ಯಾವುದೇ ಭಾಷೆಯಿರಲಿ, ಲೇಖಕರು ಎಂದಾಕ್ಷಣ ಅವರು ಪ್ರಶ್ನಾತೀತರಾಗಿರಬೇಕಾಗಿಲ್ಲ. ಅಕ್ಷರ ದಂದುಗ ತುಂಬ ಮೌಲಿಕ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಮಹತದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಅಕ್ಷರಗಳ ಮೂಲಕ ಜೀವನಾನುಭವವನ್ನು ಮತ್ತು ತನ್ಮೂಲಕ ಬದುಕಿನ ಅಗಾಧತೆಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಕೈಂಕರ್ಯವು ಮಾನವರ ಅದ್ಭುತ ಆವಿಷ್ಕಾರಗಳಲ್ಲಿ ಒಂದು.
ಆದರೆ ಅಕ್ಷರ ಬಲ್ಲವರು ಯಾವತ್ತೂ ಜೀವಪರ ಜನಪರವಾಗಿಯೇ ಇರುತ್ತಾರೆ ಎಂದೇನಲ್ಲ. ಎಷ್ಟೋ ಸಲ ತಾವು ಕರಗತ ಮಾಡಿಕೊಂಡ ಅಕ್ಷರಗಳ ಮೂಲಕವೇ ಜನಾಂಗದ್ವೇಷದ ಭಾವನೆಗಳನ್ನು ಹರಡುವವರೂ ಇದ್ದಾರೆ. ಇಂಥವರಿಗೆ ಅಕ್ಷರ ಬೆಳಕಾಗುವ ಬದಲು ತಮಗಾಗದವರ ವಿರುದ್ಧ ಝಳಪಿಸುವ ಕತ್ತಿಯೂ ಆದದ್ದಿದೆ. ಇಂಥವರ ಸಾಲಿನಲ್ಲಿ ನಿಶ್ಚಯವಾಗಿಯೂ ಎಸ್.ಎಲ್. ಭೈರಪ್ಪನಂಥವರನ್ನು ಪರಿಗಣಿಸಲೇ ಬೇಕೆಂಬುದಕ್ಕೆ ಅವರ ‘ಕವಲು’, ‘ಆವರಣ’, ‘ಯಾನ’ ಇತ್ಯಾದಿ ಕಾದಂಬರಿಗಳನ್ನು ಉದಾಹರಿಸಬಹುದು.
ಈ ಮಹಾನ್ ಲೇಖಕರು ತಮ್ಮ ಹಲವು ಕಾದಂಬರಿಗಳಲ್ಲಿ ಮನುಷ್ಯ ವಿರೋಧಿ, ಮಹಿಳಾ ವಿರೋಧಿ, ನಿಲುವುಗಳನ್ನು ಸ್ಥಾಯಿಗೊಳಿಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿರುವುದು ಖಂಡನೀಯ. ಮಾನವೀಯತೆ ಉಳ್ಳ ನಾಗರಿಕರು ಯಾರೂ ಈ ರೀತಿ ಬರೆಯಲು ಸಾಧ್ಯವೇ ಇಲ್ಲ. ‘ಶ್ರೇಷ್ಠ’ರೆನಿಸಿಕೊಂಡು ಹೀಗೆಲ್ಲ ಬರೆಯುವ ಭೈರಪ್ಪನಂಥವರನ್ನು ವಿಮರ್ಶೆಗೆ ಒಳಪಡಿಸಲೇ ಬಾರದೇ? ಸಾಮಾನ್ಯ ಪುರುಷರು, ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ಬೈಯುವ ಮೂಲಕ, ಕೆಲವೊಮ್ಮೆ ದೈಹಿಕ ಹಲ್ಲೆ ಮಾಡುವ ಮೂಲಕ, ತಮ್ಮ ಅಸಹಾಯಕತೆಯನ್ನು ಮೆರೆದರೆ, ಭೈರಪ್ಪನವರಂಥವರು ಅವರ ಮಹಿಳಾ ವಿರೋಧಿ ವ್ಯಸನಗಳನ್ನು ಪ್ರಮೇಯ ಗಳನ್ನಾಗಿ ಮಂಡಿಸುವ ಕುತಂತ್ರ ಮೆರೆಯುತ್ತಿರುವುದಕ್ಕೆ ಮಹಿಳೆಯರು ಸುಮ್ಮನೆ ಕೂಡಬೇಕೇ? ಹಾಗೆ ನೋಡಿದರೆ ಕ್ಷುಲ್ಲಕ ಕಾರಣಕ್ಕಾಗಿ ಹೆಂಡತಿಗೆ ಹೊಡೆಯುವ ಗಂಡಸರೂ ಇರುತ್ತಾರೆ. ಹಾಗೆಂದು ಅವರನ್ನು ಸಮರ್ಥಿಸಿಕೊಳ್ಳಬೇಕೇ? ಅಥವಾ ಕ್ಷಮಿಸಲು ಆಗುವುದೇ?
