ADVERTISEMENT

ನುಡಿ ಬೆಳಗು: ನಾಳಿನ ಚಿಂತೆ

ದೀಪಾ ಹಿರೇಗುತ್ತಿ
Published 24 ಜುಲೈ 2024, 23:34 IST
Last Updated 24 ಜುಲೈ 2024, 23:34 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಒಮ್ಮೆ ಆಗರ್ಭ ಶ್ರೀಮಂತನೊಬ್ಬ ತನ್ನ ಕಾರ್ಯದರ್ಶಿಯನ್ನು ಕರೆದು ತನ್ನ ಆಸ್ತಿಯ ಲೆಕ್ಕಾಚಾರ ಮಾಡುವಂತೆ ಹೇಳಿದ. ಮಾರನೇ ದಿನ ಬಂದ ಕಾರ್ಯದರ್ಶಿ, ‘ಚಿಂತಿಸಬೇಡಿ, ನಿಮ್ಮ ಏಳು ತಲೆಮಾರು ಕುಳಿತು ತಿನ್ನುವಷ್ಟು ಆಸ್ತಿ ನಿಮ್ಮ ಬಳಿ ಇದೆ’ ಎಂದ. ಶ್ರೀಮಂತನಿಗೆ ಖುಶಿಯಾಗುವ ಬದಲು ಚಿಂತೆಯಾಯಿತು. ‘ಅಯ್ಯೋ ನನ್ನ ಏಳು ತಲೆಮಾರುಗಳೇನೋ ಕುಳಿತು ತಿನ್ನಬಹುದು, ಆದರೆ ಎಂಟನೇ ತಲೆಮಾರಿನ, ಅದರ ಮುಂದಿನವರ ಕಥೆಯೇನು’ ಎಂದು ಚಿಂತಿಸತೊಡಗಿದ.

ಅದೇ ಚಿಂತೆಯಲ್ಲಿಯೇ ಇದ್ದಾಗ ಸನ್ಯಾಸಿಯೊಬ್ಬರು ಆ ಊರಿಗೆ ಬಂದರು. ಅವರ ಹತ್ತಿರ ಸಮಸ್ಯೆ ಹೇಳಿಕೊಂಡ ಶ್ರೀಮಂತ. ಅದಕ್ಕೆ ಸನ್ಯಾಸಿ ಮುಗುಳ್ನಕ್ಕು ‘ಹೌದಾ, ಒಂದು ಕೆಲಸ ಮಾಡು, ಇದೇ ದಾರಿಯಲ್ಲಿ ಮುಂದೆ ಹೋಗಿ ಎಡಕ್ಕೆ ತಿರುಗಿದರೆ ಅಲ್ಲಿ ಗುಡಿಸಲೊಂದರಲ್ಲಿ ಬಡ ಅಜ್ಜಿಯೊಬ್ಬಳಿದ್ದಾಳೆ. ಅವಳಿಗೆ ಒಂದರ್ಧ ಕೆ.ಜಿ ಅಕ್ಕಿ ದಾನ ಮಾಡಿಬಿಡು. ದೇವರ ಕೃಪೆ ನಿನ್ನ ಮೇಲಿರುತ್ತದೆ’ ಎಂದರು.

