ADVERTISEMENT

ಚುರುಮುರಿ: ರಾಜಕೀಯ ಅಂತ್ಯಾಕ್ಷರಿ!

ತುರುವೇಕೆರೆ ಪ್ರಸಾದ್
Published 16 ಅಕ್ಟೋಬರ್ 2024, 22:05 IST
Last Updated 16 ಅಕ್ಟೋಬರ್ 2024, 22:05 IST
   

‘ಇವತ್ತು ಒಂದು ಹೊಸ ಆಟ ಆಡೋಣ’ ಎಂದ ಗುದ್ಲಿಂಗ ಹರಟೆಕಟ್ಟೇಲಿ. ‘ಅದ್ಯಾವ ಆಟ ಹೇಳು’ ಎಂದ ಮಾಲಿಂಗ.

‘ನಮ್ ನಾಯುಕ್ರು ಒಬ್ರಿಗೊಬ್ರು ಅಂತ್ಯ ಹಾಡಕ್ಕೆ ಒಂಟವ್ರಲ್ಲ. ಆ ರಾಜಕೀಯ ಅಂತ್ಯಾಕ್ಷರಿ ಆಡೋಣ. ನಾನು ಕೈ ಹಗರಣವೊಂದರಿಂದ ಶುರು ಮಾಡ್ತೀನಿ. ನೀವು ಕೊನೇ ಅಕ್ಷರದಿಂದ ಮೈತ್ರಿ ವಿರೋಧ ಪಕ್ಷದ್ದು ಇನ್ನೊಂದು ಹಗರಣ ಹೇಳ್ಬೇಕು. ಮುಡಾ’ ಎಂದ ಗುದ್ಲಿಂಗ.

‘ಡ’ದಿಂದ ಶುರುವಾಗ್ಬೇಕು... ಹಾಂ, ಸಿಕ್ತು. ಡಿ.ದೇವರಾಜ ಅರಸ್ ಟರ್ಮಿನಲ್’ ಕಿರುಚಿದ ಕಲ್ಲೇಶಿ. ಲೂಟಿ ಲೂಟಿ... ನಿಗಮದಲ್ಲಿ ಲೂಟಿ ಎಂದ ಈರಭದ್ರ. ನಿಗಮದ ಆರಂಭಿಕ ಹೆಸರು ‘ಕಿ’ಯಿಂದ ಕೊನೆಯಾಗುತ್ತದೆ... ಕಿಯೋನಿಕ್ಸ್’.

ADVERTISEMENT

‘ಸ ಅಂದ್ರೆ ಸಹಕಾರಿ’.

‘ರ, ರಿ... ತಲೆ ಕೆರೆದುಕೊಂಡ ಮಾಲಿಂಗ. ಆಂ ಸಿಕ್ತು... ರೀಡೂ ಅರ್ಕಾವತಿ’.

‘ಸೂಪರ್ ಕಣೋ, ತ, ಥದಿಂದ ಹೇಳ್ಬೇಕೀಗ. ಯಾವ್ದಿದೆ? ಹಾಂ! ಯುರೇಕಾ, ಸಿಕ್ತು ಸಿಕ್ತು ಥೀಂ ಪಾರ್ಕ್, ಪರಶುರಾಂ ಥೀಂ ಪಾರ್ಕ್. ಮತ್ತೆ ‘ಕ’ಯಿಂದ ಶುರುವಾಗ್ಬೇಕು’.

‘ಕ’ಗೊಂದು ಭಾರಿ ಐಟಂ ಐತೆ, ಕೊರೊನಾ’.

‘ನ ಕಾರದಿಂದ ಬರ್ಬೇಕು. ಆಂ...ನಿವೇಶನ... ಸಿ.ಎ ನಿವೇಶನ... ಮತ್ತೆ ‘ನ’ ಬಂತು. ಅದರ ಬದ್ಲು ಸೈಟು. ‘ಟ’ ಇಂದ ಹೇಳ್ರಲಾ’ ಎಂದ ಕಲ್ಲೇಶಿ.

‘ಪ್ರವಾಸೋದ್ಯಮ ಇಲಾಖೆಲೂ ಹಿಂದೆ ಗೋಲ್‍ಮಾಲ್ ಆಗೈತೆ ಅಂತ ಕೈನೋರು ಹೇಳ್ತಾವ್ರಲ್ಲ, ಸೋ ಟೂರಿಸಂ’.

‘ಸ, ಸಂ...ಯಾವ್ದಿದೆ? ಆಂ... ಸಮ್‍ಥಿಂಗ್... ನೇಮಕದಿಂದ ಹಿಡ್ದು ವರ್ಗಾವಣೆವರೆಗೆ ಎಲ್ಲದಕ್ಕೂ ಕೊಡ್ಬೇಕಲ್ಲ...!’

‘ಗ...ಗ...ಗ... ಹಾಂ.. ಗಣಿ ಹಗರಣ, ಗಂಗಾಕಲ್ಯಾಣ’ ಹುಡುಕೇಬಿಟ್ಟ ಗುದ್ಲಿಂಗ.

‘ಣಯಿಂದ ಯಾವ ಶಬ್ದನೂ ಇಲ್ಲ ಕಣ್ರಲೇ. ಅಂತ್ಯಾಕ್ಷರಿ ಇಲ್ಲಿಗೆ ಬಂದ್’ ಎಂದ ಮಾಲಿಂಗ.

‘ರಾಜಕೀಯನೇ ಅಂಗೆ ಕಣ್ಲಾ. ಎಲ್ಲಾ ಮುಂದೆ ಹೇಳಕ್ಕಾಗದ ‘ಣ’ಗೆ ಬಂದು ನಿಂತ್ಕತದೆ. ಕಲ್ಯಾಣ ಕಲ್ಯಾಣ ಅಂತಿರ್ತಾರೆ, ಆಮೇಲೆ ಹಗರಣ ಹಗರಣ ಆಯ್ತದೆ. ಜನಕ್ಕೆ ಉಳಿದಿರೋದು ಒಂದೇ: ನಾಯಕರೇ ನಿಮಗೆ ‘ಣಮೋ ಣಮಃ’ ಅಂತ ಕೈ ಮುಗ್ಯೋದು’ ಎಂದ ಪರ್ಮೇಶಿ. ಎಲ್ಲಾ ಗೊಳ್ಳನೆ ನಕ್ಕರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.