ಪ್ರೊ.ಹಂಪನಾ ಅವರ ‘ಕನ್ನಡಿಗರ ಮೊದಲ ಧರ್ಮ’ ಲೇಖನವನ್ನು (ಪ್ರ.ವಾ. ಅಭಿಮತ, ಏ. 25) ಓದಿ ಇದನ್ನು ಬರೆಯಬೇಕೆನಿಸಿತು. ಡಾ. ಎಂ.ಎಂ.ಕಲಬುರ್ಗಿ ಅವರ ಉಪನ್ಯಾಸದ ಕೆಲವು ಅಂಶಗಳ ಕುರಿತು ಹಂಪನಾ ಅವರು ಪ್ರತಿಕ್ರಿಯಿಸಿದ್ದಾರೆ. ಕಲಬುರ್ಗಿಯವರ ಹೇಳಿಕೆಯಲ್ಲಿ ಅನ್ಯಮತವನ್ನು ಚುಚ್ಚುವ ಯಾವುದೇ ಅಂಶಗಳು ಇರಲಿಲ್ಲ. ಅವರ ಅಭಿಪ್ರಾಯವೆಂದರೆ, ಕನ್ನಡ ನೆಲದ್ದೇ ಆಗಿ ಹುಟ್ಟಿದ ಧರ್ಮ ಎಂದರೆ ಲಿಂಗಾಯತ; ಕರ್ನಾಟಕದಲ್ಲಿರುವ ಇತರ ಎಲ್ಲ ಧರ್ಮ-ಪಂಥಗಳು ಕರ್ನಾಟಕದ ಹೊರಗಿನಿಂದ ಬಂದವುಗಳೇ ಹೊರತು ಕನ್ನಡದ ನೆಲದಲ್ಲಿ ಹುಟ್ಟಿದವುಗಳಲ್ಲ, ಎಂದಷ್ಟೇ. ಆದರೆ, ಹಂಪನಾ ಅವರು ಕಲಬುರ್ಗಿಯವರ ಹೇಳಿಕೆಯನ್ನು ವ್ಯತ್ಯಸ್ತವಾಗಿ ತೆಗೆದುಕೊಂಡು, ಜೈನ, ಬೌದ್ಧ ಧರ್ಮಗಳು ಕನ್ನಡ ನೆಲದಲ್ಲಿ ಪೂರ್ವದಿಂದಲೂ ಇದ್ದ ಧರ್ಮಗಳು ಎಂಬಂತೆ ಹೇಳಿದ್ದಾರೆ. ಹಂಪನಾ ಅವರು ಹೇಳುವಂತೆ ಜೈನಧರ್ಮ ‘ಈ ನೆಲದಲ್ಲಿ ಇದ್ದು ಹಬ್ಬಿದ್ದ ಧರ್ಮ’ ಎಂಬುದು ನಿಜ. ಆದರೆ ಅದು ಇಲ್ಲಿ ಹುಟ್ಟಿದ್ದಲ್ಲ ಮತ್ತು ಆ ಕಾರಣದಿಂದ ಅದು ‘ದೇಸಿ’ ಧರ್ಮ ಆಗುವುದಿಲ್ಲ.
