ADVERTISEMENT

ಉಡುಪಿಯಲ್ಲಿ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 0:40 IST
Last Updated 24 ಅಕ್ಟೋಬರ್ 2024, 0:40 IST
<div class="paragraphs"><p>ಉಡುಪಿಯ ಶ್ರೀಕೃಷ್ಣ ಮಠ</p></div>

ಉಡುಪಿಯ ಶ್ರೀಕೃಷ್ಣ ಮಠ

   

ಉಡುಪಿ: Aioc (ಆಲ್ ಇಂಡಿಯಾ ಓರಿಯಂಟಲ್ ಕಾನ್ಫರೆನ್ಸ್) ಯ 51ನೇ ಸಮ್ಮೇಳನ ಇದೇ ಬರುವ ಅ. 24 ರಿಂದ (ಇಂದಿನಿಂದ) ಅ. 26 ವರೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುತ್ತಿದೆ. ಭಾರತೀಯ ವಿದ್ವತ್ ಪರಿಷತ್ (ಬಿವಿಪಿ) ಬೆಂಗಳೂರು, ಕೇಂದ್ರೀಯ ಸಂಸ್ಕೃತ ವಿ ವಿ ( ಸಿ.ಎಸ್.ಯು ) ನವದೆಹಲಿ ಜೊತೆ ಸೇರಿ ಉಡುಪಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ AIOC ಈ ಸಮ್ಮೇಳನ ಆಯೋಜಿಸಿದೆ. ಈ ಸಮ್ಮೇಳನ ಇತ್ತೀಚೆಗೆ ದಕ್ಷಿಣಭಾರತದಲ್ಲೇ ನಡೆಯುತ್ತಿರುವ ಮೊದಲ ಸಮ್ಮೇಳನ ಎಂಬುದು ಇದರ ವೈಶಿಷ್ಟ್ಯ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.


AIOC: ಹಿನ್ನೆಲೆ ಮತ್ತು ಉದ್ದೇಶ
ಭಾರತೀಯ ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಭಾಷೆಗಳ ಬೆಳವಣಿಗೆ ಮತ್ತು ರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿರುವ AIOC ಸುದೀರ್ಘ ಇತಿಹಾಸ ಹೊಂದಿದೆ. AIOC ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 1919ರಲ್ಲಿ ಆರಂಭಗೊಂಡರೂ AIOC ಮೂಲವಾದ ಇಂಟರ್‌ನ್ಯಾಷನಲ್‌ ಕಾಂಗ್ರೆಸ್‌ ಆಫ್ ಒರಿಯಂಟಲಿಸ್ಟ್ (ಐ ಸಿ ಓ)ಮೊದಲ ಸಭೆ 1873 ರಲ್ಲಿ ಪ್ಯಾರಿಸ್ ನಲ್ಲಿ ನಡೆಯಿತು.
ಪೂರ್ವ ದೇಶಗಳ ಮುಖ್ಯವಾಗಿ ಭಾರತದ ಕಲೆ, ಪರಂಪರೆ, ತತ್ವಜ್ಞಾನ ಇವುಗಳಲ್ಲಿ ಆಸಕ್ತಿ ಕುತೂಹಲದಿಂದ ಆರಂಭಗೊಂಡಿದ್ದ ಪಶ್ಚಿಮದ ದೇಶಗಳ ಈ ಅಧ್ಯಯನ ಮೊದಲು ವಿದೇಶಗಳಲ್ಲೇ ನಡೆದರೂ ಆಕ್ಸಫರ್ಡ್ ನ ಸಂಸ್ಕೃತ ವಿದ್ವಾಂಸರಾದ ಪಂಡಿತ್ ಶ್ಯಾಮಜಿ ಕೃಷ್ಣ ವರ್ಮಾ ಭಾರತದಲ್ಲೇ ಇದು ಮುಖ್ಯವಾಗಿ ನಡೆಯಬೇಕು ಎಂಬ ಆಗ್ರಹ ಮಾಡಿದ್ದು ಭಾರತದಲ್ಲೇ ಮುಂದೆ ಈ ಸಮ್ಮೇಳನ ಹೊಸ ಆಶಯದೊಂದಿಗೆ ನಡೆಯಲು ಸಾಧ್ಯವಾಯಿತು. ಹಿರಿಯ ಭಾಷಾಶಾಸ್ತ್ರಜ್ಞ ಮೆಕ್ಡಾ ನಲ್ ಸೇರಿದಂತೆ ಹಲವರು ಇದನ್ನು ಸ್ವಾಗತಿಸಿದರು. ಮತ್ತೆ ಇದು ಕಲ್ಕತ್ತಾದಲ್ಲಿ ನಡೆಯಿತು ಕೂಡ.

