ADVERTISEMENT

ಸಂಪಾದಕೀಯ: ಬುಲ್ಡೋಜರ್ ನ್ಯಾಯಕ್ಕೆ ಅಸಮಾಧಾನ– ಶಿಕ್ಷೆ ಆಗಬೇಕಿರುವುದು ಸರ್ಕಾರಗಳಿಗೆ

ಸಂಪಾದಕೀಯ
Published 3 ಸೆಪ್ಟೆಂಬರ್ 2024, 19:22 IST
Last Updated 3 ಸೆಪ್ಟೆಂಬರ್ 2024, 19:22 IST
<div class="paragraphs"><p>ಸಂಪಾದಕೀಯ: ಬುಲ್ಡೋಜರ್ ನ್ಯಾಯಕ್ಕೆ ಅಸಮಾಧಾನ– ಶಿಕ್ಷೆ ಆಗಬೇಕಿರುವುದು ಸರ್ಕಾರಗಳಿಗೆ</p></div>

ಸಂಪಾದಕೀಯ: ಬುಲ್ಡೋಜರ್ ನ್ಯಾಯಕ್ಕೆ ಅಸಮಾಧಾನ– ಶಿಕ್ಷೆ ಆಗಬೇಕಿರುವುದು ಸರ್ಕಾರಗಳಿಗೆ

   

ಗಲಭೆ ಅಥವಾ ಹಿಂಸಾಚಾರ ಪ್ರಕರಣಗಳಲ್ಲಿ ಆರೋಪಿಗಳಾದ ಕೆಲವರಿಗೆ ಸೇರಿದ ಮನೆಗಳನ್ನು ಅಥವಾ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುವ ಕಾರ್ಯವು ದೇಶದ ಕೆಲವು ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ. ಇದನ್ನು ಈಗ ‘ಬುಲ್ಡೋಜರ್ ನ್ಯಾಯ’ ಎಂದು ಗುರುತಿಸಲಾಗುತ್ತಿದೆ. ಈ ‘ನ್ಯಾಯ’ದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳ ವಿಚಾರವಾಗಿ ಕೈಗೊಳ್ಳಬೇಕಾದ ಕ್ರಮ ಏನು ಎಂಬ ಕುರಿತಾಗಿ ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ಹೇಳಿದೆ. ಕೋರ್ಟ್‌ನ ಈ ಮಾತು ಇನ್ನೂ ಮೊದಲೇ ಬರಬಹುದಿತ್ತು. ಅಂದರೆ, ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜ್ಯಗಳಲ್ಲಿ, ಪ್ರತೀಕಾರ ಅಥವಾ ಹಗೆ ತೀರಿಸಿಕೊಳ್ಳುವ ಉದ್ದೇಶದಿಂದ ನಡೆಯುವ ಧ್ವಂಸ ಪ್ರಕ್ರಿಯೆಯು ಸರ್ಕಾರದ ನೀತಿಯಾಗಿ ಬೇರು ಬಿಡುವ ಮೊದಲೇ ಕೋರ್ಟ್ ಈಗ ಆಡಿರುವ ಮಾತುಗಳನ್ನು ಆಡಬಹುದಿತ್ತು. ಧ್ವಂಸಕ್ಕೆ ಸಂಬಂಧಿಸಿದ ಬಿಡಿ ಪ್ರಕರಣಗಳು ಈ ಹಿಂದೆ ಕೋರ್ಟ್‌ನ ಗಮನ ಸೆಳೆದಿವೆ.

ADVERTISEMENT

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಈ ಬಗೆಯ ಧ್ವಂಸ ಕಾರ್ಯವನ್ನು ‘ಜನಾಂಗೀಯ ನಿರ್ಮೂಲನೆ’ ಎಂದು ಕೂಡ ಕಳೆದ ವರ್ಷ ಕರೆದಿತ್ತು. ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿಗಳ ಅಥವಾ ಅಂತಹ ವ್ಯಕ್ತಿಗಳ ಕುಟುಂಬದ ಸದಸ್ಯರ ಮನೆಗಳನ್ನು ಧ್ವಂಸಗೊಳಿಸುವುದನ್ನು ಶಿಕ್ಷೆಯ ರೂಪದಲ್ಲಿ ಎಲ್ಲೆಡೆಯೂ ಜಾರಿಗೆ ತರಬೇಕು ಎಂಬ ಒತ್ತಾಯ ಕೂಡ ಹಲವು ವ್ಯಕ್ತಿಗಳಿಂದ ಬಂದಿದೆ. ಅಲ್ಲದೆ, ಈ ಬಗೆಯ ಕ್ರಮವನ್ನು ಹಲವರು ಸರಿಯಾದ ಕ್ರಮ ಎಂದು ಸ್ವೀಕರಿಸಿ
ದ್ದಾರೆ.

ಇಂತಹ ‘ನ್ಯಾಯ’ವನ್ನು ಐದು ವರ್ಷಗಳ ಹಿಂದೆ ಕ್ರಿಯಾರೂಪಕ್ಕೆ ತಂದವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು. ಇಂತಹ ‘ನ್ಯಾಯ’ವನ್ನು ಈಗ ಮಧ್ಯಪ್ರದೇಶ, ಹರಿಯಾಣ ಮತ್ತು ಅಸ್ಸಾಂ ರಾಜ್ಯಗಳೂ ಅಳವಡಿಸಿಕೊಂಡಿವೆ.

ಬುಲ್ಡೋಜರ್ ಬಳಸಿ ಕಟ್ಟಡ ಧ್ವಂಸಗೊಳಿಸುವುದು ಕಾನೂನಿಗೆ ಅಥವಾ ರಾಜಕಾರಣಕ್ಕೆ ಸಂಬಂಧಿಸಿದ ಸಂಗತಿ ಮಾತ್ರವೇ ಅಲ್ಲ. ಇದು ಬಹುತೇಕ ಸಂದರ್ಭಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿ
ರುತ್ತದೆ. ಬುಲ್ಡೋಜರ್ ಸಂಸ್ಕೃತಿಯಲ್ಲಿ ಇರುವಂತಹ ‘ದಿಢೀರ್ ನ್ಯಾಯ’ವನ್ನು ಯಾವ ಕಾನೂನು ಕೂಡ ಒಪ್ಪಲು ಸಾಧ್ಯವಿಲ್ಲ. ಕಾನೂನಿಗೆ ಅನುಗುಣವಾದ ಆಡಳಿತ ಇರುವ ಸಮಾಜದಲ್ಲಿ, ವ್ಯವಸ್ಥೆಯಲ್ಲಿ
ಸರಿಯಾದ ಪ್ರಕ್ರಿಯೆಗಳ ಪಾಲನೆಯ ಮೂಲಕ ಮಾತ್ರ ನ್ಯಾಯದಾನ ಸಾಧ್ಯ.

ಆದರೆ, ದುರದೃಷ್ಟದ ಸಂಗತಿಯೆಂದರೆ ‘ದಿಢೀರ್ ನ್ಯಾಯ’ವನ್ನು ವೈಭವೀಕರಿಸುವ ಹಾಗೂ ಅಂತಹ ‘ನ್ಯಾಯ’ಕ್ಕೆ ಒಪ್ಪಿಗೆ ನೀಡುವ ದೊಡ್ಡ ವರ್ಗವೊಂದು ಸಮಾಜದಲ್ಲಿ ಇದೆ. ಬುಲ್ಡೋಜರ್ ಎಂಬ ಯಂತ್ರವು ಈ ‘ದಿಢೀರ್ ನ್ಯಾಯ’ದ ಗುರುತಾಗಿದೆ. ‘ದಿಢೀರ್ ನ್ಯಾಯ’ಕ್ಕೆ ಬೇಡಿಕೆ ಹಾಗೂ ಮುಸ್ಲಿಮರ ವಿರುದ್ಧದ ಪೂರ್ವಗ್ರಹಗಳು ಒಂದುಗೂಡಿದಾಗ, ಬುಲ್ಡೋಜರ್ ಎಂಬುದು ಶಿಕ್ಷೆಯ ಹತಾರವಾಗುತ್ತದೆ. ನಡೆದಿರುವ ಅಪರಾಧವನ್ನು ಗುರುತಿಸಿ, ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸ ಇಲ್ಲಿ ಆಗುವುದಿಲ್ಲ. ಬದಲಿಗೆ, ವ್ಯಕ್ತಿಯೊಬ್ಬನನ್ನು ಆತನ ಅಸ್ಮಿತೆಯ ಕಾರಣಕ್ಕೆ ಶಿಕ್ಷೆಗೆ ಗುರಿಪಡಿಸಲು ಇದು ಒಂದು ನೆಪವಾಗುತ್ತದೆ. ಇದು ಪ್ರಭುತ್ವವೇ ಎಸಗುವ ದ್ವೇಷದ ಕೃತ್ಯವಾಗುತ್ತದೆ.

