ADVERTISEMENT

ಸಂಪಾದಕೀಯ: ಅಂತರ್ಜಾಲ ಸೇವೆಗೆ ಹೆಚ್ಚು ನಿಷೇಧ ಭಾರತಕ್ಕೆ ಮೊದಲ ಸ್ಥಾನದ ಕುಖ್ಯಾತಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 19:31 IST
Last Updated 10 ಮಾರ್ಚ್ 2023, 19:31 IST
   

ಇಂಟರ್ನೆಟ್ ಸೇವೆಯನ್ನು ಜಗತ್ತಿನಲ್ಲಿಯೇ ಅತಿ ಹೆಚ್ಚು ಬಾರಿ ಸ್ಥಗಿತಗೊಳಿಸಿದ ಕುಖ್ಯಾತಿಯನ್ನು ಸತತ ಐದನೇ ವರ್ಷವೂ ಭಾರತ ತನ್ನದಾಗಿಸಿಕೊಂಡಿದೆ. ಡಿಜಿಟಲ್‌ ಹಕ್ಕುಗಳ ಸಂಘಟನೆಗಳಾದ ‘ಆ್ಯಕ್ಸೆಸ್‌ ನೌ’ ಮತ್ತು ‘ಕೀಪ್‌ಇಟ್‌ಆನ್‌’ ಮೈತ್ರಿಕೂಟವು ಇತ್ತೀಚೆಗೆ ಪ್ರಕಟಿಸಿದ ವರದಿಯ ಪ್ರಕಾರ, 2016ರ ಬಳಿಕ ಜಗತ್ತಿನಲ್ಲಾದ ಅಂತರ್ಜಾಲ ಸೇವೆ ಸ್ಥಗಿತದಲ್ಲಿ ಶೇ 58ರಷ್ಟು ಭಾರತದ ಪಾಲು. 2015ರಿಂದ 2022ರವರೆಗಿನ ಅವಧಿಯಲ್ಲಿ ಅಂತರ್ಜಾಲ ಸೇವೆಯ ಸಂಪೂರ್ಣ ಸ್ಥಗಿತದ ಜೊತೆಗೆ, ವೆಬ್‌ಸೈಟ್‌
ಗಳನ್ನು ಸ್ಥಗಿತಗೊಳಿಸಿದ 55,000 ಪ್ರಕರಣಗಳೂ ವರದಿಯಾಗಿವೆ. ಅವುಗಳಲ್ಲಿ 22,000 ಪ್ರಕರಣಗಳು 2022ರಲ್ಲಿಯೇ ಆಗಿವೆ. ವಾಸ್ತವದಲ್ಲಿ ಅಂತರ್ಜಾಲ ಸೇವೆಯ ಸ್ಥಗಿತದ ಸಂಖ್ಯೆ ಇನ್ನೂ ಹೆಚ್ಚೇ ಇದೆ. ಏಕೆಂದರೆ, ಎಲ್ಲ ಪ್ರಕರಣಗಳೂ ವರದಿಯಾಗಿಲ್ಲ. ಸ್ಥಗಿತದ ಎಲ್ಲ ಪ್ರಕರಣಗಳನ್ನು ದಾಖಲಿಸಿ ಮಾಹಿತಿ ಬಿಡುಗಡೆ ಮಾಡುವುದನ್ನು ಸರ್ಕಾರ ಬಯಸುವುದಿಲ್ಲ. ಅಂತರ್ಜಾಲ ಸೇವೆ ಸ್ಥಗಿತದಲ್ಲಿ ಭಾರತದ ನಂತರದ ಸ್ಥಾನದಲ್ಲಿ ಉಕ್ರೇನ್‌ ಮತ್ತು ಇರಾನ್‌ ಇವೆ. ಭಾರತವು ಈಗ ಇರುವ ಸ್ಥಾನವು ದೇಶಕ್ಕೆ ಗೌರವ ತರುವ ವಿಚಾರವೇನೂ ಅಲ್ಲ. ಜಾಗತಿಕವಾಗಿ 2019ರಲ್ಲಿ ಅಂತರ್ಜಾಲ ಸೇವೆ ಸ್ಥಗಿತವು ಗರಿಷ್ಠ ಪ್ರಮಾಣದಲ್ಲಿ ಇತ್ತು. 2020ರಲ್ಲಿ ಅದು ಕಡಿಮೆ ಆಗಿತ್ತು. ಈಗ ಮತ್ತೆ ಹೆಚ್ಚಳವಾಗಿದೆ.

ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತ್ತೆಯು ಅಂತರ್ಜಾಲ ಸೇವೆಯ ಸ್ಥಗಿತದ ಅಸ್ತ್ರವನ್ನು ಅತಿ ಹೆಚ್ಚು ಬಾರಿ ಝಳಪಿಸಿದೆ ಎಂಬುದೇ ಪರಿಸ್ಥಿತಿಯ ವ್ಯಂಗ್ಯ. ಪರಿಸ್ಥಿತಿಯನ್ನು ನಿಭಾಯಿಸಲು ಅಂತರ್ಜಾಲ ಸೇವೆ ಸ್ಥಗಿತದ ಅಗತ್ಯ ಇರುವುದಿಲ್ಲ; ಹಾಗಿದ್ದರೂ ಸರ್ಕಾರದ ಮೊದಲ ಪ್ರತಿಸ್ಪ‍ಂದನೆ ಅದೇ ಆಗಿರುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ಸೇವೆಯ ಮೇಲೆ ಅತಿ ಹೆಚ್ಚು ಬಾರಿ ನಿಷೇಧ ಹೇರಲಾಗಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮತ್ತು ಹರಿಯಾಣದಲ್ಲಿಯೂ ಈ ಕ್ರಮ ಕೈಗೊಳ್ಳಲಾಗಿದೆ. ರೈತರು ಮತ್ತು ಇತರ ಗುಂಪುಗಳ ಪ್ರತಿಭಟನೆಗಳು, ಹತ್ಯೆಯಂತಹ ಸನ್ನಿವೇಶಗಳು, ಚುನಾವಣೆಗಳು ಮತ್ತು ಪರೀಕ್ಷೆಯಲ್ಲಿ ನಕಲು ತಡೆಯಂತಹ ಕಾರಣಗಳಿಗಾಗಿ ಅಂತರ್ಜಾಲ ಸೇವೆ ನಿಷೇಧದ ಹೇರಿಕೆ ನಡೆದಿದೆ. ಜನರ ಮೂಲಭೂತ ಹಕ್ಕನ್ನು ದಮನ ಮಾಡಲು ಈ ಕಾರಣಗಳು ಸಮಂಜಸ ಅಲ್ಲವೇ ಅಲ್ಲ. ಅಂತರ್ಜಾಲ ಸೇವೆಯ ಸ್ಥಗಿತದಿಂದಾಗಿ ವ್ಯಾಪಾರಗಳಿಗೆ ಮಾತ್ರವಲ್ಲದೆ ಜನರಿಗೂ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ. ಡಿಜಿಟಲ್‌ ಇಂಡಿಯಾ ಪರಿಕಲ್ಪನೆಯಲ್ಲಿ ಪೌರರ ಆನ್‌ಲೈನ್‌ ಲಭ್ಯತೆಯ ವ್ಯತ್ಯಯವು ಕನಿಷ್ಠ ಮಟ್ಟದಲ್ಲಿರಬೇಕು. ಆದರೆ, ಭಾರತದಲ್ಲಿ ಪರಿಸ್ಥಿತಿ ಹಾಗೆ ಇಲ್ಲ. ಸಂವಹನದಲ್ಲಿ ಸಮಸ್ಯೆ ಎದುರಾದರೆ ಆರ್ಥಿಕ ನಷ್ಟ ಮಾತ್ರವಲ್ಲದೆ, ಸುಲಲಿತ ವ್ಯಾಪಾರಕ್ಕೂ ಧಕ್ಕೆ ಉಂಟಾಗುತ್ತದೆ.

ಅಂತರ್ಜಾಲ ಸೇವೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತ ಮಾಡುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಸ್ಥಗಿತಗೊಳಿಸುವ ನಿರ್ಧಾರವನ್ನು ಸಕಾರಣಗಳ ಆಧಾರದಲ್ಲಿ ತೆಗೆದುಕೊಂಡಿರಬೇಕು ಮತ್ತು ಆ ನಿರ್ಧಾರವು ಪರಿಸ್ಥಿತಿಯ ತೀವ್ರತೆಯ ಪ್ರಮಾಣಕ್ಕೆ ಅನುಗುಣವಾಗಿರಬೇಕು ಎಂದೂ ನ್ಯಾಯಾಲಯ ಹೇಳಿದೆ. ಪರೀಕ್ಷೆಯಲ್ಲಿ ನಕಲು ತಡೆ ಅಥವಾ ಪ‍್ರತಿಭಟನೆಗಳನ್ನು ನಿಭಾಯಿಸಲು ಅಂತರ್ಜಾಲ ಸೇವೆಯ ಮೇಲೆ ನಿಷೇಧ ಹೇರುವುದು ಸಮಂಜಸವಾದ ಕಾರಣ ಎನಿಸಿಕೊಳ್ಳದು. ಅಂತರ್ಜಾಲ ಬಳಕೆಯ ಹಕ್ಕಿಗೆ ಸಂವಿಧಾನದ ರಕ್ಷಣೆ ಇದೆ; ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ಮಾತ್ರ ಅಂತರ್ಜಾಲ ಸೇವೆಯನ್ನು ನಿಷೇಧಿಸಬಹುದು ಎಂದೂ ನ್ಯಾಯಾಲಯ ಹೇಳಿದೆ. ಇಂತಹ ನಿಷೇಧಗಳು ನ್ಯಾಯಾಂಗದ ಪರಿಶೀಲನೆಯ ವ್ಯಾಪ್ತಿಯಲ್ಲಿಯೇ ಇವೆ. ಆದರೆ, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ಅಂತರ್ಜಾಲ ಸೇವೆಯ ಮೇಲೆ ಪದೇ ಪದೇ ನಿಷೇಧ ಹೇರುವ ‍ಪ್ರವೃತ್ತಿ ಇದೆ. ಅಂತರ್ಜಾಲ ಸೇವೆ ಸ್ಥಗಿತಕ್ಕೆ ನೀತಿ, ಸಂಹಿತೆ ಅಥವಾ ಪ್ರಕ್ರಿಯೆ ಇದೆಯೇ ಎಂಬುದು ಗೊತ್ತಿಲ್ಲ. ‘ಸರ್ಕಾರವು ನಿಯಂತ್ರಣದ ಅಸ್ತ್ರ ಮತ್ತು ಗುರಾಣಿಯ ರೀತಿಯಲ್ಲಿ ಅಂತರ್ಜಾಲ ಸೇವೆ ಸ್ಥಗಿತವನ್ನು ಬಳಸಿಕೊಳ್ಳುತ್ತಿದೆ’ ಎಂದು ‘ಆ್ಯಕ್ಸೆಸ್‌ ನೌ’ ಮತ್ತು ‘ಕೀಪ್‌ಇಟ್‌ಆನ್‌’ ವರದಿಯು ಹೇಳಿದೆ. ಜನರನ್ನು ಸಶಕ್ತಗೊಳಿಸುವ ಸೌಲಭ್ಯವನ್ನೇ ಬಳಸಿಕೊಂಡು ಅವರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.