ADVERTISEMENT


ಸ್ವಾತಂತ್ರ್ಯ ಪೂರ್ವದಿಂದಲೇ ಭಾರತೀಯ ಜ್ಞಾನಪರಂಪರೆಯ ಸಂಶೋಧನೆ ಸಂರಕ್ಷಣೆಯಲ್ಲಿ ಪುಣೆಯ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ (BORI ) ಸಂಸ್ಥೆಯ ಪಾತ್ರ ಸರ್ವವಿದಿತ. ಇದರ ಅಂಗವಾಗಿ AIOC ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿತು. ಭಾರತೀಯ ಜ್ಞಾನಮಾತ್ರವಲ್ಲ ಯಾವುದೇ ಪೌರ್ವಾತ್ಯ ಪಾರಂಪರಿಕ ಜ್ಞಾನವನ್ನು ಪರಿಶೋಧಿಸುವ ಉದ್ದೇಶ ಇದರದ್ದು.

AIOC ಭಾರತೀಯ ಜ್ಞಾನಪರಂಪರೆಯನ್ನು ವಿಶ್ವದಾದ್ಯಂತ ಪ್ರಚಾರ, ಪ್ರಸಾರ ಮಾಡಲು ಪ್ರಯತ್ನ ಮಾಡುತ್ತಾ ಇದೆ. ಓರಿಯಂಟಲ್ ( ಪ್ರಾಚ್ಯ )ಅಧ್ಯಯನಕ್ಕೆ ಪಾಶ್ಚಾತ್ಯ ಪ್ರಣೀತ ಕಾರ್ಯವಿಧಾನಗಳು ಮೊದಲಿನಿಂದ ಇದ್ದರೂ ಈಗ ಪೌರಾತ್ಯ ಚಿಂತನೆಯ ಪ್ರಭಾವದಿಂದ ಸಾಕಷ್ಟು ಹೊಸ ದೃಷ್ಟಿಕೋನಗಳು ಬಂದಿವೆ. ಹೊಸ ವೈಧಾನಿಕತೆಯಲ್ಲಿ ಸಾಕಷ್ಟು ವಿಶೇಷತೆಗಳು ಒದಗಿ ಬಂದಿದೆ. ಪಾಶ್ಚಾತ್ಯ ವೈಧಾನಿಕತೆಯನ್ನು ಹೆಚ್ಚು ಬಳಸುತ್ತಿದ್ದರಿಂದ ಅದೊಂದು ಅಪೂರ್ಣ ಎನಿಸುತ್ತಿತ್ತು. ಕಳೆದ ಹಲವು ದಶಕಗಳಿಂದ ಪೌರಾತ್ಯ ಚಿಂತನೆಯ ದೃಷ್ಟಿಕೋನ ಮತ್ತು ವೈಧಾನಿಕತೆಯನ್ನು ಅಳವಡಿಸಿಕೊಂಡು ಹೊಸ ಸಂಶೋಧನಮಾರ್ಗ ಕಂಡು ಕೊಳ್ಳಲಾಗುತ್ತಿದೆ.

