ADVERTISEMENT

ಚುರುಮುರಿ: ಸತ್ಯ ಮಾಡ್ರಿ!

ಲಿಂಗರಾಜು ಡಿ.ಎಸ್
Published 9 ಸೆಪ್ಟೆಂಬರ್ 2024, 19:30 IST
Last Updated 9 ಸೆಪ್ಟೆಂಬರ್ 2024, 19:30 IST
.
.   

‘ನೆನ್ನೆ ಬೆಕ್ಕಣ್ಣ ಬ್ರೂನಿ ರಾಜನ ಅರಮನೆ ಐಭೋಗ ಹೇಳ್ತಿದ್ನಲ್ಲಾ ಅದು ದಿಟವೇನಿರ್ಲಾ? ಹಿಂಗೂ ಒಂದು ದೇಸ ಇದ್ದತ್ತೇ?’ ಯಂಟಪ್ಪಣ್ಣ ಬಾಯ ಮೇಲೆ ಬೆರಳು ಮಡಗಿತ್ತು.

‘ಆ ಸಣ್ಣ ದೇಸದೇಲಿ ಎಣ್ಣೆ, ಗ್ಯಾಸು ಬೇಜಾನ್ ಅದಂತೆ. ನಾನೂವೆ ಅರಮನೆಗೋಗಿ ಮಾರಾಜ್ರ ಚಿನ್ನದ ರೋಲೀಸುರಾಯರ ಕಾರು ಮುಟ್ಟಿ ಪುಸ್ಕಟ್ಟೆ ಎಣ್ಣೆ ಹೊಡದು ಬರಬಕು ಸಾ’ ಚಂದ್ರು ಆಸೆಪಟ್ಟ.

‘ಲೇ ಬಡ್ಡೇತ್ತುದೇ ಎಣ್ಣೆ ಅಂದ್ರೆ ಪೆಟ್ರೋಲು-ಡೀಜೆಲ್ಲು ಕಲಾ, ಸರಾಪಲ್ಲ. ಅಲ್ಲೇನಾದ್ರೂ ನೀನು ಕೋತಚೇಷ್ಟೆ ಮಾಡಿದರೆ ಶೆಡ್ಡಿಗೆ ಎತ್ತಾಕ್ಯಂದೋಗಿ ರುಬ್ಬತರೆ. ಅಲ್ಲಿ ಜನ ಉಸಿರು ಕಿಸಿಯಂಗಿಲ್ಲ’ ತುರೇಮಣೆ ಛೇಡಿಸಿದರು.

ADVERTISEMENT

‘ಇಲ್ಲಿ ನಾವೂ ಹಂಗೆ ಅಲ್ಲುವ್ರಾ ಬದುಕ್ತಿರದು. ಜನಕ್ಕೆ ಬೇಕೋ ಬ್ಯಾಡವೋ ಸಾವಿರಾರು ಕೋಟಿ ಸುರಿದು ಕೊರೆಯದು, ಮುರಿಯದು ನಡೀತಾ ಅದೆ. ‘ನಾನೂ ಸೀನಿಯರ್. ನನಗೂ ಸಿಎಂ ಆಗಕ್ಕೆ ಅವಕಾಸ ಅದೆ. ಪಾಲು-ಪಾರೀಕತ್ತು ಮಾಡಿ ಚೇರು ಕೊಡ್ರಿ’ ಅಂತ ಕೆಲವರು ನುಲೀತಾವ್ರೆ’ ನನ್ನ ಅಭಿಪ್ರಾಯ ಹೇಳಿದೆ.

‘ಗುಂಡಿ-ಗೊಟರು ಕಾಣದೆ ಬೈಕು-ಸ್ಕೂಟ್ರು ಸಮೇತ ಜನ ಬಿದ್ದು ವಯಕ್ ಅಂತಾವ್ರೆ. ರೋಡ ರಿಪೇರಿ ಮಾಡದು ಬುಟ್ಟು ‘ಪರಿಹಾರ ಕೊಡ್ತೀವಿ. ಇನ್ನು ಹದಿನೈದು ದಿನದೊಳಗೆ ಗುಂಡಿ ಮುಚ್ಚದೇಯ’ ಅಂದ್ಕಂದು ಕೂತರೆ ಆದತ್ತೇ. ಮನೆ ಕೆಲಸ ಮಾಡದು ಬುಟ್ಟು ಗೃಹಲಕ್ಷ್ಮಿ ರೀಲ್ಸ್ ಮಾಡ್ರಿ ಅಂತರೆ. ಕಾಯಿಗಿಂತ ಜುಟ್ಟೇ ಉದ್ದ ಅಂದಂಗಾಯ್ತು ನಮ್ಮ ಕತೆ’ ಯಂಟಪ್ಪಣ್ಣ ಸಿಟ್ಟಿಗೆ ಬಿದ್ದಿತ್ತು.

‘ಮೂರೂ ಪಕ್ಸದೋರ ಧರ್ಮಸ್ಥಳಕ್ಕೆ ಕರಕೋಗಿ ನಮಪ್ಪ ಮಂಜ್ನಾತ ಸ್ವಾಮಿ ಮುಂದೆ ತೀರ್ಥ ಕೈಗೆ ಬುಟ್ಟು ‘ಇನ್ನು ಮ್ಯಾಲೆ ನೀಯತ್ತಿಂದ ಕ್ಯಾಮೆ ಮಾಡಿಕ್ಯಂಡಿರತೀವಿ, ತಲೆಲ್ಲಾ ಮಾತಾಡಕುಲ್ಲ’ ಅಂತ ಪ್ರಮಾಣ ಮಾಡ್ರಯ್ಯ ಅನ್ನಬಕು. ಯಂಗೋ ಇವು ನಮ್ಮ ಬಡ್ಡೆಗೆ ಬರದಿದ್ರೆ ಸಾಕು’ ತುರೇಮಣೆ ಶರಾ ಬರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.