ADVERTISEMENT

ಪಪುವಾ ನ್ಯೂಗಿನಿ ಭೂಕುಸಿತ: ಮೃತರ ಸಂಖ್ಯೆ 670ಕ್ಕೆ ಏರಿಕೆ

ಪಿಟಿಐ
Published 26 ಮೇ 2024, 13:25 IST
Last Updated 26 ಮೇ 2024, 13:25 IST
<div class="paragraphs"><p>ಪಪುವಾ ನ್ಯೂಗಿನಿಯ ಪೊಗೆರಾ ಗ್ರಾಮದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಸಿಲುಕಿರುವರ ರಕ್ಷಣಾ ಕಾರ್ಯದಲ್ಲಿ ಸ್ಥಳೀಯ ಜನರು ಭಾನುವಾರ ನಿರತರಾಗಿದ್ದರು. </p></div>

ಪಪುವಾ ನ್ಯೂಗಿನಿಯ ಪೊಗೆರಾ ಗ್ರಾಮದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಸಿಲುಕಿರುವರ ರಕ್ಷಣಾ ಕಾರ್ಯದಲ್ಲಿ ಸ್ಥಳೀಯ ಜನರು ಭಾನುವಾರ ನಿರತರಾಗಿದ್ದರು.

   

–ಪಿಟಿಐ ಚಿತ್ರ

ಮೆಲ್ಬರ್ನ್‌: ಪಪುವಾ ನ್ಯೂಗಿನಿಯಲ್ಲಿ ಸಂಭವಿಸಿದ ಭಾರಿ ಪ್ರಮಾಣದ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 670 ದಾಟಿದೆ ಎಂದು ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆ ಭಾನುವಾರ ಅಂದಾಜು ಮಾಡಿದೆ.

ADVERTISEMENT

ಭೂ ಕುಸಿತದಿಂದ ಅಂದಾಜು 150ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ ಅಧಿಕಾರಿ ಅಕ್ಟೊಪ್ರಾಕ್‌ ತಿಳಿಸಿದ್ದಾರೆ.

ಶುಕ್ರವಾರ ಸಂಭವಿಸಿದ ಭೂಕುಸಿತದ ವೇಳೆ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಯಂಬಲಿ ಮತ್ತು ಎಂಗಾ ಪ್ರಾಂತೀಯ ಅಧಿಕಾರಿಗಳ ಲೆಕ್ಕಾಚಾರವನ್ನು ಆಧರಿಸಿ ಈ ಸಂಖ್ಯೆಯನ್ನು ಪರಿಷ್ಕೃರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

670ಕ್ಕೂ ಹೆಚ್ಚು ಜನರ ದೇಹವು ಮಣ್ಣಿನಲ್ಲಿ ಹುದುಗಿ ಹೋಗಿದೆ ಎನ್ನಲಾಗುತ್ತಿದೆ. ಭೂಮಿ ಇನ್ನೂ ಜಾರುತ್ತಿರುವುದರಿಂದ ಅಪಾಯದ ಪರಿಸ್ಥಿತಿ ಮುಂದುವರಿದಿದೆ. ಹೀಗಾಗಿ ರಕ್ಷಣಾ ಕಾರ್ಯಕ್ಕೂ ತೊಡಕಾಗಿದೆ. ಭಾನುವಾರದ ವೇಳೆಗೆ ಕೇವಲ ಆರು ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಬದುಕುಳಿದಿರುವವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ. ಭೂಕುಸಿತದಿಂದ ಉಂಟಾಗಿರುವ ಅವಘಡಗಳು ಮತ್ತು ಬುಡಕಟ್ಟು ಜನರ ನಡುವಿನ ಘರ್ಷಣೆ ಸಹ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿ ಪರಿಣಮಿಸಿದೆ. ದಕ್ಷಿಣ ಪೆಸಿಫಿಕ್‌ ದ್ವೀಪ ರಾಷ್ಟ್ರವು ನೆರವಿಗಾಗಿ ಅಂತರರಾಷ್ಟ್ರೀಯ ಬೆಂಬಲ ಪಡೆಯುವ ನಿಟ್ಟಿನಲ್ಲಿ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಕಲ್ಲು, ಮಣ್ಣುಗಳ ಅಡಿಯಲ್ಲಿ ಸುಮಾರು 20ರಿಂದ 26 ಅಡಿ ಆಳದಲ್ಲಿ ಸಿಲುಕಿರುವವರ ಹುಡುಕಾಟ ಕಷ್ಟಕರವಾಗಿದೆ. ಇದರ ಪರಿಣಾಮ ಇಡೀ ಪ್ರದೇಶದಲ್ಲಿ ದುಃಖ ಮತ್ತು ಶೋಕದ ವಾತಾವರಣ ಇದೆ ಎಂದು ಅಕ್ಟೊಪ್ರಾಕ್‌ ಮಾಹಿತಿ ನೀಡಿದ್ದಾರೆ.

ಈ ಪ್ರದೇಶಕ್ಕೆ ಆಹಾರ, ನೀರು ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಸಾಗಿಸುವುದೂ ಕಷ್ಟಕರವಾಗಿದೆ. ತಂಬಿಟಾನಿಸ್‌ ಗ್ರಾಮದಲ್ಲಿ ಬುಡಕಟ್ಟು ಜನರ ನಡುವಿನ ಸಂಘರ್ಷವು ಸಾಮಗ್ರಿಗಳ ಸಾಗಾಟಕ್ಕೆ ಸಂಕಷ್ಟ ತಂದಿದೆ. ಪುಪುವಾ ನ್ಯೂಗಿನ ಸೈನಿಕರು ಬೆಂಗಾವಲು ಪಡೆಗಳಾಗಿ ಸಾಮಗ್ರಿಗಳಿಗೆ ಭದ್ರತೆ ಒದಗಿಸುತ್ತಿದ್ದಾರೆ.

ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಸುಮಾರು 4,000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರು. ಇವರಲ್ಲಿ ಗಾಯಗೊಂಡವರು, ಕಾಣೆಯಾದವರ ಸಂಖ್ಯೆ ನಿಖರವಾಗಿ ಗೊತ್ತಾಗಿಲ್ಲ. ಈ ಕುರಿತು ಅಂಕಿ ಅಂಶಗಳನ್ನು ಕಲೆಹಾಕಲಾಗುತ್ತಿದೆ. ಕೆಲ ಮನೆಗಳು, ಸಣ್ಣ ವ್ಯಾಪಾರ ಕೇಂದ್ರಗಳು, ಅತಿಥಿ ಗೃಹಗಳು, ಶಾಲೆ ಮತ್ತಿತರ ಕಡೆಗಳಲ್ಲಿ ವೈದ್ಯಕೀಯ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.