ಈ ದೃಷ್ಟಿಯಿಂದ ಈಗ ಓರಿಯಂಟಲ್ ಅಧ್ಯಯನ ಒಂದು ಸಮಗ್ರತೆಯನ್ನು ಪಡೆದುಕೊಂಡಿದೆ. ಭಾರತೀಯ ಚಿಂತನೆಯಲ್ಲಿ ವ್ಯಕ್ತಿನಿಷ್ಠ ಗ್ರಹಿಕೆಯೇ ಮುಖ್ಯವಾದದ್ದು. ಅಂದರೆ subjective ಸ್ಟಡಿ ಹೆಚ್ಚು. ಆದರೆ ಪಾಶ್ಚಾತ್ಯದಲ್ಲಿ ವಸ್ತುನಿಷ್ಠ ಅಧ್ಯಯನ ಅಂದರೆ objective ಸ್ಟಡಿ ಪ್ರಮುಖವಾಗಿದೆ. ಈ ಎರಡನ್ನೂ ಸಮನ್ವಯಿಸಿ ಸಂಶೋಧನೆ ಮಾಡುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ AIOC ಹಲವು ತರದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

AIOCಯ ಅಧ್ಯಯನದ ಇನ್ನೊಂದು ವಿಶೇಷತೆ ಎಂದರೆ ಹೆಚ್ಚು ಹೆಚ್ಚು inclusive ಆಗುವ ಅಂದರೆ ಹೆಚ್ಚು ಹೆಚ್ಚು ಜ್ಞಾನಪರಂಪರೆಯನ್ನು ಒಳಗೊಳ್ಳುವ ಮತ್ತು ವೈವಿಧ್ಯವನ್ನು ಅರಸುವ ಹೊಸ ಅಧ್ಯಯನ ಕ್ರಮವನ್ನು ಹೊಸ ಸಂಶೋಧಕರಲ್ಲಿ ಉತ್ತೇಜಿಸುತ್ತದೆ. ಇದರಿಂದಾಗಿ ಅನೇಕ ರೀತಿಯ ಪೌರ್ವಾತ್ಯ ಜ್ಞಾನಪರಂಪರೆಯ ಹೊಸ ಅಧ್ಯಯನಕ್ಕೆ ಅವಕಾಶ ಸಾಧ್ಯ ಆಗ್ತಾ ಇದೆ. ಒಂದು ಸಮಗ್ರತೆ ಅಖಂಡತೆ ಈ ಅಧ್ಯಯನಕ್ಕೆ ಬಂದಿದೆ.

AIOCಯು ಹೊಂದಿರುವ ಇನ್ನೊಂದು ಹೊಸ ಸವಾಲು ಪ್ರಾಚೀನವಾದ್ದನ್ನು ಸಮಕಾಲೀನ ಸಂದರ್ಭಕ್ಕೆ ಹೊಂದಿಸುವ ಹೊಸ ಸವಾಲು. ಇಂಡಿಯಾ ಭಾರತವಾದ ಹೊಸ ಐಡೆಂಟಿಟಿ ಈಗ ನಮ್ಮ ಮುಂದಿರುವ ಆದರ್ಶ. ಈ ಗ್ರಹಿಕೆಯ ಮೂಲವನ್ನೇ ಇಟ್ಟುಕೊಂಡು ಆಧುನಿಕ ಜಗತ್ತಿನ ಸವಾಲುಗಳನ್ನು ಜೊತೆಗಿರಿಸಿಕೊಂಡೆ ಹೊಸ ಅಧ್ಯಯನ ಕ್ರಮವನ್ನು ಮಂಡಿಸಲು ಮತ್ತು ಯುವ ಸಮುದಾಯಕ್ಕೆ ಪ್ರೇರೇಪಣೆ ನೀಡಲು AIOC ಪ್ರಯತ್ನ ಮಾಡುತ್ತಿದೆ.

