ADVERTISEMENT

ಸಂಪಾದಕೀಯ | ವಿಷಯುಕ್ತ ಮದ್ಯ ಕುಡಿದು ಸಾವು: ಸರ್ಕಾರದ್ದೇ ಸಂಪೂರ್ಣ ಹೊಣೆ

ಸಂಪಾದಕೀಯ
Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
   

ತಮಿಳುನಾಡಿನ ಉತ್ತರ ಭಾಗದ ಕಲ್ಲಕುರಿಚ್ಚಿ ಎಂಬಲ್ಲಿ ವಿಷಯುಕ್ತ ಮದ್ಯ ಕುಡಿದು ಎರಡು ದಿನಗಳಲ್ಲಿ 47 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ದೊಡ್ಡ ದುರಂತ ಇದು. ಕಳೆದ ವರ್ಷವೂ ತಮಿಳುನಾಡಿನಲ್ಲಿ ವಿಷಯುಕ್ತ ಮದ್ಯದ ಎರಡು ದುರಂತಗಳು ನಡೆದಿದ್ದವು. ಅವುಗಳಲ್ಲಿ 17 ಜನರು ಮೃತಪಟ್ಟಿದ್ದರು. ಆದರೆ, ಅದಕ್ಕೂ ಹಿಂದಿನ 15 ವರ್ಷಗಳಲ್ಲಿ ಮದ್ಯಕ್ಕೆ ಸಂಬಂಧಿಸಿ ದುರಂತಗಳು ಘಟಿಸಿರಲಿಲ್ಲ. ಅಕ್ರಮವಾಗಿ ಮದ್ಯ ತಯಾರಿಸುವಿಕೆ, ಕಳ್ಳಬಟ್ಟಿಯಂತಹ ಪಿಡುಗನ್ನು ನಿಯಂತ್ರಿಸುವಲ್ಲಿ ಅಲ್ಲಿನ ಸರ್ಕಾರ ಯಶಸ್ವಿಯಾಗಿತ್ತು ಎಂದೇ ಭಾವಿಸಲಾಗಿತ್ತು. ಅಕ್ರಮ ಮದ್ಯ ತಯಾರಿಸಲು ಬಳಸಲಾಗುವ ಮೆಥನಾಲ್‌ ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಕಾಯ್ದೆಗೆ ತಿದ್ದುಪಡಿಯನ್ನೂ ತರಲಾಗಿತ್ತು. ಆದರೆ, ಅಕ್ರಮ ಮದ್ಯ ತಯಾರಿ ಮತ್ತು ಪೂರೈಕೆಯ ಸಮಸ್ಯೆ ಇನ್ನೂ ಇದೆ ಎಂಬುದರತ್ತ ಕಲ್ಲಕುರಿಚ್ಚಿ ಪ್ರಕರಣವು ಬೆಳಕು ಚೆಲ್ಲಿದೆ. ಬಹುಶಃ, ಇಷ್ಟು ವರ್ಷಗಳಲ್ಲಿ ಸಾವು ನೋವು ಸಂಭವಿಸಿಲ್ಲದ ಕಾರಣ ಈ ಕುರಿತು ಯಾರೂ ಗಮನಹರಿಸಿರಲಿಲ್ಲ. 

