ADVERTISEMENT

ಸಂಗತ | ಆಹಾರ ಪ್ಯಾಕಿಂಗ್: ಇರಲಿ ಎಚ್ಚರ

ಆಹಾರ ಪದಾರ್ಥಗಳ ಪ್ಯಾಕಿಂಗ್‌ಗೆ ಪ್ಲಾಸ್ಟಿಕ್ ಹೊರತಾಗಿ ಇರುವ ಉತ್ತಮ ಪರ್ಯಾಯ ವಿಧಾನಗಳನ್ನು ಅನುಸರಿಸಲು ಜನ ಗಟ್ಟಿ ಮನಸ್ಸು ಮಾಡಬೇಕು

ಮಲ್ಲಿಕಾರ್ಜುನ ಹೆಗ್ಗಳಗಿ
Published 9 ಸೆಪ್ಟೆಂಬರ್ 2024, 19:30 IST
Last Updated 9 ಸೆಪ್ಟೆಂಬರ್ 2024, 19:30 IST
.
.   

ಸಕ್ಕರೆ ಮತ್ತು ಉಪ್ಪನ್ನು ಉತ್ತಮ ಗುಣಮಟ್ಟದ ಸೆಣಬಿನ ಚೀಲಗಳಲ್ಲಿ ಸಂಗ್ರಹಿಸುವ ವಿಧಾನ ಈ ಮೊದಲು ರೂಢಿಯಲ್ಲಿತ್ತು. ಕೇಂದ್ರ ಸರ್ಕಾರವು ಕಾನೂನಿನ ಮೂಲಕ ಈ ವಿಧಾನವನ್ನು ಕಡ್ಡಾಯಗೊಳಿಸಿತ್ತು. ಆಹಾರಧಾನ್ಯಗಳ ಸಂಗ್ರಹಕ್ಕೂ ಗೋಣಿಚೀಲಗಳನ್ನೇ ಬಳಸಲಾಗುತ್ತಿತ್ತು. ಸಕ್ಕರೆ, ಉಪ್ಪು ಸಂಗ್ರಹಕ್ಕೆ ಬಳಸಿ ಖಾಲಿಯಾದ ಗೋಣಿಚೀಲಗಳನ್ನು ತೊಳೆದು ಒಣಗಿಸಿ ಮರುಬಳಕೆ ಮಾಡುವ ಪರಿಪಾಟವೂ ಇತ್ತು. ಸಹಜವಾಗಿ ಆಗ ಎಲ್ಲ ಆಹಾರ ಪದಾರ್ಥಗಳೂ ಮೈಕ್ರೊಪ್ಲಾಸ್ಟಿಕ್‌ ಕಣಗಳಿಂದ ಮುಕ್ತವಾಗಿ ಇರುತ್ತಿದ್ದವು.

ಸಕ್ಕರೆ ಮತ್ತು ಉಪ್ಪಿನಲ್ಲಿ ಆರೋಗ್ಯಕ್ಕೆ ಹಾನಿಕರವಾದ ಮೈಕ್ರೊಪ್ಲಾಸ್ಟಿಕ್‌ ಕಣಗಳು ಈಗ ಆತಂಕಕಾರಿಯಾದ ಮಟ್ಟದಲ್ಲಿ ಇವೆ ಎಂಬ ‘ಆಳ ಅಗಲ’ದ ವರದಿ (ಪ್ರ.ವಾ., ಆ. 26) ಓದಿದಾಗ, ಸಕ್ಕರೆ ಮತ್ತು ಉಪ್ಪಿನ ಕೈಗಾರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ನನಗೆ, ಆಹಾರ ವಸ್ತುಗಳನ್ನು ಪ್ಯಾಕಿಂಗ್ ಮಾಡುವ ಉತ್ತಮ ವಿಧಾನವನ್ನು ಕೈಬಿಟ್ಟು, ಹಾನಿಕಾರಕ ಪಾಲಿಥಿನ್ ಮತ್ತು ಪ್ಲಾಸ್ಟಿಕ್ ಬಳಕೆಗೆ ಪಲ್ಲಟಗೊಂಡ ಸಂಗತಿಯನ್ನು ಹೇಳುವ ಮನಸ್ಸಾಯಿತು.