ಹಂಪನಾ ಅವರು ಅಷ್ಟಕ್ಕೇ ನಿಲ್ಲದೆ, ಶೈವ ವೀರಶೈವಗಳು ಜೈನ ಬೌದ್ಧಧರ್ಮಗಳನ್ನು ಹಿಂಸೆಯಿಂದ ಹತ್ತಿಕ್ಕಿದುವೆಂದು ಅನೇಕ ಉದಾಹರಣೆಗಳನ್ನು ಕೊಟ್ಟು ಸಮರ್ಥಿಸಲು ಪ್ರಯತ್ನಿಸಿದ್ದಾರೆ. ಅವರು ಕೊಟ್ಟಿರುವ ಉದಾಹರಣೆಗಳು ವಿವಿಧ ಶೈವಗಳಿಗೆ ಸಂಬಂಧಿಸಿದವೇ ಹೊರತು ಲಿಂಗಾಯತಕ್ಕೆ ಸಂಬಂಧಿಸಿದವುಗಳೇ ಅಲ್ಲ. ಉದಾಹರಣೆಗೆ, ಜೈನರನ್ನು ಹಿಂಸಿಸಿದನೆಂದು ಅವರು ಹೇಳುವ ಏಕಾಂತದ ರಾಮಯ್ಯನು ಶೈವನೇ ಹೊರತು ಲಿಂಗಾಯತನಲ್ಲ. ಇದು ಅವನನ್ನು ಕುರಿತ ಶಾಸನದಲ್ಲಿ ಸ್ಪಷ್ಟವಾಗಿದೆ. ಹೀಗಾಗಿ, ಕೆಲವರು ಕವಿಗಳು ಅವನನ್ನು ವೀರಶೈವನೆಂದು ತಿಳಿದು ಬರೆದಿರುವುದು ಅಸಂಗತ ಸಂಗತಿ. ಇಲ್ಲಿ ಇನ್ನೊಂದು ವಿಚಾರವನ್ನೂ ಹೇಳಲೇಬೇಕು: ತನ್ನ ಪಾಡಿಗೆ ತಾನು ಏಕಾಂಗಿಯಾಗಿ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಲಿಂಗ ಪೂಜೆ -ಧ್ಯಾನದಲ್ಲಿ ಮಗ್ನನಾಗುತ್ತಿದ್ದ ಏಕಾಂತದ ರಾಮಯ್ಯನನ್ನು ಸಂಕಗೌಡ ಮುಂತಾದ ಜೈನರು ಗುಂಪಾಗಿ ಬಂದು, ಅವನನ್ನು ಅವನ ಪಾಡಿಗೆ ಬಿಡದೆ, ಮೂದಲಿಸಿದ್ದು, ಕೆಣಕಿದ್ದು, ಕಾಡಿದ್ದು, ಸವಾಲು ಹಾಕಿದ್ದು ಮುಂದಿನ ಎಲ್ಲ ಅನಾಹುತಗಳಿಗೆ ಕಾರಣವಾಯಿತು. ಅವರು ಹಾಗೆ ಮಾಡದೆ ಇದ್ದಿದ್ದರೆ ಆ ಯಾವ ಅನಾಹುತಗಳೂ ಜರುಗುತ್ತಿರಲಿಲ್ಲ ಎಂಬುದನ್ನು ಹೇಳಬೇಕಾಗಿಲ್ಲ.
ಅನ್ಯಾಯ ನಡೆದಿರುವುದು ಜೈನರ ಮೇಲಷ್ಟೇ ಅಲ್ಲ, ಅವರ ಜೊತೆಗೆ ಬೌದ್ಧರಿಗೂ ಅನ್ಯಾಯವಾಗಿದೆ ಎಂದು ಹಂಪನಾ ಅವರು ಹೀಗೆ ಬರೆಯುತ್ತಾರೆ: ‘ಬೌದ್ಧಧರ್ಮವನ್ನು ನಾಶಪಡಿಸಿದವರು, ಬೌದ್ಧ ವಿಹಾರಗಳನ್ನು ಕೆಡವಿದವರು, ಬೌದ್ಧ ಭಿಕ್ಕುಗಳನ್ನು ಹಿಂಸಿಸಿದವರು ವಿರುಪರಸನ ನೇತೃತ್ವದ ಉಗ್ರಶಿವಭಕ್ತರು’. ಆದರೆ, ಆ ಉಗ್ರಶಿವಭಕ್ತರು ಲಿಂಗಾಯತರಲ್ಲ, ಶೈವರು ಮಾತ್ರ ಎಂಬುದನ್ನು ಮರೆಯಬಾರದು. ಅವರು ಹಾಗೇ ಮುಂದೆ, ‘ಧಾರ್ಮಿಕ ದಬ್ಬಾಳಿಕೆ ನಡೆಸಿದವರು ಬೌದ್ಧರಲ್ಲ, ಜೈನರಲ್ಲ. ನರಮೇಧ ನಿರತರು ಯಾರೆಂಬುದನ್ನು ಶಾಸನಗಳೂ ವೀರಶೈವ ಪುರಾಣಗಳೂ ದಾಖಲಿಸಿವೆ’ ಎಂದಿದ್ದಾರೆ. ಅವರು ಹೀಗೆ ಹೇಳುವಾಗ ಶ್ರವಣಬೆಳಗೊಳದ ಶಾಸನಗಳು ನೆನಪಿಗೆ ಬರುತ್ತವೆ. ಬೌದ್ಧರಷ್ಟೇ ಅಲ್ಲ, ಇಂದು ನಾಮಾವಶೇಷ ಮಾತ್ರವಾಗಿರುವ ನೈಯಾಯಿಕರು, ವೈಶೇಷಿಕರು, ಚಾರ್ವಾಕರು, ಮೀಮಾಂಸಕರು, ಸಾಂಖ್ಯರು, ಭೌತಿಕರು, ವಾದಿಗಳು ಇವರನ್ನೆಲ್ಲ ಜೈನರು ಹತ್ತಿಕ್ಕಿದರೆಂಬುದನ್ನು ಜೈನಧರ್ಮದ ಕೇಂದ್ರವಾದ ಶ್ರವಣಬೆಳಗೊಳದ ಅನೇಕ ಶಾಸನಗಳು ಸಾರುತ್ತವೆ (ಎ.ಕ. ಹೊಸ ಸಂಪುಟ ೨, ಚಿಕ್ಕಬೆಟ್ಟದ ಶಾಸನಗಳು ಸಂಖ್ಯೆ ೭೦, ೭೧, ೭೩, ೭೭, ೭೯, ೮೧, ೧೭೩, ೩೬೦). ಅಲ್ಲಿಯ ಶಾಸನವೊಂದು, ಜೈನ ಮುನಿಯೊಬ್ಬನನ್ನು ‘ಬೌದ್ಧಮದವೇದಂಡರುಂ’ ಎಂದು ವರ್ಣಿಸುತ್ತದೆ; ಇನ್ನೊಂದು ಶಾಸನ ‘ಯೋ ಬೌದ್ಧಕ್ಷಿತಿಭೃತ್ಕರಾಳ ಕುಳಿಶಃ’ ಎಂದು ಉಗ್ಗಡಿಸುತ್ತದೆ. ಅಷ್ಟೇ ಅಲ್ಲ, ಮತ್ತೊಂದು ಶಾಸನ ಇನ್ನೊಬ್ಬ ಜೈನ ಮುನಿಯನ್ನು ‘ಚಾರ್ವಾಕಮೇಘಾನಳೋ ಮೀಮಾಂಸಾಮತವರ್ತ್ತಿವಾದಿ ಮದವನ್ಮಾತಂಗಕಣ್ಠೀರವಃ’ ಎಂದು ಕೊಂಡಾಡುತ್ತದೆ. ಹಾಗೇ ಇನ್ನೊಂದು, ‘ನೈಯಾಯಿಕೇಭಸಿಂಹೇ ಮೀಮಾಂಸಕ ತಿಮಿರನಿಕರ ನಿರಸನತಪನಃ ಬೌದ್ಧವನ ದಾವದಹನೋ’ ಎಂದು ಹೊಗಳುತ್ತದೆ. ವಾಚಕರಿಗೆ ಇವುಗಳ ಅರ್ಥವನ್ನು ಬಿಡಿಸಿಹೇಳುವ ಅಗತ್ಯವಿಲ್ಲ ಎನಿಸುತ್ತದೆ. ಇಂಥ ಹಲವಾರು ಶಾಸನಗಳು, ೧೧–-೧೨ನೆಯ ಶತಮಾನದ ಜೈನಸಮಾಜ ಮೇಲೆ ಹೇಳಿದ ರೀತಿ, ಬೌದ್ಧವೂ ಸೇರಿದಂತೆ ಅನ್ಯಮತಪಂಥದ ಅನೇಕರನ್ನು ಹತ್ತಿಕ್ಕುವಲ್ಲಿ ಗಣನೀಯ ಪಾತ್ರ ವಹಿಸಿತ್ತು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತವೆ.