ವಿಷಯುಕ್ತ ಮದ್ಯ ಕುಡಿದು ಜನರು ಸಾಯುತ್ತಿದ್ದಾರೆ ಎಂದರೆ ಆಡಳಿತದ ವೈಫಲ್ಯವೇ ಅದಕ್ಕೆ ಕಾರಣ. ರಾಜ್ಯ ಸರ್ಕಾರವನ್ನೇ ಅದಕ್ಕೆ ಹೊಣೆ ಮಾಡಬೇಕಾಗುತ್ತದೆ. ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸುವುದು ಕಷ್ಟಸಾಧ್ಯ. ಆದರೆ, ಆರೋಗ್ಯಕರವಾದ ಮದ್ಯ ನೀತಿಯೊಂದನ್ನು ಜಾರಿಗೊಳಿಸುವುದು ಅಸಾಧ್ಯವೇನಲ್ಲ. ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ ನಿಯಮಿತವು (ಟಾಸ್‌ಮ್ಯಾಕ್‌) ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳನ್ನು ನಿರ್ವಹಿಸುತ್ತಿದೆ. ಆದರೆ, ಅಗ್ಗದ ದರದಲ್ಲಿ ಹೆಚ್ಚು ಮತ್ತು ತರುವಂತಹ ಮದ್ಯವು ದೊರೆತಾಗ ಜನರು ಅದರತ್ತ ಆಕರ್ಷಿತರಾಗುತ್ತಾರೆ. ಪೊಲೀಸ್‌ ಇಲಾಖೆ, ಅಬಕಾರಿ ಇಲಾಖೆ ಮತ್ತು ಜಿಲ್ಲಾಡಳಿತವು ಜಾಗೃತವಾಗಿದ್ದರೆ ಇದನ್ನು ತಡೆಯುವುದು ಕಷ್ಟವೇನಲ್ಲ. ಮೆಥನಾಲ್‌ ಪೂರೈಕೆಯನ್ನು ನಿಯಂತ್ರಣದಲ್ಲಿ ಇರಿಸುವುದು ಕೂಡ ಅಸಾಧ್ಯವಲ್ಲ. ವಿಷಯುಕ್ತ ಮದ್ಯ ತಯಾರಿಸುವವರು, ಅದನ್ನು ಸಾಗಿಸುವವರು, ಅದನ್ನು ಮಾರುವವರದ್ದು ಒಂದು ಜಾಲವಾದರೆ, ಅವರನ್ನು ರಕ್ಷಿಸುವುದಕ್ಕೂ ಪೊಲೀಸರು ಮತ್ತು ಇತರ ಅಧಿಕಾರಿಗಳು ಇರುವ ಒಂದು ಜಾಲ ಇದೆ. ಸ್ಥಳೀಯ ಮಟ್ಟದಲ್ಲಿ ಇವರಿಗೆ ರಾಜಕೀಯ ರಕ್ಷಣೆಯೂ ಇದೆ. ಇಂತಹ ರಕ್ಷಣೆ ಇಲ್ಲದೆ ಈ ರೀತಿಯ ಅಕ್ರಮ ಚಟುವಟಿಕೆ ನಡೆಸಲು ಸಾಧ್ಯವಿಲ್ಲ. ಕಲ್ಲಕುರಿಚ್ಚಿ ಜಿಲ್ಲಾಧಿಕಾರಿಯನ್ನು ವರ್ಗಾಯಿಸಲಾಗಿದೆ. ಕೆಲವು ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಇಲ್ಲವೇ ವರ್ಗಾಯಿಸಲಾಗಿದೆ. ಆದರೆ, ಅನಾಹುತ ನಡೆದ ಬಳಿಕ ಇಂತಹ ಕ್ರಮಗಳನ್ನು ಕೈಗೊಳ್ಳುವುದರಿಂದ ಯಾವುದೇ ಪ್ರಯೋಜನ ಇಲ್ಲ. 

ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟ ಜಾಲವನ್ನು ಪತ್ತೆ ಮಾಡಿ, ತಡೆಯುವಲ್ಲಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಅಬಕಾರಿ ಇಲಾಖೆಯು ವಿಫಲವಾಗಿವೆ. ಮೆಥನಾಲ್‌ ಪೂರೈಕೆಯ ಮೇಲೆ ನಿಗಾ ಇರಿಸುವಲ್ಲಿಯೂ ಇಲಾಖೆಗಳು ವಿಫಲವಾಗಿವೆ. ಮದ್ಯದ ದರವನ್ನು ಟಾಸ್‌ಮ್ಯಾಕ್‌ ಹೆಚ್ಚಳ ಮಾಡಿದೆ. ಇದರಿಂದಾಗಿಯೂ ಜನರು ಅಗ್ಗದ ಮದ್ಯ ಪೂರೈಸುವವರಿಂದ ಮದ್ಯ ಖರೀದಿ ಮಾಡಿದ್ದಾರೆ. ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದೆ. ಈ ದುರಂತಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ತಮಿಳುನಾಡಿನ ಬೇರೆ ಭಾಗಗಳಲ್ಲಿಯೂ ಅಕ್ರಮ ಮದ್ಯ ತಯಾರಿ ಜಾಲಗಳು ಇವೆ ಎಂಬುದರಲ್ಲಿ ಅನುಮಾನವೇನೂ ಇಲ್ಲ. ಅವುಗಳನ್ನು ಮುಚ್ಚಿಸುವ ದಿಸೆಯಲ್ಲಿ ಕೆಲಸ ಆಗಬೇಕು. ಅಕ್ರಮ ಮದ್ಯ ಕುಡಿದು ಸಂತ್ರಸ್ತರಾಗುವವರಲ್ಲಿ ಸಮಾಜದ ದುರ್ಬಲ ವರ್ಗದವರೇ ಇರುತ್ತಾರೆ. ಕಲ್ಲಕುರಿಚ್ಚಿಯಲ್ಲಿಯೂ ಹಲವು ಕುಟುಂಬಗಳು ಅನಾಥವಾಗಿವೆ. ಈ ಕುಟುಂಬಗಳು ಅನುಭವಿಸುವ ನೋವು ಮತ್ತು ಸಂಕಷ್ಟಗಳನ್ನು ಯಾವುದೇ ರೀತಿಯ ಪರಿಹಾರದಿಂದಲೂ ನಿವಾರಿಸಲು ಸಾಧ್ಯವಿಲ್ಲ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.