ಲಾಹೋರ್: ಮೇ 9ರ ಗಲಭೆ ಸಂಬಂಧ ದಾಖಲಾಗಿರುವ ಮೂರು ಪ್ರಕರಣದಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಲಯವೊಂದು ನಿರಾಕರಿಸಿದೆ. ಅಲ್ಲದೆ ಕಸ್ಟಡಿಗೆ ಪಡೆದುಕೊಂಡು ತನಿಖೆ ನಡೆಸಲು ಪೊಲೀಸರಿಗೆ ಅನುಮತಿ ನೀಡಿದೆ.
ತಮ್ಮ ಬಂಧನದ ಬಳಿಕ 2023ರ ಮೇ 9ರಂದು ಜಿನ್ನಾ ಹೌಸ್ ಎಂದೇ ಪ್ರಖ್ಯಾತಿ ಹೊಂದಿರುವ ಕಾರ್ಪ್ಸ್ ಕಮಾಂಡರ್ ಹೌಸ್, ಅಸ್ಕಾರಿ ಟವರ್ ಹಾಗೂ ಶಾದ್ಮಾನ್ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡಿದ ಆರೋಪ ಇಮ್ರಾನ್ ಖಾನ್ ಅವರ ಮೇಲಿದೆ.
ಸದ್ಯ ಅವರ ಮೇಲೆ 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ ಆಗಸ್ಟ್ನಿಂದ ಜೈಲಿನಲ್ಲಿದ್ದಾರೆ.
ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಇಮ್ರಾನ್ ಖಾನ್ ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಬೇಕಾಗಿದೆ ಎಂದು ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ (ಎಟಿಸಿ) ನ್ಯಾಯಮೂರ್ತಿ ಖಾಲಿದ್ ಅರ್ಶದ್ ಅವರು ವಿಚಾರಣೆ ವೇಳೆ ಅಭಿಪ್ರಾಯಪಟ್ಟರು. ಅಲ್ಲದೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದರು.
ಇಮ್ರಾನ್ ಖಾನ್ ಅವರು ಹಿಂಸಾಚರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಸಾಬೀತುಪಡಿಸುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಕಸ್ಟಡಿಯಲ್ಲಿದ್ದವರು ಗಲಭೆಗೆ ಪ್ರೇರಣೆ ನೀಡಲು ಹೇಗೆ ಸಾಧ್ಯ ಎಂದು ಇಮ್ರಾನ್ ಖಾನ್ ಪರ ವಕೀಲ ಬ್ಯಾರಿಸ್ಟರ್ ಸಲ್ಮಾಮ್ ಸಫ್ದರ್ ಪ್ರಶ್ನಿಸಿದ್ದಾರೆ.
ದಾಳಿಯನ್ನು ಇಮ್ರಾನ್ ಖಾನ್ ಖಂಡಿಸಿದ್ದರಲ್ಲದೆ, ಹಿಂಸಾಚಾರದಿಂದ ದೂರ ಉಳಿಯುವಂತೆ ಇಮ್ರಾನ್ ಖಾನ್ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದರು ಎಂದು ಅವರು ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.