ಹರಟೆಕಟ್ಟೆಗೆ ಬಹಳ ಜೋಶ್ನಿಂದ ಬಂದ ತೆಪರೇಸಿ ‘ಕಿಂಬೋಹೋ ಸರ್ವಭ್ಯಾಹ ಕುಶಲಂವಾ?’ ಎಂದ. ಮಂಜಮ್ಮಗೆ ಅರ್ಥವಾಗಲಿಲ್ಲ. ಗುಡ್ಡೆ, ದುಬ್ಬೀರ ಮುಖ ಮುಖ ನೋಡಿಕೊಂಡರು.
‘ಏನೋ ಹಂಗಂದ್ರೆ? ಯಾವ ಭಾಷೆ ಅದು?’ ಕೊಟ್ರೇಶಿ ಕೇಳಿದ.
‘ಏತತ್ ಸಂಸ್ಕೃತಂ ಭವಂತಹ ಮೂರ್ಖಾಹ ನ ಜಾನಂತೀ’ ಎಂದ ತೆಪರೇಸಿ.
‘ಮೋಸ್ಟ್ಲೀ ಏನೋ ಬೈದಂಗಾತಪ’ ಎಂದ ಗುಡ್ಡೆ. ಮಂಜಮ್ಮಗೆ ಸಿಟ್ಟು ಬಂತು. ‘ನಿನ್ ಮಕ ನಾಯಿ ನೆಕ್ಕ, ಅದೇನು ನೆಟ್ಟಗೆ ಬೊಗಳೋ’ ಎಂದಳು.
‘ಅರ್ಥ ಆಗ್ಲಿಲ್ವಾ? ಮೊದ್ಲು ಕೇಳಿದ್ದು ‘ಏನ್ರಲೆ ಎಲ್ಲ ಪಾಡದೀರಾ’ ಅಂತ. ಆಮೇಲೆ ಹೇಳಿದ್ದು ‘ಇದು ಸಂಸ್ಕೃತ, ನಿಮ್ಮಂಥ ದಡ್ಡರಿಗೆ ಅರ್ಥ ಆಗಲ್ಲ ಅಂತ. ನಾನು ಸಂಸ್ಕೃತ ಕಲೀತಿದೀನಿ’ ತೆಪರೇಸಿ ನಕ್ಕ.
‘ಹೌದಾ? ಮಾಡಾಕೆ ಬೇರೆ ಕೆಲ್ಸ ಇರ್ಲಿಲ್ವಾ?’ ಗುಡ್ಡೆ ಕೇಳಿದ.
‘ಸಂಸ್ಕೃತ ಕಲೀದಿದ್ರೆ ಸ್ವರ್ಗಕ್ಕೆ ಪ್ರವೇಶ ಇಲ್ಲಂತೆ, ಗುರುಗಳು ಹೇಳಿದ್ದು ಗೊತ್ತಿಲ್ವಾ?’
‘ಲೇಯ್ ಆ ತಗಡು ಸ್ವರ್ಗಕ್ಕೆ ಹೋಗಿ ಏನ್ ಮಾಡ್ತೀಯಲೆ. ಅಲ್ಲಿ ರಂಭೆ, ಊರ್ವಶಿ ಎಲ್ಲ ಮುದುಕರಾಗಿದಾರಂತೆ, ಸೋಮರಸ ಬಿಟ್ರೆ ಬೇರೆ ಬ್ರಾಂಡ್ ಸಿಗಲ್ಲಂತೆ’ ಗುಡ್ಡೆ ನಕ್ಕ.
‘ನೋಡು, ಸ್ವರ್ಗ, ನರಕ ಎಲ್ಲ ಇಲ್ಲೇ ಇರೋದು, ಆದ್ರೂ ನಿಂಗೆ ಮೇಲಿನ ಸ್ವರ್ಗನೇ ಬೇಕು ಅಂದ್ರೆ ನಿನ್ ಹೆಂಡ್ತಿ ದಾರಿ ತೋರಿಸ್ತಾಳೆ ಹೋಗು. ‘ನಾರಿ ಸ್ವರ್ಗಕ್ಕೆ ದಾರಿ’ ಅಂತ ಕೇಳಿಲ್ವ?’ ದುಬ್ಬೀರ ಅನುಭವದ ಮಾತಾಡಿದ.
‘ಅವನೆಂಡ್ತಿನಾ? ಸೀದಾ ನರಕಾನೇ ತೋರ್ಸೋದು’ ಕೊಟ್ರ ಕಿಸಕ್ಕೆಂದ.
‘ಯಾಕಲೆ? ಹೆಂಗೈತಿ ಮೈಯಾಗೆ?’ ತೆಪರೇಸಿಗೆ ಸಿಟ್ಟು ಬಂತು.
‘ಶಾಂತಿ, ಶಾಂತಿ... ಶಾನ್ತಿರ ಶಾನ್ತಸ್ಯ ಕುತಂ ಸ್ವರ್ಗಂ’ ಎಂದ ಪರ್ಮೇಶಿ.
‘ಏನೋ ನಿಂಗೂ ಸಂಸ್ಕೃತ ಬರುತ್ತಾ? ಏನು ಹಂಗಂದ್ರೆ?’
‘ಶಾಂತಿ ಇಲ್ಲದವನಿಗೆ ಸ್ವರ್ಗವಿಲ್ಲ ಅಂತ’ ಪರ್ಮೇಶಿ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.