ADVERTISEMENT

ಸಂಪಾದಕೀಯ| ಲೆ.ಗವರ್ನರ್‌ಗೆ ಹೆಚ್ಚು ಅಧಿಕಾರ:ಚುನಾಯಿತ ಸರ್ಕಾರದ ಮಹತ್ವಕ್ಕೆ ಕುತ್ತು

ಸಂಪಾದಕೀಯ
Published 19 ಜುಲೈ 2024, 21:44 IST
Last Updated 19 ಜುಲೈ 2024, 21:44 IST
   

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ಗೆ ಹೆಚ್ಚಿನ ಅಧಿಕಾರ
ವನ್ನು ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕವೇ ಜನರನ್ನು ಸಶಕ್ತಗೊಳಿಸಬೇಕು ಎಂಬ ತತ್ವಕ್ಕೆ ಈ ನಿರ್ಧಾರವು ವಿರುದ್ಧವಾಗಿದೆ. ಜೊತೆಗೆ, ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂಬ ಭರವಸೆಯನ್ನು ನಿರ್ಲಕ್ಷಿಸಿದಂತಾಗಿದೆ. ಜಮ್ಮು ಮತ್ತು ಕಾಶ್ಮೀರ ‍ಪುನರ್‌ಸಂಘಟನೆ ಕಾಯ್ದೆ– 2019ರ ನಿಯಮಗಳಿಗೆ ಕೇಂದ್ರವು ತಿದ್ದುಪಡಿ ತಂದಿದೆ. ಗೃಹ ಇಲಾಖೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ತನಿಖೆಗೆ ಅನುಮತಿ ನೀಡುವ
ಅಧಿಕಾರವನ್ನು ಲೆಫ್ಟಿನೆಂಟ್‌ ಗವರ್ನರ್‌ಗೆ ನೀಡಲಾಗಿದೆ. ಇದರಿಂದಾಗಿ, ಬೇರೆ ರಾಜ್ಯಗಳಲ್ಲಿ ಇರುವ ರೀತಿಯ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಜಮ್ಮು–ಕಾಶ್ಮೀರದಲ್ಲಿ ಇರುವುದಿಲ್ಲ. ಸಾಮಾನ್ಯವಾಗಿ ಸಚಿವಾಲಯಗಳು ನಿರ್ಧಾರಗಳನ್ನು ಕೈಗೊಳ್ಳುತ್ತವೆ. ಆದರೆ, ಜಮ್ಮು–ಕಾಶ್ಮೀರದಲ್ಲಿ ಪೊಲೀಸ್‌ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ನಿರ್ಧಾರಗಳನ್ನು ಲೆಫ್ಟಿನೆಂಟ್‌ ಗವರ್ನರ್‌ ಅವರೇ ತೆಗೆದುಕೊಳ್ಳಬಹುದು. ಮುಖ್ಯ ಕಾರ್ಯದರ್ಶಿಯು ಇಂತಹ ನಿರ್ಧಾರಗಳಿಗೆ ಲೆಫ್ಟಿನೆಂಟ್‌ ಗವರ್ನರ್‌ ಅವರಿಂದ ನೇರವಾಗಿ ಅನುಮತಿ ಪಡೆದುಕೊಳ್ಳಬಹುದು. 

ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ನಿಯಮಗಳಿಗೆ ಎರಡನೆಯ ಬಾರಿ ಅಧಿಸೂಚನೆಯ ಮೂಲಕ ತಿದ್ದುಪಡಿ ಮಾಡಿದೆ. ಇಲ್ಲಿ ವಿಧಾನಸಭೆ ಚುನಾವಣೆ ನಡೆಸಿ ಜನಾದೇಶ ಪಡೆದ ಸರ್ಕಾರವನ್ನು ಸ್ಥಾ‍ಪಿಸುವ ಯೋಚನೆ ಇದೆ ಎಂಬುದರ ಹಿನ್ನೆಲೆಯಲ್ಲಿ ಕೇಂದ್ರದ ನಿರ್ಧಾರವನ್ನು ನೋಡಬೇಕಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಸೆಪ್ಟೆಂಬರ್‌ 30ರೊಳಗೆ ಚುನಾವಣೆ ನಡೆಸಬೇಕಿದೆ. ಸಾಮಾನ್ಯವಾಗಿ, ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರಗಳನ್ನು ಲೆಫ್ಟಿನೆಂಟ್‌ ಗವರ್ನರ್‌ಗೆ ನೀಡುವ ಮೂಲಕ ಚುನಾಯಿತ ಸರ್ಕಾರದ ಮಹತ್ವವನ್ನು ಕೇಂದ್ರವು ಕುಂದಿಸಿದೆ. ಮಹತ್ವದ ವಿಚಾರಗಳ ಕುರಿತಂತೆ ಲೆಫ್ಟಿನೆಂಟ್‌ ಗವರ್ನರ್‌ ಅವರು ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯು ಚುನಾಯಿತ ಸರ್ಕಾರ ಸ್ಥಾಪನೆಯಾದ ಮೇಲೆಯೂ ಮುಂದುವರಿಯಲಿದೆ. ಲೆಫ್ಟಿನೆಂಟ್‌ ಗವರ್ನರ್‌ ಅವರು ಕೇಂದ್ರದಿಂದ ನೇಮಕವಾಗಿರುವ, ಕೇಂದ್ರ ಸರ್ಕಾರ ಹೇಳಿದ್ದನ್ನು ಪಾಲಿಸುವವರಾಗಿಯೇ ಇರುತ್ತಾರೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮರುಸ್ಥಾಪನೆ ಆಗಬೇಕು ಎಂಬ ಕುರಿತು ಅಲ್ಲಿನ ಜನರು ಕಾತರರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿನ ಮತದಾನದ ಪ್ರಮಾಣವೇ ಅದಕ್ಕೆ ಪುರಾವೆಯಾಗಿದೆ. ಹತ್ತು ವರ್ಷಗಳ ಬಳಿಕ ನಡೆಯಲಿರುವುದರಿಂದ ವಿಧಾನಸಭೆ ಚುನಾವಣೆಗೆ ಹೆಚ್ಚಿನ ಮಹತ್ವ ಇದೆ. 

