ಕುಮಾರಣ್ಣನ ಸರ್ಕಾರದ ಮೊದಲ ವಿಕೆಟ್ ಪತನದ ಸುದ್ದಿಗೆ ಪ್ರಭ್ಯಾನ ತಕ್ಷಣದ ಪ್ರತಿಕ್ರಿಯೆ ಕೇಳಬೇಕೆಂದು ಬೆಳಿಗ್ಗೆ ಎದ್ದ ಕೂಡಲೇ ಫೋನ್ ಮಾಡಿದೆ. ತಟಕ್ಕನೆ ಉತ್ರಾ ಕೊಡಾಂವಾ ನಾಲ್ಕೈದು ಬಾರಿ ಮಾಡಿದ್ರೂ ಫೋನ್ ಎತ್ತಲಿಲ್ಲ. ಅವ್ನ ಮನಿಗೆ ಹೋಗಿ ಕೇಳಿದ್ರಾತು ಅಂತ ವಾಕಿಂಗ್ ಹೋದಂವಾ, ಹಂಗ ಪ್ರಭ್ಯಾನ ಮನಿ ಕಡಿ ಹ್ವಾದೆ. ನನ್ನ ನೋಡಿ ಹೊರಗ್ ಬಂದ ಪ್ರಭ್ಯಾನ ಹೆಂಡ್ತಿ ಪಾರುತಿ, ನಾ ಬಾಯಿ ತೆರೆಯೋ ಮೊದ್ಲ, ‘ಹನಮಪ್ಪನ ಗುಡಿಗೆ ಹೋಗ್ಯಾರಿ’ ಅಂದ್ಳು. ‘ಯಾಕವ್ವಾ. ಮೈಮ್ಯಾಲೆ ದ್ಯಾಮವ್ವ, ದುರ್ಗವ್ವ ಬಂದಿದ್ಲೇನ್. ನಿನ್ನ ದುರ್ಗಾದೇವಿ ಅವತಾರ ಕಂಡು ಅಂಜಾನS ಏನ್.. ತಾಯ್ತಾ ಕಟ್ಟಿಸ್ಕೊಂಡ್ಬರಾಕ್ ಹೋಗ್ಯಾನ್ ಏನ್’ ಎಂದೆ ಅನುಮಾನದಿಂದ.
‘ಅಯ್ಯ, ಅಂಥದ್ದು ಏನೂ ಇಲ್ರೀ. ನಿನ್ನೆ ಕುಡ್ದ ಬಂದಿದಿಲ್ರಿ. ಹೀಂಗಾಗಿ ಮಂಗಳಾರತಿ ಆಗಿಲ್ರಿ. ಪಕ್ಷದವರು ಬಂದು ಗುಡ್ಯಾಗ್ ಕೆಲ್ಸ ಐತಿ ಅಂತ ಹೇಳಿ ಕರ(ಎಳ)ಕೊಂಡ್ ಹೋಗ್ಯಾರ್’ ಅಂದ್ಳು.
‘ಊರಾಗ್ ಭಾಳ್ ಗುಡಿಗೋಳ್ ಅದಾವ. ಯಾವ್ ಗುಡಿ ಅಂತ ಗೊತ್ತದ ಏನ್ಬೆ’ ಎಂದೆ. ‘ಇಲ್ಲೆ ಓಣ್ಯಾಗಿನ ಹನಮಪ್ಪನ ಗುಡಿಗೆ ಹೋಗ್ಯಾರ್ರಿ’ ಅಂದ್ಳು. ‘ಆತ್ ಬಿಡವ್ವ. ಅಲ್ಲೆ ಭೆಟ್ಟಿ ಆಗ್ತೀನಿ’ ಅಂತ ಹೇಳಿ ಸಣ್ಣವರಿದ್ದಾಗ ಹಬ್ಬದಾಗ್ ಗುನುಗುನಿಸುತ್ತಿದ್ದ ‘ಹನಮಂತಪ್ಪ, ಹೊಡಿ ನಮ್ಮಪ್ಪ, ಹೋಳ್ಗಿ ತುಪ್ಪ...’ ಹೇಳ್ಕೊತ್ ಗುಡಿ ದಾರಿ ಹಿಡಿದೆ.
