ADVERTISEMENT

ಚುರುಮುರಿ | ನಿಮ್ಮ ತಲೆಗೆ ನಿಮ್ಮದೇ ಕೈ

ಲಿಂಗರಾಜು ಡಿ.ಎಸ್
Published 14 ಅಕ್ಟೋಬರ್ 2024, 22:26 IST
Last Updated 14 ಅಕ್ಟೋಬರ್ 2024, 22:26 IST
   

‘ಕರ್ನಾಟಕದ 16 ಜಿಲ್ಲೇಲಿ ಹವಮಾನ ಚೈಂಜ್ ಆಗಿ ಭಾರಿ ಎಪೆಕ್ಟಾಗ್ಯದಂತೆ?’ ಅಂತಂದ ಚಂದ್ರು.

‘ಅದೀಯೆ, ಕೊಡಗಿನಲ್ಲಿ ಸೆಕೆಯಂತೆ, ಯಾದಗಿರಿಯಲ್ಲಿ ಮಳೆ ಸುರೀತಾ ಅದೆ. ಇದರಿಂದ ಜನಕ್ಕೆ ಸ್ಯಾನೆ ಕಷ್ಟವಂತೆ. ಆರ್ಥಿಕತೆಗೆ ಪೆಟ್ಟಾಗ್ಯದೆ ಅನ್ನೋ ವರದಿ ಬತ್ತಾ ಅದೆ’ ನನ್ನ ಹೇಳಿಕೆ ಕೊಟ್ಟೆ.

‘ದಿಟ ಕಯ್ಯಾ, ರಾಜಕೀಯದೋರು ಅವುರಿಗೆ ಅವುರೇ ಅವಮಾನ ಮಾಡ್ಕ್ಯತ್ತಾವ್ರೆ. ಇದರ ಎಪೆಕ್ಟು ಮಂಡ್ಯ, ಚಾಮರಾಜ
ನಗರದೇಲಿ ಜಾಸ್ತಿಯಾಗ್ಯದೆ’ ಯಂಟಪ್ಪಣ್ಣ ಕಳವಳ ವ್ಯಕ್ತಪಡಿಸಿತು.

ADVERTISEMENT

‘ಎಲಾ ಎಡವಟ್ಟುಗಳಾ, ಅದು ಅವಮಾನವಲ್ಲ ಕನ್ರೋ. ಹೆಚ್ಚಿದ ಜನಸಂಖ್ಯೆ, ಕುಸಿದಿರೋ ಆದಾಯ, ಮಳೆ, ಪ್ರವಾಹ, ಬರದಂತಾ ಹವಾಮಾನ ವೈಪರಿತ್ಯಗಳು ಜನದ ಜೀವ ಕಿತುಗಂದು ತಿನ್ನತಾವೆ ಅಂದಿರದು’ ತುರೇಮಣೆ ಕ್ಲಾರಿಫಿಕೇಷನ್ ಕೊಟ್ಟರು.

‘ನಾವು ಅದ್ನೇ ಸಾ ಅಂದುದ್ದು. ರಾಜಕೀಯದೇಲಿ ಹವಾಮಾನ ಬದಲಾವಣೆಯಾಗಿ ಸೇಡಿನ ಬೆಂಕಿ ಕತ್ತಿಕ್ಯಂದು ಉರೀತಾ ಅದೆ. ಅದರ ಎಪೆಕ್ಟು ಅನುಭವಿಸ್ತಿರೋ ಜನದ ಕಣ್ಣೀರು ರಾಜಕಾರಣಿಗಳು ಒರೆಸ್ತರೆ ಅಂತ ತಿಳಕಂದುದ್ದೇ ತಪ್ಪು’ ಚಂದ್ರು ಸಿಡಿದ.

‘ಬಡವರು ಸತ್ತರೆ ಸುಡಕ್ಕೆ ಮಸಾಣಿಲ್ಲಾ, ಹೊತ್ತುಕೋಗಕ್ಕೆ ಅಪ್ಪಂತಾ ದಾರಿಲ್ಲಾ. ಡೆಂಗ್ಯು, ಎಚ್1ಎನ್1 ಜ್ವರ ಕಾಡ್ತಾವೆ. ಜನದ ಕಷ್ಟಕ್ಕೆ ಕೊನೆಯೇ ಇಲ್ದಂಗಾಗ್ಯದೆ. ರಾಜಕೀಯದವು ಮಾತ್ರ ಊರ ಮ್ಯಾಲೆ ಊರು ಬಿದ್ದರೆ ನಂದೇನು ಹೋದತ್ತು ಅಂತ ಕೋಮುಗಾರಿಕೆ ಮಾಡ್ತಾ ಕೂತವೆ’ ಅಂತು ಯಂಟಪ್ಪಣ್ಣ.

‘ನಿಮ್ಮ ಯೇಗ್ತೇಗೆ ಇದೇ ಜಾಸ್ತಿಯಾತು ಅಂತ ರಾಜಕಾರಣಿಗಳು ತಿಳಕಂದವೆ. ನಿಮ್ಮ ಬಂಗವೇ ಹೇಳಿಕ್ಯಂದರೆ ರಾಜಕೀಯದೋರ ಬಂಗ ಕೇಳೋರು ಯಾರ‍್ಲಾ?’ ಅಂದ್ರು ತುರೇಮಣೆ.

‘ಅವರದ್ದೇನು ಬಂಗ ಸಾ?’ ನಾನು ಕೇಳಿದೆ.

‘ರಾಜಕೀಯದೋರು ಹಣ, ಅಧಿಕಾರ ಇಲ್ಲದಿದ್ದರೆ ಮುಂದೆಂಗೆ ಅಂತ ತಲೆಗೆ ಕೈ ಕೊಟ್ಕಂದು ಕೂತವ್ರೆ. ನಿಮ್ಮ ದರ್ದು ನಿಮ್ಮದು. ನಿಮ್ಮ ತಲೆಗೆ ನಿಮ್ಮದೇ ಕೈ’ ತುರೇಮಣೆ ಘೋರ ಸತ್ಯ ಬಿಚ್ಚಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.