ಇನ್ನೊಂದು ಮುಖ್ಯವಾದ ಉದ್ದೇಶ ಅಂತರ್ಶಿಸ್ತೀಯ ಅಧ್ಯಯನಕ್ಕೆ ಪ್ರವೇಶ ಒದಗಿಸುವುದು. ಬೇರೆ ಬೇರೆ ಜ್ಞಾನ ಶಾಖೆಗಳ ಅಧ್ಯಯನದ ಹಿನ್ನೆಲೆಯಲ್ಲಿ ಮಾಡುವ ಅಧ್ಯಯನ ಸಂಶೋಧನೆ ಪಾರಸ್ಪರಿಕವಾಗಿ ಹೊಸ ಜ್ಞಾನಸೇತು ನಿರ್ಮಿಸುತ್ತದೆ. ಸಂಶೋಧನೆಗೆ ಸಮಗ್ರತೆಯನ್ನು ತಂದುಕೊಡುತ್ತವೆ. ಸಾಹಿತ್ಯ, ವಿಜ್ಞಾನ, ತತ್ವಜ್ಞಾನ, ಕಲೆ ಇವುಗಳ ನಡುವಿನ ಸಂಬಂಧಗಳ ಸೂಕ್ಷ್ಮಅಧ್ಯಯನ ಇಲ್ಲಿ ತುಂಬಾ ಮುಖ್ಯ ಎಂಬುದು AIOC ನಿಲುವು.

ಉಡುಪಿಯಲ್ಲಿ ನಡೆಯುತ್ತಿರುವ 51ನೆಯ ಈ ಸಮ್ಮೇಳನದಲ್ಲಿ ಸುಮಾರು 20 ವಿಷಯಗಳಲ್ಲಿ (ಥೀಮ್ ) ಭಾರತೀಯ ಅಧ್ಯಯನದ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗುತ್ತಿದೆ. ಈ ಸಮ್ಮೇಳನಕ್ಕೆ ಆಶ್ರಯ ನೀಡಿದ ಪರ್ಯಾಯ ಶ್ರೀ ಪುತ್ತಿಗೆ ಮಠದ ಮಹತ್ವದ ಯೋಜನೆಯಾದ ಭಗವದ್ಗೀತ ಅಭಿಯಾನವನ್ನು ವಿಶೇಷ ಒತ್ತು ನೀಡಿ ಹೊಸ ಪ್ರಬಂಧಗಳು ಮಂಡನೆಗೊಳ್ಳುತ್ತಿದೆ.

ಈ ಸಮ್ಮೇಳನದಲ್ಲಿ ಇನ್ನೊಂದು ಸಹಭಾಗಿತ್ವ ವಹಿಸಿದ ಸಂಸ್ಥೆ ಭಾರತೀಯ ವಿದ್ವತ್ ಪರಿಷತ್( ಬಿವಿಪಿ )ಭಾರತೀಯ ಶಾಸ್ತ್ರ ಪರಂಪರೆಯ ಅಧ್ಯಯನ, ಸಂಶೋಧನೆಗಳನ್ನು ಬೆಳೆಸುವ ದೃಷ್ಟಿಯಿಂದ 2009 ರಲ್ಲಿ ಆರಂಭಗೊಂಡಿತು. ಸಕ್ರಿಯವಾಗಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡ ಈ ಸಂಸ್ಥೆ 2500ಕ್ಕೂ ಹೆಚ್ಚು ಸದಸ್ಯರನ್ನು ದೇಶ ವಿದೇಶಗಳಲ್ಲಿ ಹೊಂದಿದೆ.

ಇಡೀ ಸಮ್ಮೇಳನದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಪಾತ್ರ ಅತ್ಯಂತ ಮುಖ್ಯವಾಗಿದೆ. ಸಂಪನ್ಮೂಲ ವಿದ್ವಾಂಸರು ಮತ್ತು ಒಟ್ಟು ಸಂಘಟನೆಯ ಜವಾಬ್ದಾರಿ ಹೊತ್ತಿರುವ ಸಂಸ್ಕೃತ ವಿವಿ ಇಡೀ ಮೂರು ದಿನದ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಸಂಯೋಜಿಸುತ್ತಿದೆ. ವಿವಿ ಕುಲಪತಿ ಡಾ.ಶ್ರೀನಿವಾಸ್ ವರಖೇಡಿ ಅವರ ದೂರದರ್ಶಿತ್ವ, ಮಾರ್ಗದರ್ಶನ ಇಡೀ ಸಮ್ಮೇಳನದ ಯಶಸ್ಸಿಗೆ ಕಾರಣವಾಗುತ್ತಿದೆ.