ADVERTISEMENT

ಆಗ ಶ್ರೀಮಂತ ಅಷ್ಟೇ ತಾನೇ ಎಂದುಕೊಂಡು ಒಂದು ಕ್ವಿಂಟಾಲ್‌ ಅಕ್ಕಿಯೊಂದಿಗೆ ಅಜ್ಜಿಯ ಮನೆಗೆ ಹೋದ. ಆಕೆಯ ಕಾಲಿಗೆ ಬಿದ್ದು, ‘ನಾನೊಬ್ಬ ದಾನಿ, ಈ ಒಂದು ಕ್ವಿಂಟಾಲ್‌ ಅಕ್ಕಿಯನ್ನು ತಂದಿದ್ದೇನೆ. ತೆಗೆದುಕೊಳ್ಳಿ’ ಎಂದ. ‘ಅಯ್ಯೋ ಮಗನೇ ನನ್ನದು ಊಟವಾಯಿತಲ್ಲ, ಈ ಅಕ್ಕಿ ತೆಗೆದುಕೊಂಡು ನಾನೇನು ಮಾಡಲಿ’ ಎಂದಳಾಕೆ. ‘ತೆಗೆದುಕೊಳ್ಳಿ ಈ ತಿಂಗಳಿಗಾಯಿತು’ ಎಂದ. ಬೇಡವೆಂದಳು ಅಜ್ಜಿ. ಕೊನೆಗೆ ‘ಹೋಗಲಿ ಈ ಅರ್ಧ ಕೆ.ಜಿಯನ್ನಾದರೂ ತೆಗೆದುಕೊಳ್ಳಿ, ನಾಳೆಗಾಯಿತು’ ಎಂದ. ಅದಕ್ಕೆ ಆಕೆ ‘ನೋಡು ಇವತ್ತಿನ ವ್ಯವಸ್ಥೆ ಮುಗಿದಿದೆ, ನಾಳಿನ ಚಿಂತೆ ನಾನೇಕೆ ಮಾಡಲಿ, ಬೇಡ’ ಎಂದಳು.

ಆಗ ಶ್ರೀಮಂತನಿಗೆ ಸನ್ಯಾಸಿ ತನ್ನನ್ನು ಏಕೆ ಈಕೆಯ ಬಳಿ ಕಳಿಸಿದರೆಂಬುದು ಅರ್ಥವಾಯಿತು.

‘ಆಸೆಯೆಂಬುದು ಅರಸಿಂಗಲ್ಲದೇ ಶಿವಭಕ್ತರಿಗುಂಟೇ’ ಎಂದು ಶರಣೆ ಆಯ್ದಕ್ಕಿ ಲಕ್ಕಮ್ಮ ಅದೆಷ್ಟು ಸರಳವಾಗಿ ಎಂಟುನೂರು ವರ್ಷಗಳ ಹಿಂದೆಯೇ ಹೇಳಿಬಿಟ್ಟಿದ್ದಾಳೆ! ನಮ್ಮದು ಹಂಚುವ ಸಂಸ್ಕೃತಿಯಾಗಬೇಕೇ ವಿನಾ ಕೂಡಿಡುವುದಾಗಬಾರದು. ದುರಾಸೆಗೆ ಮಿತಿ ಎಂಬುದೇ ಇಲ್ಲ. ಎಷ್ಟು ಇದ್ದರೂ ಮತ್ತಷ್ಟು ಬೇಕೆಂಬ ಚಿಂತೆ. ಚಿಂತಿಸುತ್ತಲೇ ಇರುವವರು ಚಿಂತಿಸಲು ಹೊಸ ಕಾರಣಗಳನ್ನು ಹುಡುಕುತ್ತಲೇ ಇರುತ್ತಾರೆ. ಸದಾ ನಿನ್ನೆಯ ಬಗ್ಗೆ ಬೇಸರಿಸುತ್ತ, ನಾಳೆಯ ಬಗ್ಗೆ ದಿಗಿಲು ಹೊಂದುತ್ತಾ ಬದುಕಿರುವುದರಿಂದ ಯಾವುದೇ ಪ್ರಯೋಜನವಿಲ್ಲ.

ಇದರರ್ಥ ನಾಳಿನ ಬಗ್ಗೆ ಯೋಚಿಸದೇ ಇರುವುದಲ್ಲ. ಅನಗತ್ಯ ಒತ್ತಡ ಹೇರಿಕೊಳ್ಳದೇ, ಜವಾಬ್ದಾರಿಯಿಂದಲೇ ವರ್ತಿಸುತ್ತಾ, ಸಣ್ಣ ಸಣ್ಣ ಸಂಗತಿಗಳಿಗೆ ತಲೆಕೆಡಿಸಿಕೊಳ್ಳದೇ ಬದುಕನ್ನು ಅನುಭವಿಸುವುದೂ ಒಂದು ಕಲೆ. ಮತ್ತದು ಎಲ್ಲರೂ ರೂಢಿಸಿಕೊಳ್ಳಬಹುದಾದ ಕಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.