರಿತೂ ಉಲ್ಲೇಖಿಸಲಾಗಿದೆ. ‘ಕಳೆದ 10 ವರ್ಷಗಳಲ್ಲಿ ಸಂಭವಿಸಿದ ದುರಂತಗಳನ್ನು ಗಮನಿಸಿದರೆ ವಿಮಾನದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಇಲ್ಲದಿದ್ದಾಗಲೂ ವಿಮಾನ ಭೂಸ್ಪರ್ಶದ ವೇಳೆ ಅಪಘಾತ ಸಂಭವಿಸಿದೆ. ಇಂಥ ಅಪಘಾತಗಳ ಪ್ರಮಾಣ ಶೇ 93ರಷ್ಟಿದೆ’ ಎಂದು ಸಚಿವಾಲಯ ಹೇಳಿದೆ. ಇತರೆ ಸಮಸ್ಯೆಗಳು.. * ಎಂಜಿನ್‌ನಲ್ಲಿನ ದೋಷಗಳನ್ನು ಸೂಚಿಸುವ ದೀಪವನ್ನು ಸರಿಯಾಗಿ ಗ್ರಹಿಸಿ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗುವ ಪೈಲಟ್‌ * ಸಾಂದರ್ಭಿಕವಾಗಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತ ಜಾಗೃತಿ ಇಲ್ಲದಿರುವುದು * ಪ್ರಮಾಣಿತ ಕಾರ್ಯವಿಧಾನ ವ್ಯವಸ್ಥೆ ಉಲ್ಲಂಘಿಸುವುದು * ಎಂಜಿನ್‌ ವಿಫಲವಾದರೆ ಏನು ಮಾಡಬೇಕು ಎಂಬುದರ ಕುರಿತು ಸರಿಯಾದ ತರಬೇತಿ ಇಲ್ಲದಿರುವುದು * ಮಂಜು ಮುಸುಕಿದ ವಾತಾವರಣದಲ್ಲಿ ಯಾವ ರೀತಿಯಲ್ಲಿ ಭೂಸ್ಪರ್ಶ ಮಾಡಬೇಕು ಎಂಬುದರ ಕುರಿತು ತರಬೇತಿ ಇಲ್ಲದಿರುವುದು * ವಿಮಾನ ಸಿಬ್ಬಂದಿಯೊಂದಿಗಿನ ಸಂವಹನದ ಕುರಿತು ತರಬೇತಿ ಇಲ್ಲದಿರುವುದು

ವಿಮಾನ ಪತನ: ಕೆಲವು ಅವಘಡಗಳು

1955ರಿಂದ ಇಲ್ಲಿಯವರೆಗೆ ನೇಪಾಳದಲ್ಲಿ ವಿಮಾನ ದುರಂತಗಳಲ್ಲಿ ಸುಮಾರು 914 ಜನರು ಮೃತಪಟ್ಟಿದ್ದಾರೆ.

1955ರಲ್ಲಿ ಮೊದಲ ವಿಮಾನ ಅಪಘಾತ ಸಂಭವಿಸಿತ್ತು.

ಜನವರಿ 15 2023: ಪೊಖರಾದಲ್ಲಿ ಯೇತಿ ಏರ್‌ಲೈನ್ಸ್‌ನ ಅಪಘಾತದಲ್ಲಿ 72 ಮಂದಿ ಮೃತಪಟ್ಟಿದ್ದರು

ಮೇ 29 2022: ಪೊಖರಾದಲ್ಲಿ ವಿಮಾನ ಟೇಕ್‌ ಆಫ್‌ ಆದ 15 ನಿಮಿಷದಲ್ಲಿ ವಿಮಾನ ಪತನಗೊಂಡು ನಾಲ್ವರು ಭಾರತೀಯರು ಸೇರಿದಂತೆ 16 ಮಂದಿ ಮೃತಪಟ್ಟಿದ್ದರು

ಮಾರ್ಚ್‌ 12 2018: ಅಮೆರಿಕ–ಬಾಂಗ್ಲಾ ಏರ್‌ಲೈನ್ಸ್‌ ವಿಮಾನವು ನೇಪಾಳದ ವಿಮಾನನಿಲ್ದಾಣದಲ್ಲಿ ಭೂಸ್ಪರ್ಶವಾಗುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ 51 ಮಂದಿ ಮೃತಪಟ್ಟಿದ್ದರು

ಡಿಸೆಂಬರ್‌ 16 2010: ನೇಪಾಳದ ಕುಗ್ರಾಮವೊಂದರ ಪರ್ವತಗಳಲ್ಲಿ ವಿಮಾನ ಪತನಗೊಂಡು 22 ಮಂದಿ ಮೃತಪಟ್ಟಿದ್ದರು

ಜುಲೈ 27 2000: ಕೆನಡಾ ಸಂಸ್ಥೆಯೊಂದು ನಿರ್ಮಿಸಿದ ವಿಮಾನವೊಂದು ಪತನಗೊಂಡು 25 ಜನರು ಮೃತಪಟ್ಟಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.