ADVERTISEMENT

ಚುರುಮುರಿ | ಸಮ್ಮೇಳನ ಸಂಕಟ

ಮಣ್ಣೆ ರಾಜು
Published 15 ಅಕ್ಟೋಬರ್ 2024, 22:36 IST
Last Updated 15 ಅಕ್ಟೋಬರ್ 2024, 22:36 IST
   

‘ಮದುವೆಗೆ ದುಡ್ಡು ಹೊಂಚುವುದಕ್ಕಿಂತ ಮದುವೆ ಇನ್ವಿಟೇಷನ್ ಹಂಚುವುದೇ ಕಷ್ಟ ಎನ್ನುವಂತಾಗಿದೆ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರ’ ನ್ಯೂಸ್‌ಪೇಪರ್ ಓದುತ್ತಾ ಶಂಕ್ರಿ ಹೇಳಿದ.

‘ಹೌದೂರಿ, ಸಮ್ಮೇಳನದ ಖರ್ಚಿಗಿಂತ ಸಮ್ಮೇಳನಾಧ್ಯಕ್ಷರ ಕುರ್ಚಿ ವಿಚಾರವೇ ಹೆಚ್ಚು ಚರ್ಚೆಯಾಗ್ತಿದೆ’ ಸುಮಿ ಮಾತಿಗೆ ಜೊತೆಯಾದಳು.

‘ಹಿಂದೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸಾಹಿತಿಯೊಬ್ಬರಿಗೆ ಪಟ್ಟ ಕಟ್ಟುವ ಸಂಪ್ರದಾಯವಿತ್ತು. ಸಾಹಿತ್ಯೇತರರೂ ಅಧ್ಯಕ್ಷರಾಗಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿ ಕುರ್ಚಿ ಕಂಟಕ ಎದುರಾಗಿದೆ’.‌

ADVERTISEMENT

‘ಕನ್ನಡಿಗರೆಲ್ಲರೂ ಸಾಹಿತ್ಯ ಪರಿಷತ್ತಿಗೆ ಸದಸ್ಯರಾಗಬಹುದು ಎನ್ನುವಾಗ ಸಾಹಿತ್ಯೇತರ ಕನ್ನಡಿಗ ಅಧ್ಯಕ್ಷರಾಗಬಾರದೇಕೆ?’

‘ಆಗಬಹುದು, ಸಮ್ಮೇಳನಾಧ್ಯಕ್ಷರಾದವರು ತಮ್ಮ ಭಾಷಣವನ್ನು ತಾವೇ ಬರೆದು ಓದುವಷ್ಟಾದರೂ ಸಾಹಿತ್ಯ ಜ್ಞಾನ ಇರಬೇಕಲ್ಲವೇ ಎಂಬುದು ಸಾಹಿತಿಗಳ ವಾದ’.

‘ವಾದ, ವಿವಾದವಿಲ್ಲದೆ ಇತ್ತೀಚೆಗೆ ಯಾವ ಸಮ್ಮೇಳನಗಳು ನಡೆದಿವೆ ಹೇಳಿ? ಸಾಹಿತ್ಯ ಪರಿಷತ್ತಿಗೆ ಹೈಕಮಾಂಡ್ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’.

‘ಹೈಕಮಾಂಡಾ?!’

‘ಮಂತ್ರಿ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಹೆಚ್ಚಾದಾಗ ಹೈಕಮಾಂಡ್ ಆಯ್ಕೆ ಮಾಡಿದವರನ್ನು ಪಕ್ಷದವರು ಸಮ್ಮತಿಸುತ್ತಾರಲ್ಲ ಹಾಗೇ ಇಲ್ಲೂ ಆಗಬೇಕಾಗುತ್ತದೆ. ಸರ್ಕಾರವೇ ಹೈಕಮಾಂಡ್ ರೀತಿ ನಡೆದುಕೊಂಡು ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಿ ವಿವಾದ ಬಗೆಹರಿಸಬೇಕಾಗುತ್ತದೆ’.

‘ನಿಗಮ, ಮಂಡಳಿ, ಪ್ರಾಧಿಕಾರಕ್ಕೆ ನೇಮಕ ಮಾಡಿದಂತೆ ತಮ್ಮ ಪಕ್ಷದ ಬೆಂಬಲಿಗರನ್ನೇ ಸರ್ಕಾರವು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂಬ ಆಕ್ಷೇಪ ವ್ಯಕ್ತವಾಗುತ್ತದೆ’.

‘ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾದಾಗ ಅರ್ಧ ಅವಧಿಗೆ ಒಬ್ಬರು, ಇನ್ನೊಂದು ಅವಧಿಗೆ ಇನ್ನೊಬ್ಬರು ಅಂತ ನಾಯಕರು ಒಪ್ಪಂದ ಮಾಡಿಕೊಳ್ಳುವಂತೆ, ಮೂರು ದಿನದ ಸಮ್ಮೇಳನದಲ್ಲಿ ಒಂದೊಂದು ದಿನ ಒಬ್ಬೊಬ್ಬರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬಹುದಲ್ವೇ?’

‘ಸಮ್ಮೇಳನಕ್ಕೆ ಮೌಲ್ಯ ಮುಖ್ಯವಲ್ಲ
ಎನ್ನುವುದಾದರೆ ದಿನಕ್ಕೊಬ್ಬರು, ಗೋಷ್ಠಿಗೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಬಹುದು’ ಶಂಕ್ರಿ ಸಿಟ್ಟಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.