ADVERTISEMENT

ಚುರುಮುರಿ | ಕುಸಿತದ್ದೇ ಕಥೆ

ಲಿಂಗರಾಜು ಡಿ.ಎಸ್
Published 22 ಅಕ್ಟೋಬರ್ 2024, 0:08 IST
Last Updated 22 ಅಕ್ಟೋಬರ್ 2024, 0:08 IST
   

‘ಕಮಲದೋರು ಐದನೇ ತಲೆಮಾರಿಗೆ ಟಿಕೆಟ್ ಕೊಟ್ಟು ಫ್ಯಾಮಿಲಿ ಪಾಲಿಟಿಕ್ಸಿಗೆ ಗ್ರೀನ್ ಅಲರ್ಟ್ ತೋರಿಸ್ಯವರೆ. ಹಂಗೇ ಬೆಂಗಳೂರೇಲಿ ಹುಯ್ಯತಿರೋ ಮಾಮೇರಿ ಮಳೆಗೆ ಯಲ್ಲೋ ಅಲರ್ಟ್ ಕೊಟ್ಟವ್ರಂತೆ’ ಅಂತಂದೆ.

‘ನಿಮಿಗೆ ಗೊತ್ತಿಲ್ಲವ್ರಾ, ಬಂಗಾಳದ ಕೊಲ್ಲೀಲಿ ವಾಯುಭಾರ ಕುಸಿತವಂತೆ. ವಾಯುವಿಗೆ ಭಾರವೇ ಇಲ್ಲ, ಅದೆಂಗೆ ಕುಸಿದದು ಅಂತ ಅರ್ಥಾಯ್ತಿಲ್ಲ’ ಚಂದ್ರು ಬಾಯ ಮೇಲೆ ಬೆಳ್ಳು ಮಡಗಿದ.

‘ಕಾಲೇಜಲ್ಲಿ ಜಾಗ್ರಫಿ ಕ್ಲಾಸಿಗೆ ಕದೀಬ್ಯಾಡ ಕಲಾ ಕುಸಿದೋಯ್ತಿಯ ಅಂತ ನಾನು ಬಡಕತ್ತಿದ್ದೆ. ನೋಡೀಗ’ ಆಕ್ಷೇಪಿಸಿದೆ.

ADVERTISEMENT

‘ಅವನು ವಾಯುಭಾರ ಕುಸಿತದ ಬಗ್ಗೆ ಹೇಳ್ತಾವ್ನೆ ಕನೋ. ಇಂತವೇ ಥರಾವರಿ ಕುಸಿತಗಳೇ ಜನಕ್ಕೆ ಬಲು ತೊಂದ್ರೆ ಕೊಡ್ತವೆ’ ತುರೇಮಣೆ ವಡಪು ಹಾಕಿದರು. ನಾವು ಬೆಪ್ಪರಂಗೆ ಅವರ ಮಕ ನೋಡಿದೋ. ತುರೇಮಣೆ ಮುಂದುವರೆಸಿದರು.

‘ಸ್ನಾಯುಭಾರದಿಂದ ಒಲಿಂಪಿಕ್ಸ್ ಪದಕ ತಪ್ಪೋಯ್ತದೆ. ಹಡಬಿಟ್ಟಿ ಕಾಸು ಜಾಸ್ತಿಯಾದ್ರೆ ನೈತಿಕತೆ ಕುಸಿದೋಯ್ತದೆ. ಕೆರೆ-ಕಟ್ಟೆಗಳ ನುಂಗಿದ್ಕೆ ಅಪಾರ್ಟ್‌ಮೆಂಟ್‌ ಮುಳುಗೋಯ್ತದೆ. ಐನ್ ಟೇಮಲ್ಲಿ ಬಿಬಿಎಂಪಿ ನೆಟ್‍ವರ್ಕೇ ಬಿದ್ದೋಯ್ತದೆ. ಬೆಳೆ ನಷ್ಟದಿಂದ ರೈತರ ಆದಾಯ ಕುಸೀತದೆ. ಕೆಪಿಎಸ್‍ಸಿ ಎಡವಟ್ಟಿನಿಂದ ಹದಿಮೂರು ಕೋಟಿ ಲಾಸಾತದೆ. ಚಂಪಟ್ಣಕ್ಕೆ ಅಭ್ಯರ್ಥಿ ಆಯ್ಕೆ ಮಾಡನಾರದೇ ಹೈಕಮಾಂಡುಗಳೇ ಮುಕ್ಕಿರಿತವೆ’ ತುರೇಮಣೆ ಉವಾಚ ಮುಂದುವರೆದಿತ್ತು.

‘ಬರೀ ಭಂಡತನದ ಸುದ್ದೀನೆ ಪುಂಗ್ತೀರಲ್ಲಾ ಸಾ. ಗಂಜೀಫಾ ಭಟ್ಟರಿಗೆ ಕಾಳಿದಾಸ ಸಮ್ಮಾನ್ ಬಂದದೆ ಅನ್ನೋ ಒಳ್ಳೆ ಸುದ್ದಿ ನಿಮ್ಮ ಕಣ್ಣಿಗೆ ಕಾಣಕ್ಕೇ ಇಲ್ಲವ್ರಾ?’ ಅಂತ ರೇಗಿದೆ.

‘ಇವನ ನಾಸಬಾಯಗೆ ಹೊಂಡೋ ಎಡವಟ್ ಸುದ್ದಿಗಳು ಕೇಳಿ ಕೇಳಿ ರೋಸೋಗ್ಯದೆ ಕಯ್ಯಾ. ಯಾರನ್ನ ಒಂದೊಳ್ಳೆ ಭುಕ್ತಿಗೀತೆ ಹೇಳಿರ್‍ಲಾ’ ಅಂತು ಯಂಟಪ್ಪಣ್ಣ.

‘ಮೂಡಾಲ್ ಕೆಸರೆ ಕತೆ, ನೋಡೋರ್ಗೊಂದ್ ಐಭೋಗ, ನೋಡಿ ಬರ್ತಾನೆ ಇ.ಡಿ. ಮಾಮ, ತಾನಂದನೋ’ ತುರೇಮಣೆ ಶುರುಮಾಡಿದ ಗಾನಪದ ಹಾಡಿನ ಕಿರಿಕ್ ಕೇಳಿ ನಮಗೆ ನಗಬೇಕೋ ಅಳಬೇಕೋ ತಿಳೀಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.