ಹಣ್ಣು, ತರಕಾರಿ, ಆಲೂಗಡ್ಡೆ, ಈರುಳ್ಳಿಯಂತಹ ತೋಟಗಾರಿಕೆ ಉತ್ಪನ್ನಗಳನ್ನು ಕೂಡ ಗೋಣಿಚೀಲದಲ್ಲಿಯೇ ಸಂಗ್ರಹಿಸಲಾಗುತ್ತಿತ್ತು. ಬೆಲ್ಲದ ಅಚ್ಚುಗಳನ್ನು ಗೋಣಿ ಬಟ್ಟೆಯಲ್ಲಿ ಪ್ಯಾಕ್ ಮಾಡಲಾಗುತ್ತಿತ್ತು. ಹತ್ತಿಯನ್ನು ಸೆಣಬಿನ ಜಾಳಿಗೆಗಳಲ್ಲಿ ಸಂಗ್ರಹಿಸಿ ಜವಳಿ ಕಾರ್ಖಾನೆಗಳಿಗೆ ಕಳಿಸಲಾಗುತ್ತಿತ್ತು. ಎಲ್ಲ ಆಹಾರ ವಸ್ತುಗಳು ಗೋಣಿಚೀಲಗಳಲ್ಲಿಯೇ ಮಾರುಕಟ್ಟೆಗೆ ಬರುತ್ತಿದ್ದವು.

ADVERTISEMENT

ಈ ಚೀಲಗಳ ಬಳಕೆ ಕ್ರಮೇಣ ಕಡಿಮೆಯಾಗಿ ಪಾಲಿಥಿನ್ ಮತ್ತು ಪ್ಲಾಸ್ಟಿಕ್ ಬಳಕೆ ಮುನ್ನೆಲೆಗೆ ಬಂದಿತು. ಇದು ಈ ಅನಾಹುತ ಸೃಷ್ಟಿಗೆ ಮುಖ್ಯ ಕಾರಣವಾಗಿದೆ.

ಸೆಣಬಿನ ಚೀಲಗಳಿಗೆ ಹೋಲಿಸಿದರೆ ಪಾಲಿಥಿನ್ ಮತ್ತು ಪ್ಲಾಸ್ಟಿಕ್ ಬ್ಯಾಗುಗಳ ಬೆಲೆ ತೀರಾ ಕಡಿಮೆ. ಇದರಿಂದಾಗಿ ಇವುಗಳ ಬಳಕೆ ವೇಗವಾಗಿ ಹರಡಿತು. ಪಾಲಿಥಿನ್ ಮತ್ತು ಪ್ಲಾಸ್ಟಿಕ್ ಬ್ಯಾಗುಗಳು ಮರುಬಳಕೆಗೆ ಯೋಗ್ಯವಾಗಿ ಇರುವುದಿಲ್ಲ. ಕರಗದ ತ್ಯಾಜ್ಯಗಳಾಗಿ ಉಳಿದುಬಿಡುತ್ತವೆ. ಆದರೆ ಗೋಣಿಚೀಲಗಳನ್ನು 8ರಿಂದ 10 ವರ್ಷಗಳ ಕಾಲ ಬಳಸಬಹುದು. ಗೋಣಿಚೀಲಗಳ ಬೆಲೆ ಹೆಚ್ಚಾದರೂ ಸುರಕ್ಷಿತ ಮತ್ತು ದೀರ್ಘಕಾಲ ಉಪಯೋಗಕ್ಕೆ ಬರುತ್ತವೆ ಎಂಬುದನ್ನು ಮರೆಯಬಾರದು.