ಚಂದ್ರಕಾಂತ ಪೋಕಳೆಯವರು ‘ಮಹಿಳೆಯರಿಗೇಕೆ ಭೈರಪ್ಪನವರ ಮೇಲೆ ಮುನಿಸು?’ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡು ಮರಾಠಿಯಲ್ಲಿ ಭೈರಪ್ಪನವರನ್ನು ಶ್ರೇಷ್ಠ ಲೇಖಕರಷ್ಟೇ ಅಲ್ಲ ಮನುಷ್ಯರೆಂದು ಅಲ್ಲಿನವರು ಗೌರವಿಸಿದ್ದಾರೆ ಎಂದು ಬರೆದಿದ್ದಾರೆ. (ಸಂಗತ, ಪ್ರ.ವಾ. ಫೆ.5) ಅದೇ ಲೇಖನದಲ್ಲಿಯೇ ಮರಾಠಿಯಲ್ಲಿ ಭೈರಪ್ಪ, ಕಾರ್ನಾಡ್, ಅನಂತಮೂರ್ತಿ, ವೈದೇಹಿ, ಸುಧಾ ಮೂರ್ತಿ ಮುಂತಾದ ಕನ್ನಡ ಲೇಖಕರು ಮಾತ್ರ ಚರ್ಚೆಗೆ ಒಳಗಾಗುತ್ತಾರೆ ಆದರೆ ‘ಕುಸುಮ ಬಾಲೆ’ಯಂಥಹ ಅಪರೂಪದ ಕಾದಂಬರಿ ರಚಿಸಿದ ವಸ್ತುನಿಷ್ಠ ಕೃತಿಕಾರ ದೇವನೂರ ಮಹಾದೇವ ಅಷ್ಟಾಗಿ ಚರ್ಚೆಗೆ ಒಳಗಾಗುವುದಿಲ್ಲ ಎಂಬುದನ್ನೂ ಅವರು ಗುರುತಿಸಿದ್ದಾರೆ. ಹಾಗಾದರೆ ಮೇಲ್ಜಾತಿಯ ಲೇಖಕರನ್ನು ಮಾತ್ರ ಅಪ್ಪಿಕೊಂಡು ಗೌರವಿಸುವ ಜಾತಿವಾದಿ ಮನಸ್ಸುಗಳು ಮರಾಠಿಯಲ್ಲಿಯೂ ಹೇರಳವಾಗಿ ಇವೆ ಎಂಬುದು ಇದರಿಂದ ವಿದಿತವಾಗುತ್ತದೆ. ಈ ಜಾತಿವಾದಿ ಓದುಗರಿಗೆ ನಾಮದೇವ್ ಢಸಾಳ್, ಉತ್ತಮ್ ಕಾಂಬ್ಳೆ, ಶರಣಕುಮಾರ್ ಲಿಂಬಾಳೆ, ಲಕ್ಷ್ಮಣ ಗಾಯಕ್ವಾಡ್ರಂಥಹ ಮರಾಠಿ ಲೇಖಕರೂ ದೂರವೇ ಇರಲಿಕ್ಕೆ ಸಾಕು.