ವಾಸ್ತವದಲ್ಲಿ, ಬುಲ್ಡೋಜರ್ ನ್ಯಾಯದ ವಿಚಾರವಾಗಿ ಮಾರ್ಗಸೂಚಿಯನ್ನು ರೂಪಿಸಬೇಕಾದ ಅಗತ್ಯವೇ ಇಲ್ಲ. ಏಕೆಂದರೆ, ಯಾವುದೋ ಪ್ರಕರಣದ ಆರೋಪಿಯೊಬ್ಬರ ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುವುದು ಕಾನೂನಿಗೆ ಗೌರವ ಇಲ್ಲದವರು ಮಾಡುವ ಕೆಲಸ. ಇಂತಹ ಕೃತ್ಯವನ್ನು ನಿಲ್ಲಿಸಬೇಕು. ಪ್ರಕರಣವೊಂದರಲ್ಲಿ ಆರೋಪಿ ಎಂದಮಾತ್ರಕ್ಕೆ ಯಾವುದೇ ವ್ಯಕ್ತಿಯ ಮನೆಯನ್ನು ಧ್ವಂಸಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸುವ ಮೂಲಕ ಸುಪ್ರೀಂ ಕೋರ್ಟ್‌, ದೇಶದ ಕಾನೂನು ಏನಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ವ್ಯಕ್ತಿಯೊಬ್ಬ ಅಪರಾಧಿ ಎಂದು ಸಾಬೀತಾದರೂ ಆತನ ಮನೆಯನ್ನು ಧ್ವಂಸಗೊಳಿಸಲು ಕಾನೂನಿನ ಅಡಿ ಅವಕಾಶ ಇಲ್ಲ ಎಂಬುದನ್ನು ಕೋರ್ಟ್ ಸ್ಪಷ್ಟಪಡಿಸಿದೆ.

ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ಧ್ವಂಸಗೊಳಿಸಲು ಕೆಲವು ಕಾನೂನುಗಳಲ್ಲಿ ಇರುವ ಅವಕಾಶವನ್ನು, ಕೆಲವು ವರ್ಗಗಳಿಗೆ ಸೇರಿದ ಜನರ ವಿರುದ್ಧ ಮಾತ್ರ ಬಳಸಲು ಜಾಣತನದಿಂದ ಉಪಯೋಗಿಸಿಕೊಳ್ಳಲಾಗುತ್ತಿದೆ.

ಕಟ್ಟಡ ಧ್ವಂಸ ಪ್ರಕರಣಗಳಲ್ಲಿ ಕಾನೂನಿನ ಎಲ್ಲ ಪ್ರಕ್ರಿಯೆಗಳನ್ನೂ ಪೂರೈಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ನೀಡಿರುವ ವಿವರಣೆಯಿಂದ ಇದು ಸ್ಪಷ್ಟವಾಗುತ್ತದೆ. ಆದರೆ, ಕೆಲವು ಕಟ್ಟಡಗಳನ್ನು ಮಾತ್ರ ಏಕೆ ಗುರಿಯಾಗಿಸಿಕೊಳ್ಳಲಾಗುತ್ತದೆ ಎಂಬುದು ಇಲ್ಲಿರುವ ಪ್ರಶ್ನೆ. ಈ ಧ್ವಂಸ ಸಂಸ್ಕೃತಿಯ ಮೂಲದಲ್ಲಿರುವುದು ಕಾನೂನನ್ನು ಬಳಕೆ ಮಾಡುವಲ್ಲಿ ಇರುವ ತಾರತಮ್ಯದ ನಡೆ. ಕೋರ್ಟ್‌ ರೂಪಿಸಲಿರುವ ಮಾರ್ಗಸೂಚಿಯು ಇದನ್ನು ಗಮನಿಸಬೇಕು, ಇಂತಹ ತಾರತಮ್ಯಕ್ಕೆ ಕಡಿವಾಣ ಹಾಕಬೇಕು.

ಸಂತ್ರಸ್ತರಿಗೆ ಪರ್ಯಾಯ ವಸತಿಯನ್ನು ಕಲ್ಪಿಸದೆ, ಅಕ್ರಮ ಕಟ್ಟಡಗಳನ್ನು ಕೂಡ ಧ್ವಂಸಗೊಳಿಸಲು ಅವಕಾಶ ಇಲ್ಲ. ಮನೆಗಳನ್ನು ಧ್ವಂಸಗೊಳಿಸುವ ಬುಲ್ಡೋಜರ್‌ಗಳ ಹಿಂದೆ ಚಾಲಕಶಕ್ತಿಯಾಗಿ ಕೆಲಸ ಮಾಡುತ್ತಿರುವುದು ತಾರತಮ್ಯದ ರಾಜಕಾರಣ. ಇಂತಹ ಕೆಲಸ ಮಾಡುವ ಸರ್ಕಾರಗಳು ಅರಾಜಕತೆಗೆ ಉತ್ತೇಜನ ನೀಡುತ್ತಿವೆ, ಇಂತಹ ಸರ್ಕಾರಗಳನ್ನು ಶಿಕ್ಷೆಗೆ ಗುರಿಪಡಿಸಬೇಕು. ಮತ್ತೆ ಮತ್ತೆ ತಪ್ಪು ಮಾಡುವ ಸರ್ಕಾರಗಳನ್ನು
ವಜಾಗೊಳಿಸಬೇಕು. ಮಾರ್ಗಸೂಚಿಗಳು ಅಂಥದ್ದೊಂದು ಅವಕಾಶ ಹೊಂದಿರಲಿವೆಯೇ ಎಂಬುದು ಈಗಿರುವ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.