ಮನಸ್ಸಿಲ್ಲದಿದ್ರೂ, ಯಾರಾದ್ರು ತಪ್ಪ ತಿಳ್ಕೊಂಡಾರಂತ ಗರ್ಭಗುಡಿಗೆ ಒಂದ್ ಸುತ್ ಹಾಕಿ ಬಾಗಿಲಲ್ಲಿ ಹಣಿಕಿ ಹಾಕ್ದೆ. ಪೂಜಾರಪ್ಪನಾಗಿ ಪ್ರಭ್ಯಾ ಬಂದವರಿಗೆಲ್ಲ ತೀರ್ಥ ಹಂಚಾಕತ್ತಿದ್ದ.
ನಾನೂ ಬೊಗಸೆ ಒಡ್ಡಿ, ‘ರಾತ್ರಿ ತೀರ್ಥಾ ಕುಡ್ಯಾಂವಾ, ಈಗ ಗುಡ್ಯಾಗ್ ತೀರ್ಥಾ ಕೊಡಾಕತ್ತಾನ್. ರಾಮನ ಗುಡ್ಯಾಗ್ ಇರೋದ್ ಬಿಟ್ಟು, ರಾಮನ ಕಟ್ಟಾ ಭಕ್ತನ ಗುಡ್ಯಾಗ್ ಸೇರ್ಕೊಂಡ್ ಏನ್ ಮಾಡಾಕತ್ತಿ’ ಎಂದು ಸಣ್ಣಗೆ ಗೊಣಗಿದೆ.
‘ಭಕ್ತರಿಗೆ ತೀರ್ಥಾ ಹಂಚಾಕತ್ತೀನಿ, ಕಣ್ ಕಾಣ್ಸುದಿಲ್ಲೇನ್ ಮಳ್ಳ. ತೀರ್ಥ, ಮಂತ್ರಾಕ್ಷತೆ ಜತೆಗೆ ನಮ್ಮ ಪಕ್ಷಕ್ಕ ವೋಟ್ ಕೊಡ್ಬೇಕ್ ಅಂತಾನೂ ಕೇಳಾಕತ್ತೀನಿ’ ಎಂದು ಬಾಯಿಬಿಟ್ಟ.
‘ಇದೇನೊ. ದೇವ್ರು ವರಾ ಕೊಟ್ರೂ ಪೂಜಾರಿ ಕೊಡಲ್ಲ ಅಂತಾರ್. ನೀ ನೋಡಿದ್ರ ಭಕ್ತ – ಭಕ್ತೆಯರಿಂದನ ವೋಟ್ ಕೊಡಿ ಅನ್ನೋ ವರಾ ಕೇಳಾಕತ್ತಿಯಲ್ಲೋ. ಏನ್ ಕೇಡ್ಗಾಲ್ ಬಂತೊ’ ಎಂದೆ. ತಲೆ ಎತ್ತಿ ನೋಡಿದ ಪ್ರಭ್ಯಾ, ಕಣ್ಣಲ್ಲೇ ಕಿಡಿಕಾರಿ. ‘ಸ್ವಲ್ಪ ಬಾಯಿಗೆ ಬೀಗಾ ಹಾಕ್ಕೊಂಡ್ ಸುಮ್ ಇರ್ತಿ ಏನಪಾ. ಸಂಜೀಮುಂದ ನೋಡ್ಕೊತೀನಿ’ ಅಂತ ಹಲವು ಅರ್ಥಗಳನ್ನು ಧ್ವನಿಸುವ ರೀತಿಯಲ್ಲಿ ಧಮ್ಕಿ ಹಾಕ್ದ.
‘ಏನೋ, ಇದು ನಿನ್ನ ಹೊಸ ಅವತಾರ’ ಎಂದೆ ರಮಿಸುವ ಧಾಟಿಯಲ್ಲಿ. ‘ಇದು ನಮ್ಮ ಪಕ್ಷದ ‘ಆಪರೇಷನ್ ಅರ್ಚಕ’ರ ಪ್ರಭಾವ. ಭಕ್ತ(ಕ್ತೆಯ)ರನ್ನು ಓಲೈಸಲು ರಾಮನ ಪಕ್ಷ ಹೊಸ ಅಸ್ತ್ರಾ ಕಂಡ್ಕೊಂಡದ. ತೀರ್ಥ, ಪ್ರಸಾದ ನೀಡುವುದರ ಜತೆಗೆ ಬಿಜೆಪಿಗೆ ವೋಟ್ ಹಾಕಿದ್ರ ದೇವ್ರು ನಿಮ್ಗ ಛಲೋದು ಮಾಡ್ತಾನ’ ಅಂತ ಹೇಳಬೇಕಾಗೈತಿ’ ಅಂದ.