ಹಾಗೆಯೇ ಬ್ರಹ್ಮಶಿವ, ವೃತ್ತವಿಲಾಸ, ನಯಸೇನ ಮುಂತಾದ ಜೈನ ಕವಿಗಳ ಕೃತಿಗಳು ಕೂಡಾ ಸ್ವಮತಪ್ರಶಂಸೆ ಪರಮತ ವಿಡಂಬನೆಯೇ ಪ್ರಧಾನವಾಗಿರುವ ಕೃತಿಗಳೆಂಬುದು ಈಗಾಗಲೇ ಸುವ್ಯಕ್ತವಾಗಿರುವ ಸಂಗತಿ. ಬ್ರಹ್ಮಶಿವ ತನ್ನ ‘ಸಮಯ ಪರೀಕ್ಷ’ ಕೃತಿಯಲ್ಲಿ ಹೀಯಾಳಿಸುವ ಲಿಂಗಿಗಳ್ ‘ಮಾಹೇಶ್ವರರ್’ ‘ಶಿವಭಕ್ತರ್’ ಈ ಪದಗಳು ಶಿವಶರಣರನ್ನು ಕುರಿತಂತೆ ಕಾಣುವುವಾದರೂ, ಅವು ಲಿಂಗಪೂಜಕರಾಗಿದ್ದ ಲಾಕುಳ ಮತ್ತು ಕಾಳಾಮುಖ ಶೈವರನ್ನು ಕುರಿತವು ಎಂದು ವಿದ್ವಾಂಸರು ಈಗಾಗಲೇ ವಿಮರ್ಶಿಸಿ ಹೇಳಿದ್ದಾರೆ. ನಯಸೇನ ಕವಿ ತನ್ನ ‘ಧರ್ಮಾಮೃತಂ’ ಕೃತಿಯಲ್ಲಿ, ಬ್ರಾಹ್ಮಣರ ಬಗ್ಗೆ ತೀರಾ ಕಟುವಾಗಿಯೇನೂ ಬರೆಯುವುದಿಲ್ಲ. ಆದರೆ, ಅದೇ ಬೌದ್ಧರ ಬಗ್ಗೆ ತೀವ್ರ ಆಕ್ರೋಶದಿಂದ ಬರೆಯುತ್ತಾನೆ. ಬ್ರಾಹ್ಮಣರು ಜೈನರಾಗಿ ಮತಾಂತರಗೊಳ್ಳುವುದು ಅವನಿಗೆ ಪ್ರಿಯವೆನಿಸುವ ಸಂಗತಿಯಾದರೆ, ಅದೇ ಬೌದ್ಧರು ಜೈನರಾಗುವುದು ಅವನಿಗೆ ಸಹನೆಯ ಸಂಗತಿಯಲ್ಲ. ಬೌದ್ಧಭಿಕ್ಷುವನ್ನು ‘ಭಿಕ್ಷು’ ಎಂದು ಹೆಸರಿಸದೆ ‘ಭಿಕ್ಷುಕ’ ಎಂದು ಹೆಸರಿಸಲೂ ಹಿಂದೆಗೆದಿಲ್ಲ.