AIOCಯ ಎಲ್ಲ ಸಮ್ಮೇಳನಗಳಲ್ಲೂ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಮಹತ್ವ ನೀಡಲಾಗಿದೆ. ಕಾಲಕಾಲಕ್ಕೆ ಹಲವು ಸಲಹೆ ಸೂಚನೆ ನಿರ್ಣಯಗಳನ್ನು ಸಂಬಂಧಪಟ್ಟ ಅಧಿಕಾರಸ್ಥರಿಗೆ ನೀಡುತ್ತಾ ಬಂದಿದೆ. ಪರಂಪರೆ ಉಳಿಸುವುದು ರಕ್ಷಿಸುವುದು ಪ್ರಸಾರ ಮಾಡುವುದು, ಗೌರವಿಸುವುದೇ AIOCಯ ಮುಖ್ಯ ಉದ್ದೇಶ.

ಉಡುಪಿಯ 51ನೇ ಈ ಸಮ್ಮೇಳನದ ವಿಶೇಷತೆ ಏನಂದರೆ, ಎರಡು ದಶಕ ಕಾಲAIOCಯ ಕಾರ್ಯದರ್ಶಿಯಾಗಿದ್ದ ಸರೋಜಾ ಭಾಟೆ (ಖ್ಯಾತ ಸಂಸ್ಕೃತ ವ್ಯಾಕರಣ ವಿದುಷಿ, ಇಂಡೊಲಾಜಿಸ್ಟ್) ಈ ಸಮ್ಮೇಳನದ ಅಧ್ಯಕ್ಷರಾಗಿರುವುದು, ಮಧ್ಯ ಪ್ರದೇಶದ ಕಾಳಿದಾಸ ವಿವಿಯ ಕವಿತಾ ಹೊಳೆ (ಎ ಐ ಓ ಸಿ ಪ್ರಧಾನ ಕಾರ್ಯದರ್ಶಿ ) ಹಾಗೆ ಬೆಂಗಳೂರು ಸಂಸ್ಕೃತ ವಿ ವಿ ಯ ಡಾ. ಶಿವಾನಿ ಹೀಗೆ ಹೆಚ್ಚು ಮಹಿಳಾ ವಿದ್ವಾಂಸರ ನೇತೃತ್ವದಲ್ಲಿ ಸಂಘಟನೆಯಲ್ಲಿ ಈ ಸಮ್ಮೇಳನ ನಡೆಯುತ್ತಿದೆ

