ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪಕ್ಷದ ಪ್ರಮುಖ ಮುಖಂಡರನ್ನು ಇಲ್ಲಿನ ನ್ಯಾಯಾಲಯ ವಿಧ್ವಂಸಕ ಕೃತ್ಯದ ಎರಡು ಆರೋಪಗಳಿಂದ ಖುಲಾಸೆಗೊಳಿಸಿದೆ.
ಇಸ್ಲಾಮಾಬಾದ್ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇಮ್ರಾನ್ ಖಾನ್, ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ಸಂವಹನ ಖಾತೆಯ ಮಾಜಿ ಸಚಿವ ಮುರದ್ ಸಯೀದ್ ಮತ್ತು ಇತರ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ (ಪಿಟಿಐ) ಪಕ್ಷದ ಮುಖಂಡರನ್ನು ‘ಹಕೀಕಿ ಆಜಾದಿ’ ಜಾಥಾ ವೇಳೆ ನಡೆದಿದ್ದ ವಿಧ್ವಂಸಕ ಕೃತ್ಯಗಳ ಆರೋಪದಿಂದ ಮುಕ್ತಗೊಳಿಸಿದೆ ಎಂದು ‘ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಇಮ್ರಾನ್ ಖಾನ್ ಅವರನ್ನು ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಪದಚ್ಯುತಗೊಳಿಸಿ, ಶಹಬಾಜ್ ಷರೀಫ್ ಸರ್ಕಾರ ರಚನೆ ಮಾಡಿದ್ದರು. ಷರೀಫ್ ಅವರ ಮೈತ್ರಿ ಸರ್ಕಾರವನ್ನು ಉರುಳಿಸಲು ಇಮ್ರಾನ್ ಇಸ್ಲಾಮಾಬಾದ್ನಿಂದ ಲಾಹೋರ್ವರೆಗೆ ಜಾಥಾ ಹಮ್ಮಿಕೊಂಡಿದ್ದರು.
ರಾಷ್ಟ್ರ ರಾಜಧಾನಿಯಲ್ಲಿ ವಿಧ್ವಸಂಕ ಕೃತ್ಯ ನಡೆಸಿದ ಆರೋಪದ ಮೇಲೆ ಇಮ್ರಾನ್ ಮತ್ತು ಅವರ ಪಕ್ಷದ ಇತರ 150 ಮಂದಿಯ ವಿರುದ್ಧ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.