ಆದ್ದರಿಂದ ಮರಾಠಿಯ ಹಲವು ಓದುಗರು ಭೈರಪ್ಪನಂಥವರನ್ನು ಒಪ್ಪಿ, ಅಪ್ಪಿಕೊಂಡರೆ ಶ್ರೇಷ್ಠರಾಗಿ ಬಿಡುವರೇ? ಶ್ರೇಷ್ಠತೆಯ ಮಾನ ದಂಡವೇನು? ಪ್ರಜಾಪ್ರಭುತ್ವದ ನೆಲೆಗಳನ್ನು ದಿಕ್ಕು ತಪ್ಪಿಸುತ್ತಿರುವ ಈ ಹೊತ್ತಿನಲ್ಲಿ ಯಾವ ಓದುಗರು ಎಂಥಹ ಲೇಖಕರನ್ನು ವೈಭವೀಕರಿಸುತ್ತಾರೆ, ಹೇಗೆ ವೈಭವೀಕರಿಸುತ್ತಾರೆ ಎಂಬುದರ ಹಿಂದೆ ಸನಾತನವಾದಿ ಸಾಂಸ್ಕೃತಿಕ ರಾಜಕಾರಣ ಅಡಗಿರುತ್ತದೆ ಎಂಬ ತಥ್ಯವನ್ನು ಮನವರಿಕೆ ಮಾಡಿಕೊಳ್ಳಲು ಸಾಧ್ಯವಾಗಬೇಕು. ಮಹಿಳಾ ವಿರೋಧಿ ಅಷ್ಟೇ ಅಲ್ಲ ಮಹಿಳೆಯರ ಬಗೆಗೆ ವಿಕೃತ ಮನಸ್ಥಿತಿಯನ್ನು ಹೊಂದಿರುವ ಭೈರಪ್ಪನಂಥವರು ತಮ್ಮ ಕೃತಿಗಳಲ್ಲಿ ಪಾತ್ರಗಳ ಮೂಲಕ ಆಡಿಸುವ ಮಾತು ಗಳು ಕೂಡ ಹೇಸಿಗೆ ತರಿಸುತ್ತವೆ. ಅವರ ‘ಯಾನ’ ಕಾದಂಬರಿಯಲ್ಲಿ ಬರುವ ಪಾತ್ರವೊಂದು ‘ಮಹಿಳೆಯರು ಅತ್ಯಾಚಾರವನ್ನು ಸುಖಿಸುತ್ತಾರೆ’ ಎಂದು ಹೇಳುತ್ತದೆ (ಪು.೧೨೯). ಖಳನಾಯಕ ಪಾತ್ರಗಳು ಈ ಮಾತುಗಳನ್ನು ಹೇಳುತ್ತವೆ. ಆದರೆ ಖಳನಾಯಕನಲ್ಲಿರುವ ವಿಕೃತಿ, ವಿಕಾರಗಳನ್ನು ಹೊಡೆದು ಹಾಕುವಂಥ ಜೀವಪರ ನೆಲೆಯೊಂದು ಕೃತಿಯಲ್ಲಿ ಇರಬೇಕಲ್ಲವೇ? ಹೀಗಿರದಿದ್ದರೆ ಖಳನಾಯಕನ ಮೂಲಕ ಮಹಿಳೆಯರ ಬಗೆಗೆ ನಕಾರಾತ್ಮಕ ಭಾವಗಳನ್ನೇ ಸ್ಥಾಯಿಗೊಳಿಸಿದಂತಾಗುವುದಿಲ್ಲವೇ? ಮಾನವತಾವಾದಿಗಳಾಗಿ ಮಹಿಳಾ ಪರ ಚಿಂತನೆ ಮಾಡುವವರು ಹೀಗೆ ವಿಮರ್ಶಿಸಿದಾಗಲೆಲ್ಲ ಇವರಿಗೆ ಕಾದಂಬರಿ ಅರ್ಥವೇ ಆಗಿಲ್ಲ ಎಂದು ಫರ್ಮಾನು ಹೊರಡಿಸುವ ವಿಮರ್ಶಕರ ಗುಂಪೊಂದು ಪ್ರತ್ಯಕ್ಷವಾಗುತ್ತದೆ. ಅದೇನೇ ಇರಲಿ ಭೈರಪ್ಪನವರ ಜನಪ್ರಿಯತೆಯೊಂದೇ ಅವರನ್ನು ನಾಗರಿಕರನ್ನಾಗಿರಿಸಲಾರದು. ಉತ್ತಮ ಲೇಖಕರೆನಿಸಿಕೊಳ್ಳಲು ಬರೆಯುವ ರೀತಿಯೊಂದೇ ತಿಳಿದರೆ ಸಾಲದು, ನೀತಿಯೂ ಇರಬೇಕು. ಸಕಲ ಜೀವಾತ್ಮರ ಬಗ್ಗೆ ಪ್ರೀತಿಯೂ ಇರಬೇಕು.