ಈ ಸಮ್ಮೇಳನದಲ್ಲಿ ಚರ್ಚಿತವಾಗುವ ಮತ್ತು ಪ್ರಬಂಧ ಮಂಡನೆಯಾಗುವ ಮುಖ್ಯ ಕ್ಷೇತ್ರಗಳು ಹೀಗಿವೆ :
ವೇದ, ಇರಾನಿಯನ್ ಇಸ್ಲಾಮಿಕ್ ಅರೇಬಿಕ್ ಮತ್ತು ಪರ್ಷಿಯನ್ ಅಧ್ಯಯನ, ಶಾಸ್ತ್ರೀಯ ಸಂಸ್ಕೃತಭಾಷೆ, ಪಾಳಿ ಮತ್ತು ಬೌದ್ಧ ಧರ್ಮ, ಪ್ರಾಕೃತ ಮತ್ತು ಜೈನ ಧರ್ಮ, ಇತಿಹಾಸ ಪುರಾತತ್ವ ಶಾಸ್ತ್ರ ಮತ್ತು ತಾಳೆಗರಿ ಲಿಪಿ ಶಾಸ್ತ್ರ, ದ್ರಾವಿಡ ಅಧ್ಯಯನ, ತತ್ವ ಜ್ಞಾನ ಮತ್ತು ಧರ್ಮ, ತಂತ್ರಜ್ಞಾನ ಮತ್ತು ಕಲೆ, ಕಂಪ್ಯೂಟರ್, ಏಷ್ಯನ್ ಅಧ್ಯಯನ, ಆಧುನಿಕ ಸಂಸ್ಕೃತ, ಪುರಾಣ ಮತ್ತು ಮಹಾಕಾವ್ಯ ಪರಂಪರೆ, ಭಾರತೀಯ ಸೌಂದರ್ಯ ಶಾಸ್ತ್ರ ಮತ್ತು ಕಾವ್ಯ ಭಾರತೀಯ ಜ್ಞಾನಪರಂಪರೆ, ಇಂಡೊಲಜಿ ಮರು ಅಧ್ಯಯನ, ಭಗವದ್ಗೀತಾ ಅಧ್ಯಯನ, ಯೋಗ ಆಯುರ್ವೇದ, ವೈಷ್ಣವ ಭಕ್ತಿ ಪರಂಪರೆ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಜನಪದ, ಬುಡಕಟ್ಟು ಸಂಸ್ಕೃತಿ ಅಧ್ಯಯನ, ಶಿಕ್ಷಣ ಮತ್ತು ಮಕ್ಕಳ ಸಾಹಿತ್ಯ.. ಹೀಗೆ ಎಲ್ಲ ಮುಖ್ಯ ವಿಷಯಗಳ ಮೇಲೆ ಪ್ರಬಂಧ ಮಂಡನೆ ಮತ್ತು ಚಿಂತನೆ ವಿಮರ್ಶೆ ಈ ಸಮ್ಮೇಳನದ ವಿಶೇಷತೆ. ಕರ್ನಾಟಕದಲ್ಲೇ ಈ ಸಮ್ಮೇಳನ ನಡೆಯುವುದರಿಂದ ಕನ್ನಡ ಭಾಷೆ, ಸಂಸ್ಕೃತಿ ಸಾಹಿತ್ಯ, ಜಾನಪದ ಕುರಿತ ಶೋಧಪ್ರಬಂಧಗಳನ್ನು ಆಹ್ವಾನಿಸಲಾಗಿದೆ.

ಮುಖ್ಯವಾಗಿ ಯುವ ವಿದ್ವಾಂಸರನ್ನು ಸಂಶೋಧಕರನ್ನು ಗಮನದಲ್ಲಿಟ್ಟುಕೊಂಡು ಅವರು ಸಂಶೋಧನಾ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳು ಸಂಶೋಧನಾ ವಿಧಾನ ಸಂಶೋಧನೆಯ ತಾತ್ವಿಕ ಗ್ರಹಿಕೆ ಇತ್ಯಾದಿ ವಿಷಯಗಳ ಕುರಿತು ಸಮ್ಮೇಳನದಲ್ಲಿ ಭಾಗವಹಿಸುವ ಹಿರಿಯ ವಿದ್ವಾಂಸರು ಹಿರಿಯ ಸಂಶೋಧಕರು ಮಾರ್ಗದರ್ಶನ ನೀಡಲಿದ್ದಾರೆ. ಆಧುನಿಕ ಸಂಶೋಧನಾ ಮೆಥಡಾಲಜಿ ಜೊತೆಗೆ ಪ್ರಾಚೀನ ವಿಚಾರವನ್ನು ಗ್ರಹಿಸುವ ಬಗ್ಗೆ ಇತ್ಯಾದಿ ಅನೇಕ ವಿಷಯಗಳನ್ನು ಒಳಗೊಂಡಂತೆ ಒಂದು ಸಮಗ್ರ ಚರ್ಚೆ ಸಂವಾದ ಇಲ್ಲಿ ನಡೆಯಲಿದೆ.

