ADVERTISEMENT

ಭಾರತೀಯನ‌ನ್ನು ವಾಪಸ್‌ ಕಳುಹಿಸದ್ದಕ್ಕೆ ಕರಾಚಿ ಹೈಕೋರ್ಟ್ ತರಾಟೆ

ಪಿಟಿಐ
Published 16 ಮಾರ್ಚ್ 2024, 15:52 IST
Last Updated 16 ಮಾರ್ಚ್ 2024, 15:52 IST
   

ಕರಾಚಿ: ಪಾಕಿಸ್ತಾನದಲ್ಲಿ 11 ವರ್ಷಗಳ ಹಿಂದೆ ಬಂಧನಕ್ಕೊಳಗಾಗಿದ್ದ ಭಾರತೀಯ ಪ್ರಜೆಯನ್ನು ಸ್ವದೇಶಕ್ಕೆ ಕಳುಹಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಒಳಾಡಳಿತ ಸಚಿವಾಲಯವನ್ನು ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿದೆ.

‘ಪ್ರಕರಣದ ಬಗ್ಗೆ ಸಮಗ್ರ ವರದಿಯನ್ನು ನೀಡುವಂತೆ ಸಿಂಧ್‌ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಮಹಮ್ಮದ್‌ ಕರೀಮ್‌ ಖಾನ್‌ ಅಘಾ ಅವರು ಒಳಾಡಳಿತ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ’ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ಅಬ್ದುಲ್‌ ಮುಘ್ನಿ ಎಂಬವರ ವಿರುದ್ಧ 2013ರಲ್ಲಿ ಮೊಬಿನ್ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2017ರಲ್ಲಿ ಸೆಷನ್ಸ್ ನ್ಯಾಯಾಲಯ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿದ್ದ ಮುಘ್ನಿ, ಸಿಂಧ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ADVERTISEMENT

‘ಮುಘ್ನಿ ಅವರು ಭಾರತೀಯ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು, ಆದರೆ ಒಳಾಡಳಿತ ಸಚಿವಾಲಯವು ಆರೋಪಿಯ ಪೌರತ್ವವನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿತ್ತು’ ಎಂದು ವರದಿ ತಿಳಿಸಿದೆ.

ಮುಘ್ನಿ ಅವರ ಶಿಕ್ಷೆಯ ಅವಧಿ ಪೂರ್ಣಗೊಂಡಿರುವುದರಿಂದ ಭಾರತಕ್ಕೆ ಕಳುಹಿಸಲು ಸಿದ್ದತೆ ನಡೆಸುವಂತೆ ನ್ಯಾಯಾಲಯವು ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು. ಆದರೆ ಭಾರತಕ್ಕೆ ಕಳುಹಿಸುವ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿರುವ ಸಚಿವಾಲಯದ ಕಾರ್ಯವೈಖರಿ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.