ಧಾರ್ಮಿಕ ಸಾಮರಸ್ಯದ ಶಾಸನ ಎಂದೇ ಬಿಂಬಿತವಾಗಿರುವ ಶ್ರವಣಬೆಳಗೊಳದ ೧೩೬೮ರ ಬುಕ್ಕರಾಯನ ಶಾಸನದ ಬಗ್ಗೆ ಎರಡು ಮಾತು: ರಾಮಾನುಜ ಸಂಪ್ರದಾಯದ ಶ್ರೀವೈಷ್ಣವರಿಗೂ ಜೈನರಿಗೂ ತಿಕ್ಕಾಟ ತೀವ್ರಸ್ಥಿತಿಗೆ ಹೋದಾಗ, ವಿಜಯ
ನಗರದ ದೊರೆ ಬುಕ್ಕರಾಯ ಅವರಿಬ್ಬರಿಗೂ ಸೌಹಾರ್ದದಿಂದಿರಲು ವ್ಯವಸ್ಥೆ ಮಾಡಿದ್ದನ್ನು ಅದು ಹೇಳುತ್ತದೆ. ಅದರಂತೆ, ಇಡೀ ರಾಜ್ಯದ ಜೈನರು ಪ್ರತಿವರ್ಷ ಪ್ರತಿ ಮನೆಗೆ ಒಂದು ಕಾಸು ನೀಡಬೇಕು; ಅದರಿಂದ ರಾಜ್ಯದೊಳಗಿನ ಜೈನ ಬಸದಿಗಳ ರಕ್ಷಣೆಗೆ ಶ್ರೀವೈಷ್ಣವರು ನೇಮಿಸಿಕೊಂಡ ೨೦ ಆಳಿನ ವೆಚ್ಚ, ಉಳಿದ ಹಣದಲ್ಲಿ ಬಸದಿಗಳ ಜೀರ್ಣೋದ್ಧಾರ, ಇವನ್ನು ನಿರ್ವಹಿಸಬೇಕು- ಎಂದು ತೀರ್ಮಾನಿಸಿದ್ದು ನೋಡಿದರೆ, ದೊರೆ ಮಾಡಿದ ಸೌಹಾರ್ದದ ವ್ಯವಸ್ಥೆಯಲ್ಲಿ ಜೈನರಿಗೆ ಸಮಾನನ್ಯಾಯ ದೊರೆತಿಲ್ಲದಿರುವುದು ತಿಳಿಯುತ್ತದೆ. ಇದನ್ನು ಈಗಾಗಲೇ ಕೆಲವರು ಸಂಶೋಧಕರು ತೋರಿಸಿಕೊಟ್ಟಿದ್ದಾರೆ.
ಮೇಲೆ ಹೇಳಿದ ಶಾಸನವನ್ನು ಶ್ರವಣಬೆಳಗೊಳದಲ್ಲಿ ಹಾಕಿಸುವ ಸುಮಾರು ಒಂದು ತಿಂಗಳ ಮುಂಚೆ ಕಲ್ಲೆಹ (ಈಗಿನ ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು ಕಲ್ಯ ಗ್ರಾಮ) ದಲ್ಲಿ ಇದೇ ರೀತಿಯ ಶಾಸನವನ್ನು ಹಾಕಿಸಲಾಗಿದೆ. ಶ್ರವಣಬೆಳಗೊಳದ ಶಾಸನದಲ್ಲಿ ಕಾಣಿಸದ ಒಂದು ಕಹಿ ವಿಷಯ ಅಲ್ಲಿದೆ. ಶ್ರೀವೈಷ್ಣವರಿಂದ ಜೈನರ ಕೊಲೆ ಕೂಡಾ ಆಗಿತ್ತು, ಆ ಬಗ್ಗೆ ದೊರೆಯಲ್ಲಿ ಅರಿಕೆ ಮಾಡಲಾಗಿತ್ತು ಎಂಬ ಹೆಚ್ಚಿನ ಸಂಗತಿ ಅಲ್ಲಿದೆ. ಆದರೆ ಬಹುಮುಖ್ಯವಾದ ಈ ಅಂಶ ಶ್ರವಣಬೆಳಗೊಳದ ಶಾಸನ ಹಾಕಿಸುವಾಗ ಸೆನ್ಸಾರ್ ಆಗಿದೆ. ಕಲ್ಯದ ಶಾಸನದಿಂದ ಜೈನರಿಗೆ ಒಂದು ಕಾಲಕ್ಕೆ ದಕ್ಷಿಣ ಕರ್ನಾಟಕದಲ್ಲಿ ಶ್ರೀವೈಷ್ಣವರಿಂದ ಎಂಥ ದಬ್ಬಾಳಿಕೆ ನಡೆದಿತ್ತು ಮತ್ತು ಜೀವ ಬೆದರಿಕೆಯ ಭಯದ ವಾತಾವರಣ ಸೃಷ್ಟಿಯಾಗಿತ್ತು ಎಂದು ವ್ಯಕ್ತವಾಗುತ್ತದೆ. ಇದರಿಂದ ಜೈನರ ಮೇಲೆ ಹಿಂಸೆ ನಡೆದದ್ದು ಕೇವಲ ಶೈವರಿಂದ ಅಲ್ಲ ಎಂದು ಶ್ರುತಪಡುತ್ತದೆ.