ವಿದ್ಯಾಮಾನ್ಯಯುವ ಪಂಡಿತ ಪರಿಷತ್ ವತಿಯಿಂದ ಹಲವು ತರದ ಗಂಭೀರ ವಿದ್ವತ್ ಚರ್ಚೆಗಳು, ಪ್ರಾಚೀನ ವಿಷಯಗಳು ಅವುಗಳ ವಿಮರ್ಶೆ ವಿವರಣೆ, ಹೊಸ ವ್ಯಾಖ್ಯಾನ, ವಾಕ್ಯಾರ್ಥ ಗೋಷ್ಠಿ, ವಿಶೇಷವಾಗಿ ಈ ಬಾರಿ ಯುವ ಮಹಿಳಾ ವಿದ್ವಾಂಸರೆ ನಡೆಸುವ ಕಲ್ಯಾಣಿ ಯುವ ಪಂಡಿತ ಪರಿಷತ್ ವತಿಯಿಂದ ವಾಕ್ಯಾರ್ಥ ಗೋಷ್ಠಿ ನಡೆಯಲಿದೆ.

ಸಾಂಪ್ರದಾಯಿಕವಾಗಿ ಪುರುಷ ವಿದ್ವಾಂಸರೆ ನಡೆಸುತ್ತಿದ್ದ ಈ ವಾಕ್ಯಾರ್ಥ ಗೋಷ್ಠಿ ಈ ಬಾರಿ ಮೊದಲ ಬಾರಿಗೆ ಉಡುಪಿಯಲ್ಲಿ ಮಹಿಳಾ ವಿದ್ವಾಂಸರು ನಡೆಸುತ್ತಿರುವುದು ತುಂಬಾ ವಿಶೇಷ. ಜೊತೆಗೆ ವಾದಿರಾಜ ಯುವಕವಿಗೋಷ್ಠಿ, ಅಷ್ಟಾವಧಾನ, ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಲವು ಹಿರಿ ಕಿರಿ ವಿದ್ವಾಂಸರ ಪುಸ್ತಕ ಬಿಡುಗಡೆಯೂ ನಡೆಯಲಿದೆ.

ಇನ್ನೊಂದು ಮಹತ್ವದ ಗಮನಸೆಳೆಯುವ ಕಾರ್ಯಕ್ರಮವೆಂದರೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ. ರಾಷ್ಟ್ರಮಟ್ಟದ ಪ್ರಖ್ಯಾತ 50 ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳುತ್ತಿದೆ.

ಇಡೀ ಸಮ್ಮೇಳನಕ್ಕೆ ಮುಖ್ಯ ಆಶ್ರಯ ನೀಡಿರುವ ಪರ್ಯಾಯ ಪುತ್ತಿಗೆ ಮಠ ಮಹತ್ವದ ಯೋಜನೆಯಾದ ಭಗವದ್ಗೀತಾ ಕೋಟಿಯಜ್ಞದ ಅಂಗವಾಗಿ ಭಗವದ್ಗೀತೆಯ ಕುರಿತ ಗೋಷ್ಠಿಗಳು ಮತ್ತು ಪ್ರಬಂಧ ಮಂಡನೆಗಳು ನಡೆಯಲಿವೆ.

ಉಡುಪಿ ಮತ್ತು ಕರಾವಳಿಭಾಗದ ಮಟ್ಟಿಗೆ ಇದೊಂದು ಐತಿಹಾಸಿಕ ಕಾರ್ಯಕ್ರಮ.. ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿರುವ ಎಲ್ಲ ಹಿರಿ ಕಿರಿಯ ವಿದ್ವಾಂಸರಿಗೆ ವಿಮರ್ಶಕ ಸಾಹಿತಿಗಳಿಗೆ ಪ್ರಾಧ್ಯಾಪಕರಿಗೆ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಇದೊಂದು ವಿಶೇಷ ಅವಕಾಶ ಮತ್ತು ಅನುಭವ ನೀಡ್ತದೆ ಎಂಬುದು ಸಂಘಟಕರ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.