ಕೊಲಂಬೊ: ಭಾರತವು ಕಚ್ಚತೀವು ದ್ವೀಪವನ್ನು ಶ್ರೀಲಂಕಾದಿಂದ ಹಿಂಪಡೆದುಕೊಳ್ಳಲು ಯಾವುದೇ ಆಧಾರವಿಲ್ಲ ಎಂದು ಶ್ರೀಲಂಕಾದ ಮೀನುಗಾರಿಕೆ ಸಚಿವ ದೌಗ್ಲಾಸ್ ದೇವಾನಂದ ಹೇಳಿದ್ದಾರೆ.
1974ರಲ್ಲಿ ದೇಶದ ಹಿತಾಸಕ್ತಿಯನ್ನು ಬದಿಗಿಟ್ಟು ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಡಲಾಗಿದೆ ಎಂದು ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಲಂಕಾದಿಂದ ಈ ಪ್ರತಿಕ್ರಿಯೆ ಬಂದಿದೆ.
ಕಚ್ಚತೀವು ದ್ವೀಪದ ಸುತ್ತ ಮೀನುಗಾರಿಕೆ ನಡೆಸಲು ಬಯಸುತ್ತಿರುವ ಮೀನುಗಾರರ ಹಕ್ಕುಗಳನ್ನು ಕಾಯುವಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ವಿಫಲವಾಗಿವೆ ಎಂದೂ ಬಿಜೆಪಿ ವಾಗ್ದಾಳಿ ನಡೆಸಿದೆ.
‘ಭಾರತದಲ್ಲಿ ಈಗ ಚುನಾವಣೆಯ ಸಮಯ. ಹಾಗಾಗಿ, ಕಚ್ಚತೀವು ಹಿಂಪಡೆವ ಕುರಿತಾದ ಮಾತುಗಳು ಕೇಳಿಬರುವುದು ವಿಶೇಷವೇನಲ್ಲ’ ಎಂದೂ ಶ್ರೀಲಂಕಾ ಸಚಿವ ದೇವಾನಂದ ಹೇಳಿದ್ಧಾರೆ.
''ಈ ಪ್ರದೇಶಕ್ಕೆ ಶ್ರೀಲಂಕಾ ಮೀನುಗಾರರಿಗೆ ನಿರ್ಬಂಧ ಹಾಗೂ ಸಂಪದ್ಭರಿತ ಪ್ರದೇಶದ ಮೇಲೆ ಶ್ರೀಲಂಕಾ ಯಾವುದೇ ಹಕ್ಕುಗಳನ್ನು ಹೊಂದಿರದಂತೆ ನೋಡಿಕೊಳ್ಳುವ ತನ್ನ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಭಾವಿಸುತ್ತೇನೆ’ ಎಂಬುದಾಗಿಯೂ ಅವರು ಹೇಳಿದ್ದಾರೆ.
‘1974ರ ಒಪ್ಪಂದದ ಪ್ರಕಾರ, ಎರಡೂ ದೇಶಗಳು ದ್ವೀಪದ ಬಳಿ ತಮ್ಮ ತಮ್ಮ ವ್ಯಾಪ್ತಿಗೆ ಬರುವ ಜಲಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸಬಹುದಾಗಿತ್ತು. ಬಳಿಕ, 1976ರಲ್ಲಿ ಒಪ್ಪಂದದ ತಿದ್ದುಪಡಿಯಾಗಿದೆ. ಅದರನ್ವಯ, ದ್ವೀಪದ ನೆರೆಯ ಸಾಗರದಲ್ಲಿ ಎರಡೂ ಕಡೆಯವರು ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಲಾಗಿದೆ’ಎಂದು ದೇವಾನಂದ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಭಾರತದ ಮೀನುಗಾರರು ಅಕ್ರಮ ಮೀನುಗಾರಿಕೆ ವಿರೋಧಿಸಿ ಇತ್ತೀಚೆಗೆ ಶ್ರೀಲಂಕಾದ ಮೀನುಗಾರರು ಸರಣಿ ಪ್ರತಿಭಟನೆ ನಡೆಸಿದ್ದರು.
ಈ ವರ್ಷ ಅಕ್ರಮ ಮೀನುಗಾರಿಕೆ ಆರೋಪದಡಿ ಭಾರತದ 178ಕ್ಕೂ ಅಧಿಕ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.