‘ಛಲೋ ಕೆಲ್ಸಾ ಮಾಡಾಕತ್ತಿ ಏಳ್. ಲೋಕಸಭಾ ಚುನಾವಣೆ ಇನ್ನ ಭಾಳ್ ದೂರ ಅದS ಅಲ್ಲ’ ಎಂದೆ.
‘ಉಪ ಚುನಾವಣೆದಾಗS ಇದರ ಪ್ರಯೋಗ್ ಮಾಡಾಕತ್ತಾರ್. ಇಲ್ಲಿ ಜಯಾ ಸಿಕ್ರ, ಎಲ್ಲಾ ಕಡೆನೂ ಪೂಜಾರಿಗೋಳಿಗೆ ಗಾಳಾ ಹಾಕಾಕ್ ನಮ್ಮ ಪರಿವಾರದವ್ರು ತಲಿ ಓಡ್ಸ್ಯಾರ್’ ಅಂದ.
‘ಇದೊಂದ್ ಹೊಸಾ ಮಸಲತ್ ಇದ್ಹಂಗ್ ಐತಿ ಬಿಡಪಾ. ಹನಮಂತಪ್ಪನ ಹಗ್ಗಾ ತಿನ್ನೋವಾಗ್ ಪೂಜಾರಿ ಶಾವಿಗೆ ಬೇಕ್ ಅಂದನಂತ ಅನ್ನೋ ಹಂಗ್, ಕೇಂದ್ರದಾಗ್ ಎರಡ್ ಬಾರಿ ಸರ್ಕಾರ್ ಇದ್ರೂ ರಾಮಗ್ ಗುಡಿ ಕಟ್ಸಾಕ್ ಆಗದವ್ರು ಈಗ ಪೂಜಾರಿ ಕೈಲಿ ವೋಟ್ ಕೇಳಾಕ್ ಹೊಂಟಾರ್. ಎಂಥಾ ಕಲಿ(ಕೇಡ್)ಗಾಲ್ ಬಂತ್ ನೋಡ್’ ಎಂದೆ.
‘ಅದಿರ್ಲಿ, ಮಿನಿಸ್ಟ್ರು ರಮೇಶ್ ಜಾರಕಿಹೊಳಿ, ದೇವರ ಹತ್ರ ಕೇಳಿರೊ ವರ ಸಿಗುವ ತನ್ಕ ಸಂಪುಟ ಸಭೆಗೆ ಹಾಜರಾಗುದಿಲ್ಲಂತ ವ್ರತಾ ಆಚರಿಸಾಕತ್ತಾರಲ್ಲಾ. ಆ ವರ ಯಾವ್ದು ಅಂತ ನಿಮ್ಮ ದೇವ್ರಿಗೆ ಇಲ್ಲಂದ್ರ ಗರ್ಭಗುಡಿ ಸಂಸ್ಕೃತಿಯ ಪರಿವಾರಕ್ಕ ಏನರ ಗೊತ್ತದ ಏನ್’ ಎಂದೆ.
‘ಏಯ್, ಅದು ನಮ್ಮ ದೇವ್ರ ವ್ಯಾಪ್ತಿಗೆ ಬರುದಿಲ್ಲ. ಅದೇನಿದ್ರೂ ರಾಹುಲ್ ಬಾಬಾನ ಬಂ ಬಂ ಭೋಲೆ ಶಿವನಿಗೆ ಸಂಬಂಧಿಸಿದ್ದು. ರಾಮಾಯಣ ಏನಿದ್ರು ನಮ್ದು. ಶಿವಾಯಣ ಕೈ ಪಾರ್ಟಿಗೆ ಸೇರಿದ್ದು’ ಅಂದ.