ಇಂಥ ಇನ್ನೂ ಹಲವು ಉದಾಹರಣೆಗಳನ್ನು ಕೊಡಬಹುದು. ಆದರೆ ಈ ಪ್ರತಿಕ್ರಿಯೆಯ ಉದ್ದೇಶ ಅದಲ್ಲ. ಯಾವ ವಿಷಯ ಎತ್ತಿಕೊಂಡು ಲೇಖಕರು ಲಿಂಗಾಯತರವೆಂದು ಶೈವರ ಉದಾಹರಣೆಗಳನ್ನು ಕೊಡುತ್ತಹೋಗಿದ್ದಾರೋ, ಅಂಥದ್ದನ್ನೇ ಎಸಗಿರುವ ಜೈನರ ಉದಾಹರಣೆಗಳೂ ಇವೆ ಎಂದು ತೋರಿಸುವುದೂ ಅಲ್ಲ. ಹಿಂದಿನ ಕಾಲದಲ್ಲಿ ಬಹುತೇಕ ಮತಪಂಥಗಳು ತಮ್ಮ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ, ಅದೇ ಧರ್ಮದವರ ಪ್ರಭುತ್ವ ಇದ್ದಾಗ ಪ್ರಭಾವವನ್ನು ಹೊಂದಿದ್ದು, ಕೆಲವೊಮ್ಮೆ ವ್ಯತಿರಿಕ್ತ ಮಾರ್ಗಗಳಲ್ಲಿ ನಡೆದಿರಬಹುದು. ಅದು ಅವುಗಳಿಗೆ ಒಂದು ಚಾರಿತ್ರಿಕ ಅನಿವಾರ್ಯವಾಗಿರಲೂಬಹುದು. ಹೀಗೆ ಹಿಂದೆ ಏನೇನೋ ಆಗಿರಬಹುದು. ಈಗ ಅದನ್ನೆಲ್ಲ ಎತ್ತಿಹೇಳುವುದರಿಂದ ಯಾವ ಸತ್ಪರಿಣಾಮವನ್ನು ನಿರೀಕ್ಷಿಸಲೂ ಸಾಧ್ಯವಾಗುವುದಿಲ್ಲ.
೧೨ನೆಯ ಶತಮಾನದಲ್ಲಿ ಬಸವಣ್ಣ ಕೈಗೊಂಡ ಒಂದು ಅಪೂರ್ವ ವಿವಾಹ, ಅಂದಿನ ಯಾವ ಸಮಾಜಕ್ಕೆ ಅಪಥ್ಯವೆನಿಸಿತು? ಆಗ ನಡೆದ ಶರಣ ಹರಳಯ್ಯ ಮತ್ತು ಶರಣ ಮಧುವಯ್ಯರ ಎಳಹೂಟೆಯ ಮರಣದಂಡನೆ, ದೊರೆ ಬಿಜ್ಜಳನ ಕೊಲೆ, ನೂರಾರು ಸಾವಿರಾರು ಅಮಾಯಕ ಶರಣರ ಕಗ್ಗೊಲೆ, ಸಾವಿರಾರು ಶರಣರ ದೇಶಾಂತರಗತಿ, ಇವೆಲ್ಲ ಏಕಾದುವು? ಇದಕ್ಕೆಲ್ಲ ಕಾರಣರು ಯಾರು? ಇದನ್ನೆಲ್ಲ ಬಗೆದು ನೋಡಿದರೆ, ಇತಿಹಾಸದ ಒಳಸುಳಿ ಏನೆಂಬುದು ಮನಸ್ಸಿಗೆ ಬರುತ್ತದೆ. ನಿರುಪದ್ರವಿಗಳಾಗಿದ್ದು ಆದರ್ಶ ಸಮಾಜವೊಂದರ ಕನಸು ಕಂಡಿದ್ದ, ಶರಣರ ಚಳವಳಿ ಹೇಗೆ ಹತ್ತಿಕ್ಕಲಾಯಿತು ಎಂಬುದು ಅರಿವಿಗೆ ಬಾರದಿರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.