ADVERTISEMENT

ಚುರುಮುರಿ: ಶ್ರೀಸಾಮಾನ್ಯರೇ ವಾಸಿ!

ಸುಮಂಗಲಾ
Published 22 ಸೆಪ್ಟೆಂಬರ್ 2024, 22:47 IST
Last Updated 22 ಸೆಪ್ಟೆಂಬರ್ 2024, 22:47 IST
.
.   

‘ಎಲ್ಲಾ ದೇವರಲ್ಲಿ ಅತಿ ಹೆಚ್ಚು ಶ್ರೀಮಂತ ಯಾರು ಹೇಳು?’ ಬೆಕ್ಕಣ್ಣ ರಸಪ್ರಶ್ನೆಯೊಂದನ್ನು ನನ್ನತ್ತ ಎಸೆಯಿತು.

‘ಸ್ವರ್ಗದ ಕುಬೇರನನ್ನೂ ನಿವಾಳಿಸೋ ಹಂಗೆ ತಿರುಪತಿ ತಿಮ್ಮಪ್ಪನೇ ಹೆಚ್ಚು ಶ್ರೀಮಂತ ಅಂತ ಚಿಕ್ಕಮಕ್ಕಳಿಗೂ ಗೊತೈತಿ ಬಿಡಲೇ’ ಎಂದೆ.

‍‘2023-24ರ ಸಾಲಿನಲ್ಲಿ ತಿಮ್ಮಪ್ಪನ ಬ್ಯಾಂಕ್‌ ಠೇವಣಿ ರೆಕಾರ್ಡ್‌ ಬ್ರೇಕ್‌ ಅಂತೆ! ಬ್ಯಾಂಕಿನಾಗೆ ಹೋದ ವರ್ಸ 1,161 ಕೋಟಿ ರೂಪಾಯಿ
ಎಫ್‌.ಡಿ. ಮಡಗಿದಾನಂತೆ’.

ADVERTISEMENT

‘ಅಷ್ಟೇ ಅಲ್ಲ, ಇಷ್ಟು ವರ್ಷ ಬ್ಯಾಂಕಿನಾಗೆ ಎಫ್‌.ಡಿ. ಇಟ್ಟಿದ್ದು ಎಲ್ಲಾ ಸೇರಿದರೆ 13,287 ಕೋಟಿ ರೂಪಾಯಿ ಅಂತೆ’ ಎಂದೆ ನಾನು.

‘ನಿಮ್ಮಂಥ ಶ್ರೀಸಾಮಾನ್ಯ ಹೆಣ್ಣುಮಕ್ಕಳ ಹತ್ರ ಹತ್ತು ಗ್ರಾಂ ಚಿನ್ನ ಇರತೈತೋ ಇಲ್ಲೋ... ತಿಮ್ಮಪ್ಪನ ಹತ್ರ ಒಟ್ಟು 11,329.67 ಕೆ.ಜಿ. ಚಿನ್ನ ಐತಂತೆ! ಪ್ರತಿ ತಿಂಗಳೂ ಹುಂಡಿಗೆ ಬಂದು ಬೀಳೋ ರೊಕ್ಕನೇ ನೂರು ಕೋಟಿಗೂ ಹೆಚ್ಚಂತೆ’ ಬೆಕ್ಕಣ್ಣ ತಿಮ್ಮಪ್ಪನ ಸಂಪತ್ತನ್ನು ವರ್ಣಿಸಿತು.

‘ಎಷ್ಟು ರೊಕ್ಕ, ಎಷ್ಟ್‌ ಬಂಗಾರ ಇದ್ದರೇನು ಬಂತು… ಶುದ್ಧ ತುಪ್ಪದ ಲಡ್ಡು ಪ್ರಸಾದಕ್ಕೂ ತತ್ವಾರವಾಯಿತಲ್ಲ, ಛೆ’ ನಾನು ಲೊಚಗುಟ್ಟಿದೆ.

‍‘ಪಾಪದ ತಿಮ್ಮಪ್ಪ! ಇಷ್ಟಕೊಂದು ರೊಕ್ಕ, ಬಂಗಾರ ಎಲ್ಲ ಐತಿ. ಕಲಬೆರಕಿ ಇಲ್ಲದ ಛಲೋ ತುಪ್ಪ ಖರೀದಿ ಮಾಡ್ರಪ್ಪ ಅಂತ ತಿರುಪತಿ ದೇವಸ್ವ ಮಂಡಳಿಯವರಿಗೆ ಕರಾರು ಮಾಡೂದು ಬಿಟ್ಟು ಸುಮ್ನೆ ಕುಂತಾನ.  ದೇವರಿಗೇ ಹಿಂಗೆ ಕಲಬೆರಕೆ ತುಪ್ಪ ಕೊಟ್ಟಿರೋ ಪೂರೈಕೆದಾರರು ಹೊರಗೆ ಇನ್ನೆಷ್ಟು ಕಲಬೆರಕೆ ವ್ಯಾಪಾರ ಮಾಡ್ತಿರಬೌದು... ಮಹಾಪಾಪಿಗಳು’ ಎಂದು ಬೆಕ್ಕಣ್ಣ ಶಪಿಸಿತು.

‍‘ತಿಮ್ಮಪ್ಪನ ಹುಂಡಿಗೆ ತಪ್ಪುಕಾಣಿಕೆ ಹಾಕಿ, ಕಲಬೆರಕೆ ತುಪ್ಪದ ಪಾಪ ಪರಿಹಾರ ಮಾಡಿಕೊಳ್ತಾರೆ ಬಿಡು’ ಎಂದೆ.

‘ತಿಮ್ಮಪ್ಪನಿಗಿಂತ ನೀವು ಶ್ರೀಸಾಮಾನ್ಯರೇ ವಾಸಿ. ರೊಕ್ಕ ಇದ್ದರೆ ನಂದಿನಿ ತುಪ್ಪ ತರತೀರಿ ಅಥವಾ ಸಂತಿವಳಗೆ ಬೆಣ್ಣೆ ತಂದು ನೀವೇ ಕಾಯಿಸಿ, ಘಮಘಮ ತುಪ್ಪ ತಿಂತೀರಿ’ ಎಂದು ಬೆಕ್ಕಣ್ಣ ಮೊದಲ ಬಾರಿಗೆ ಶ್ರೀಸಾಮಾನ್ಯರನ್ನು ಮೆಚ್ಚಿಕೊಂಡಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.