‘ಒಂದೊಂದು ಪಕ್ಷದೋರು ಒಬ್ಬೊಬ್ಬ ದೇವ್ರನ್ನ ಬಾಡಿಗೆಗೆ ತಗೊಂಡ್ಹಂಗ್ ಕಾಣ್ತದಲ್ಲೋ. ಈ ರಾಜಕಾರಣಿಗಳಿಗೆ ಯಾರೂ ಸಾಲೂದಿಲ್ಲ. ಎಲ್ಲಾ ಪಕ್ಷಗಳಿಗೂ ಕೇಡುಗಾಲ ಬಂದದ ಅಂತನS, ದೇವ್ರ ಮೊರೆ ಹೋಗ್ಯಾರ್. ರಾಹುಲ್ ಬಾಬಾ ಶಿವನ ಪರಮ ಭಕ್ತನಾಗ್ಯಾನ್. ಬಮ್ ಬಮ್ ಭೋಲೆ ಅಂತ ಕಾಂಗ್ರೆಸ್ನೋರು ಹೊಸ ರಾಗಾ ಸುರು ಹಚ್ಕೊಂಡಾರ್. ಉತ್ತರ ಪ್ರದೇಶ್ದಾಗ್ ಸಮಾಜವಾದಿ ಪಕ್ಷದ ಸೈಕಲ್ ಪ್ರವೀಣರು, ವಿಷ್ಣುವಿನ ಮೊರೆ ಹೋಗ್ಯಾರ್. ಹಾತಿ ನಂಹೀ ಗಣೇಶ್ ಹೈ, ಬ್ರಹ್ಮ ವಿಷ್ಣು ಮಹೇಶ್ ಹೈ ಅಂತ ಹೇಳುತ್ತಿರುವ ಉತ್ತರ ಪ್ರದೇಶದ ಬಿಎಸ್ಪಿ, ನಮ್ಮ ರಾಜ್ಯದಾಗ್ ಸಮ್ಮಿಶ್ರ ಸರ್ಕಾರದ ಸಚಿವ ಮಹೇಶ್ ರಾಜೀನಾಮೆ ಕೊಡುಹಂಗ್ ಮಾಡೇದ. ಸಮ್ಮಿಶ್ರ ಸರ್ಕಾರವನ್ನ ಆ ದೇವರೇ ಕಾಪಾಡಬೇಕಪ್ಪ ಅಂತ ನನ್ನಂತಹ ನಾಸ್ತಿಕರೂ ಬೇಡ್ಕೊಳ್ಳೊ ಕಾಲ ಬಂತಲ್ಲೋ’ ಅಂತ ಗೊಣಗಿದೆ.
‘ಯಾವ ಪಕ್ಷದ ಕೈಹಿಡಿಯಬೇಕು ಅಂತರಾಮ, ಶಿವ ಮತ್ತು ವಿಷ್ಣು ಗೊಂದಲ್ದಾಗ್ ಬಿದ್ದಾರ್. ಇನ್ನೊಂದೆಡೆ ದುರ್ಗಾದೇವಿಯರು ಕೃಷ್ಣನ ಕಟ್ಟಾ ಭಕ್ತರ ವಿರುದ್ಧ ಕತ್ತಿ ಮಸ್ಯಾಕತ್ತಾರ್. ಹುಷ್ಯಾರ್ ಇರು ಮಗನ’ ಅಂತ ಪೂಜಾರಪ್ಪನ ಆವಾಹನೆಯಾಗಿದ್ದ ಪ್ರಭ್ಯಾ ಅಪ್ಪಣೆ ಕೊಡಿಸಿದ.
‘ನೀ ಹೇಳೂದು ಖರೆ ಐತಿ ಬಿಡು’ ಅಂತ ಹೇಳಿ, ‘ಅವಳ ಹೆಜ್ಜೆ’ ಚಿತ್ರದ ‘ದೇವರ ಆಟಾ ಬಲ್ಲವರಾರು, ಆತನ ಎದುರು ನಿಲ್ಲುವರಾರು... ತನ್ನ ಮನದಂತೆ ಕುಣಿಸಿ ಆಡುವಾ...’ ಹಾಡು ಗುನುಗುನಿಸುತ್ತ ಪ್ರಭ್ಯಾನ ಎಳಕೊಂಡು ಮನೆ ಕಡಿಗೆ ಹೊಂಟ್ಯಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.