– ವಿಮಲಾ.ಕೆ.ಎಸ್, ಡಾ.ಮೀನಾಕ್ಷಿ ಬಾಳಿ, ಡಾ.ಪ್ರಭು ಖಾನಾಪುರೆ, ಆರ್.ಕೆ.ಹುಡಗಿ, ಡಾ.ಪದ್ಮಿನಿ ನಾಗರಾಜ್, ನೀಲಾ.ಕೆ. ಡಾ. ಆಶಾದೇವಿ. ಎಂ.ಎಸ್. ಡಾ.ವಸುಂಧರಾ ಭೂಪತಿ, ಪ್ರೊ.ಎನ್.ವಿ.ಅಂಬಾಮಣಿ ಮೂರ್ತಿ, ನಾಗರತ್ನ ಚಂದ್ರಶೇಖರ್, ಶಾಕಿರಾ ಖಾನ್, ಟಿ.ಸುರೇಂದ್ರ ರಾವ್, ಗೌರಿ ಲಂಕೇಶ್, ಡಾ.ಕೆ.ಷರೀಫಾ, ಪ್ರಭಾ, ಡಾ.ಕಾಶೀನಾಥ ಅಂಬಲಗಿ, ಕೆ.ಎಸ್.ಲಕ್ಷ್ಮಿ, ವಿ.ಗೀತಾ, ವೆಂಕಟೇಶ ಪ್ರಸಾದ್
***************************************************************************
ಮಾನವೀಯ ನೆಲೆಯ ವಿಮರ್ಶೆ
ಹಿಂದುತ್ವದ, ಹಿಂದೂ ಧರ್ಮದ ಪರವಾದ ಪೂರ್ವಗ್ರಹಪೀಡಿತ ಚಿಂತನೆಗಳ ಕುರಿತು ಎಸ್.ಎಲ್.ಭೈರಪ್ಪನವರ ‘ಅಂಚು’, ‘ಕವಲು’, ‘ಆವರಣ’, ‘ಯಾನ’ದಂಥ ಕಾದಂಬರಿಗಳಲ್ಲಿ ಅಡಕಗೊಂಡಿರುವ ಪ್ರತಿಪಾದನೆ, ಅನ್ಯ ಧರ್ಮದ ಕುರಿತಾದ ತೀವ್ರ ಅಸಹನೆ ಮತ್ತು ತಿರಸ್ಕಾರ, ಸನಾತನ ಧರ್ಮದ ಅಮಾನವೀಯ ತತ್ವಗಳು,ಆಧುನಿಕ ಮಹಿಳೆಯ ಕುರಿತಾದ ಸನಾತನ ಮನಸ್ಥಿತಿಯ ಚಿಂತನೆಗಳನ್ನು ಕುರಿತು ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹೋರಾಟಗಾರ್ತಿ, ಲೇಖಕಿಯರು ಪ್ರಬುದ್ಧವಾಗಿ, ಮಾನವೀಯ ನೆಲೆಯಲ್ಲಿ ವಿಶ್ಲೀಷಿಸಿದ್ದಾರೆ.
ಒಬ್ಬ ಜನಪ್ರಿಯ ಲೇಖಕ ಮಹಿಳೆಯರ ಕುರಿತು ಜೀವವಿರೋಧಿ ಧೋರಣೆಯಲ್ಲಿ ಹೇಗೆ ಬರೆಯಲು ಸಾಧ್ಯ ಎಂದು ದಿಟ್ಟವಾಗಿ ಪ್ರಶ್ನಿಸಿದ್ದಾರೆ. ಇದನ್ನು ಜನಪ್ರಿಯತೆ ಎಂದು ಕರೆಯುವುದಾದರೆ ಅದು ಈ ನಾಡಿನ ದುರಂತವಷ್ಟೇ ಎಂದು ಭೈರಪ್ಪ
ನವರ ಜನಪ್ರಿಯತೆ ಕುರಿತಾದ ಮಿಥ್ ಅನ್ನು ಸಾರ್ವಜನಿಕ ಚರ್ಚೆಗೆ ಎಳೆದಿದ್ದಾರೆ.