ಆಡಳಿತವು ಸುಲಲಿತವಾಗಿ ನಡೆಯುವುದಕ್ಕಾಗಿ ನಿಯಮಗಳನ್ನು ಬದಲಾಯಿಸಲಾಗಿದೆ; ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಅವರ ಅಧಿಕಾರಗಳೇನು ಎಂಬುದನ್ನು ಸ್ಪಷ್ಟವಾಗಿ
ವ್ಯಾಖ್ಯಾನಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಸರ್ಕಾರ ಹೇಳಿದಷ್ಟಕ್ಕೆ ಇದು ಸೀಮಿತವಾಗಿ ಇಲ್ಲ. ಈ ತಿದ್ದುಪಡಿಗಳು ಸರ್ಕಾರವನ್ನು ದುರ್ಬಲಗೊಳಿಸಿ, ಲೆಫ್ಟಿನೆಂಟ್‌ ಗವರ್ನರ್‌ಗೆ ಅತಿಯಾದ ಅಧಿಕಾರವನ್ನು ಕೊಡುತ್ತವೆ. ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ನಡುವೆ ನಿರಂತರವಾಗಿ ನಡೆದ ಜಟಾಪಟಿಯನ್ನು ನಾವು ನೋಡಿದ್ದೇವೆ. ಕಾಶ್ಮೀರವನ್ನು ಕೂಡ ಇಂತಹ ಸನ್ನಿವೇಶಕ್ಕೆ ತಳ್ಳುವುದು ಸರಿಯಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆ ಇಲ್ಲದಿರುವುದು ಮತ್ತು ಕೇಂದ್ರ ಸರ್ಕಾರದ ಮೇಲಿನ ವಿಶ್ವಾಸದ ಕೊರತೆಯು ಕಾಶ್ಮೀರದ ಜನರಲ್ಲಿ ಇರುವ ಅಸಮಾಧಾನಕ್ಕೆ ಕಾರಣ. ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮತ್ತು ಚುನಾವಣೆ ಎಂಬುದು ‍ಪ್ರಹಸನ ಎಂಬ ಭಾವನೆ ಜನರಲ್ಲಿ ಮೂಡುವಂತೆ ಮಾಡಬಾರದು. ಸರ್ಕಾರದ ಈಗಿನ ನಿರ್ಧಾರದಿಂದಾಗಿ ರಾಜ್ಯದ ಸ್ಥಾನ ಮರುಸ್ಥಾಪನೆಯ ಭರವಸೆ ಬಗ್ಗೆಯೂ ಅನುಮಾನ ಮೂಡುವಂತಾಗಿದೆ. ಏಕೆಂದರೆ, ರಾಜ್ಯ ಸ್ಥಾನ ಮರುಸ್ಥಾಪನೆಗೆ ಸರ್ಕಾರವು ಯಾವುದೇ ಕಾಲಮಿತಿಯನ್ನು ಹಾಕಿಕೊಂಡಿಲ್ಲ. ಈಗಿನ ಬದಲಾವಣೆಯು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ–ರಾಜ್ಯಗಳ ಸಂಬಂಧದ ಕುರಿತು ಕೆಟ್ಟ ಮತ್ತು ವಿಕೃತ ಮಾದರಿಯೊಂದನ್ನು ರೂಪಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.