ಈಗ ಎಲ್ಲ ಸಕ್ಕರೆ ಕಾರ್ಖಾನೆಗಳು ಹಾಗೂ ಉಪ್ಪು ಉತ್ಪಾದಕ ಘಟಕಗಳು ಪಾಲಿಥಿನ್ ಮತ್ತು ಪ್ಲಾಸ್ಟಿಕ್ ಬ್ಯಾಗುಗಳನ್ನೇ ಬಳಸುತ್ತಿವೆ. ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ರೈತರು ಕೂಡ ಹೆಚ್ಚಾಗಿ ಇಂತಹ ಬ್ಯಾಗುಗಳನ್ನೇ ಉಪಯೋಗಿಸುತ್ತಿದ್ದಾರೆ. ಇದರಿಂದ ಮೈಕ್ರೊಪ್ಲಾಸ್ಟಿಕ್ ಕಣಗಳು ಎಲ್ಲ ಕಡೆಗೆ ದಾಳಿ ಇಡತೊಡಗಿವೆ.

ಸಕ್ಕರೆ, ಉಪ್ಪು, ಆಹಾರಧಾನ್ಯಗಳನ್ನು 1, 2, 5, 10 ಕಿಲೊ ಅಳತೆಯ ಆಕರ್ಷಕ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಪ್ಯಾಕ್ ಮಾಡಿ, ಶ್ರೇಷ್ಠ ಗುಣಮಟ್ಟದವು ಎಂದು ಬಿಂಬಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ತಂತ್ರ ಧಾರಾಳವಾಗಿ ನಡೆಯುತ್ತಿದೆ. ಗ್ರಾಹಕರು ಕೂಡ ಇವುಗಳನ್ನೇ ಹೆಚ್ಚಾಗಿ ಖರೀದಿಸುತ್ತಿದ್ದಾರೆ.

ಶಾಲಾ ಮಕ್ಕಳು ಊಟ, ಉಪಾಹಾರದಂತಹ ಖಾದ್ಯ ಪದಾರ್ಥಗಳನ್ನು ಪ್ಲಾಸ್ಟಿಕ್ ಬ್ಯಾಗುಗಳಲ್ಲಿ ತರುತ್ತಿದ್ದಾರೆ. ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಇಡುವುದರಿಂದ ಪ್ಲಾಸ್ಟಿಕ್ ಕಣಗಳು ಅಧಿಕ ಪ್ರಮಾಣದಲ್ಲಿ ಆಹಾರವನ್ನು ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಹೋಟೆಲ್‌ಗಳಿಂದ ತರಿಸುವ ಪದಾರ್ಥಗಳು ಪ್ಲಾಸ್ಟಿಕ್ ಚೀಲದಲ್ಲಿಯೇ ಬರುತ್ತವೆ.

ಹಿಂದೆ ಸಂತೆ, ಪೇಟೆಯಿಂದ ಆಹಾರ ಪದಾರ್ಥ ಗಳನ್ನು ಖರೀದಿಸಿ ತರಲು ಬಟ್ಟೆಯಿಂದ ತಯಾರಿಸಿದ ಕೈಚೀಲಗಳನ್ನು ಬಳಸುತ್ತಿದ್ದರು. ಈಗ ಅವು ಮಾಯವಾಗಿ ಆ ಜಾಗಗಳನ್ನು ಪ್ಲಾಸ್ಟಿಕ್ ಬ್ಯಾಗುಗಳು ಆವರಿಸಿವೆ. ಕಡಿಮೆ ಮೈಕ್ರಾನ್‌ನ ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧದ ಕಾರಣದಿಂದ ಸ್ವಲ್ಪಮಟ್ಟಿಗೆ ಇವುಗಳ ಬಳಕೆ ಕಡಿಮೆ ಆಗಿದೆಯಾದರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ತೊಂದರೆಗಳ ಬಗ್ಗೆ ಎಲ್ಲರಿಗೂ ಅರಿವಿದ್ದರೂ ದೃಢ ನಿರ್ಧಾರದ ಕೊರತೆಯಿಂದ ಬಳಕೆ ಕಡಿಮೆಯಾಗುತ್ತಿಲ್ಲ.

ಈಚೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಕಂಪಾರ್ಟ್‌ಮೆಂಟಿನಲ್ಲಿ ದೋಸೆ ಖರೀದಿಸಿದೆ. ರಟ್ಟಿನ ಬಾಕ್ಸ್‌ನಲ್ಲಿ ದೋಸೆಯನ್ನು ಪ್ಯಾಕ್ ಮಾಡಲಾಗಿತ್ತು. ಆದರೆ ಸಾಂಬಾರ್, ಚಟ್ನಿಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಇಡಲಾಗಿತ್ತು. ಬಿಸಿ ದೋಸೆಯನ್ನು ಮಿಂಚುವ ಪ್ಲಾಸ್ಟಿಕ್ ಕಾಗದದಲ್ಲಿ ಸುತ್ತಲಾಗಿತ್ತು. ಕಾಗದದ ವರ್ಣವು ದೋಸೆಗೆ ಅಂಟಿಕೊಂಡಿದ್ದು ಕಾಣಿಸುತ್ತಿತ್ತು. ತಿನ್ನುವುದಕ್ಕೆ ಮನಸ್ಸಾಗಲಿಲ್ಲ. ಇಂತಹ ಸಂದರ್ಭಗಳಲ್ಲಿ, ಪ್ಲಾಸ್ಟಿಕ್‌ನಿಂದ ದೂರ ಇರಲು ಬಯಸುವವರು ಉಪವಾಸ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ವಿಪರೀತ ಹೆಚ್ಚಾಗತೊಡಗಿದೆ. ಪ್ಲಾಸ್ಟಿಕ್‌ನಲ್ಲಿ ಅನೇಕ ರಾಸಾಯನಿಕ ಮತ್ತು ಅಪಾಯಕಾರಿ ಪದಾರ್ಥಗಳು ಇರುತ್ತವೆ. ಇವು ಮಣ್ಣಿನಲ್ಲಿ ಕರಗದೆ ಸಣ್ಣ ಸಣ್ಣ ಕಣಗಳಾಗಿ ಬದಲಾಗುತ್ತವೆ. ಅತಿ ಸೂಕ್ಷ್ಮ ಕಣಗಳನ್ನು ಮೈಕ್ರೊಪ್ಲಾಸ್ಟಿಕ್‌ ಕಣಗಳೆಂದು ಕರೆಯಲಾಗುತ್ತದೆ. ಇವು ಪರಿಸರ, ಜೀವಿಗಳು, ಮಣ್ಣು, ನೀರಿನ ಮೇಲೆ ದುಷ್ಪರಿಣಾಮ ಬೀರುತ್ತವೆ.

ಜನ ಸೇವಿಸುವ ಆಹಾರ ಮತ್ತು ಆಹಾರಧಾನ್ಯಗಳ ಪ್ಯಾಕಿಂಗ್ ಅತ್ಯಂತ ಮುಖ್ಯವಾದ ಕ್ರಿಯೆ. ಪ್ಲಾಸ್ಟಿಕ್ ಹೊರತಾಗಿ ಉತ್ತಮ ಪರ್ಯಾಯ ಪ್ಯಾಕಿಂಗ್ ಪದ್ಧತಿಗಳಿವೆ. ಸಾಂಪ್ರದಾಯಿಕ ಸರಳ ವಿಧಾನಗಳಿವೆ. ಅವುಗಳನ್ನು ಅನುಸರಿಸಲು ಜನ ಗಟ್ಟಿ ಮನಸ್ಸು ಮಾಡಬೇಕು. ಹಾಗೆಯೇ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಅನುಷ್ಠಾನಕ್ಕೆ ತರುವುದು ಅವಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.