ಕವಿ ಮಿಲ್ಟನ್ ಒಂದು ಕಡೆ ‘ಜನಪ್ರಿಯತೆಯು ಪ್ರಾಣ ನಾಶಕ ಭೂಮಿ ಮೇಲೆ ಬೆಳೆಯುವ ಗಿಡವಲ್ಲ’ ಎನ್ನುತ್ತಾನೆ. ಈ ಮಾತನ್ನು ಆಧರಿಸಿ, ಭೈರಪ್ಪನವರ ಜನಪ್ರಿಯತೆ ‘ಪ್ರಾಣನಾಶಕ ಭೂಮಿಯ ಮೇಲೆ ಬೆಳೆದಂಥ ಗಿಡ’ ಎಂದೇ ವಿಶ್ಲೇಷಿಸಬೇಕಾಗುತ್ತದೆ. ಅದನ್ನು ನಮ್ಮ ಲೇಖಕಿಯರು ತಮ್ಮ ಸ್ಪಷ್ಟ ಮಾತುಗಳಲ್ಲಿ ವಿವರಿಸುತ್ತಾ ಇನ್ನೊಬ್ಬರ ಜೀವ,ಮತ್ತೊಬ್ಬರ ಬದುಕಿನ ಕುರಿತಾಗಿ ಒಬ್ಬ ಜನಪ್ರಿಯ ಲೇಖಕ ಇಷ್ಟೊಂದು ನಿರ್ಲಕ್ಷ್ಯದಿಂದ, ಸದಾ ದ್ವೇಷಿಸುವ ಮನಸ್ಥಿತಿಯಿಂದ ಬರೆಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ನಾವು ಏನನ್ನು ಆರಿಸಿಕೊಳ್ಳುತ್ತೇವೆಯೋ ಅದು ಸದಾಕಾಲವೂ ಉತ್ತಮ ತರದಾಗಿರ ಬೇಕಿರುತ್ತದೆ. ಈ ಉತ್ತಮತನವು ಎಲ್ಲಾ ಧರ್ಮ,ಜಾತಿಗಳ ಒಳಿತನ್ನು ಒಳಗೊಂಡಿರಬೇಕಾಗಿರುತ್ತದೆ.
ಆದರೆ ಜನಪ್ರಿಯ ಲೇಖಕ ಭೈರಪ್ಪನವರ ಚಿಂತನೆಗಳಲ್ಲಿ ಈ ಒಳಗೊಳ್ಳುವಿಕೆಯ ಧೋರಣೆಗಳ ಯಾವ ಲಕ್ಷಣಗಳೂ ಇಲ್ಲ. ಸತ್ಯದ ವಿವಿಧ ಮುಖಗಳನ್ನು ಗ್ರಹಿಸಬೇಕಾದ ಲೇಖಕ ಅದನ್ನು ನಿರಾಕರಿಸಿ ಸುಳ್ಳುಗಳನ್ನು ಕಾದಂಬರಿಗಳನ್ನಾಗಿಸಿದರೆ ಪ್ರಜ್ಞಾ ವಂತರು ತೀಕ್ಷ್ಣವಾಗಿ ಅದನ್ನು ವಿಮರ್ಶಿಸಲೇ ಬೇಕಾಗುತ್ತದೆ. ಆದರೆ ಸುಳ್ಳುಗಳಿಂದ ಸೃಷ್ಟಿಯಾಗುವ ಭೈರಪ್ಪನವರಿಗಿರುವ ಈ ಜನಪ್ರಿಯತೆಯ ಮಾದರಿ, ಪೂರ್ವಗ್ರಹಗಳು ಹಾಗೂ ಸವಕಲು ವಾದಗಳನ್ನು ಮಾತ್ರ ಹುಟ್ಟು ಹಾಕಲು ಸಾಧ್ಯ.
ಆದರೆ ಈ ಎಲ್ಲಾ ಸೂಕ್ಷ್ಮತೆಗಳನ್ನು ಗಾಳಿಗೆ ತೂರಿ ಭೈರಪ್ಪನವರು ಅದು ಹೇಗೆ ಜನಪ್ರಿಯ, ಅದು ಹೇಗೆ ರಾಷ್ಟ್ರೀಯ ಮಟ್ಟದಲ್ಲಿ ಭೈರಪ್ಪನವರು ಪ್ರಸಿದ್ಧರಾಗಿದ್ದಾರೆ ಎಂದು ಚಂದ್ರಕಾಂತ ಪೋಕಳೆಯವರು ಬರೆದಿರುವ ಧೋರಣೆಯನ್ನು ಒಪ್ಪಲು ಸಾಧ್ಯವಿಲ್ಲ.
ಎಲ್ಲಿಯೂ ಚರ್ಚೆಗೆ ಆಸ್ಪದ ಕೊಡದಂತೆ ನಿರರ್ಗಳವಾಗಿ ವಿತಂಡ ವಾದವನ್ನು ಮಂಡಿಸಿರುವ ಪೋಕಳೆಯವರ ಈ ಅಭಿಪ್ರಾಯಗಳು ನಿಷ್ಠುರತೆ, ಪ್ರಾಮಾಣಿಕತೆಯ ಕೊರತೆಯನ್ನು ಎದುರಿಸುತ್ತಿವೆ.
–ಬಿ.ಶ್ರೀಪಾದ ಭಟ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.