ADVERTISEMENT

ಸಂಗತ: ನಿಜಭಕ್ತಿಯಲ್ಲ, ಕಣ್ಕಟ್ಟಿನ ಆಚರಣೆ– ಮೌಢ್ಯಗಳಿಗೆ ಅನುಕರಣೆಯೇ ಬಲವಾದ ಕಾರಣ

ಹೆಚ್ಚಿನ ಮೌಢ್ಯಗಳಿಗೆ ಅನುಕರಣೆಯೇ ಬಲವಾದ ಕಾರಣವಾಗಿದೆ

ದೀಪಾ ಫಡ್ಕೆ
Published 26 ಜೂನ್ 2024, 18:52 IST
Last Updated 26 ಜೂನ್ 2024, 18:52 IST
<div class="paragraphs"><p>ಸಂಗತ: ನಿಜಭಕ್ತಿಯಲ್ಲ, ಕಣ್ಕಟ್ಟಿನ ಆಚರಣೆ</p></div>

ಸಂಗತ: ನಿಜಭಕ್ತಿಯಲ್ಲ, ಕಣ್ಕಟ್ಟಿನ ಆಚರಣೆ

   

ಮೈಸೂರಿಗೆ ಇತ್ತೀಚೆಗೆ ಹೋಗಿದ್ದಾಗ, ಮನೆಮಕ್ಕಳೆಲ್ಲ ಬಲಮುರಿಗೆ ಹೋಗಬೇಕೆಂದು ಗಲಾಟೆ ಎಬ್ಬಿಸಿದರು. ಹಾಗೇ ಹೋದಾಗ ಅಲ್ಲಿ ಕಂಡದ್ದು ಬತ್ತಿದ್ದ ಬಲಮುರಿ ಮತ್ತು ದಡದ ತುಂಬ ಎಸೆದು ಬಿಟ್ಟ ಬಟ್ಟೆಗಳ ರಾಶಿ. ಕಾಲಿಡಲೂ ಆಗದಷ್ಟು ಪ್ರಮಾಣದಲ್ಲಿ ಸೀರೆ, ಷರ್ಟು, ಪಂಚೆಗಳನ್ನು ಎಸೆದುಹೋಗಿದ್ದ ಕಾರಣ, ಕಾವೇರಿಯ ದಡವನ್ನು ಬೇಸರ, ವಿಷಾದದಿಂದ ನೋಡುವಂತೆ ಆಗಿತ್ತು.

ದಾನವು ಪ್ರಾಯಶಃ ಎಲ್ಲ ಸಂಸ್ಕೃತಿ ಮತ್ತು ಮತಗಳಲ್ಲಿ ಇರುವ ಉನ್ನತ ಮೌಲ್ಯ. ವಸ್ತ್ರದಾನವೂ ಹಾಗೆಯೇ ಒಂದು ಸಂಪ್ರದಾಯವಾಗಿ ಬೆಳೆದುಬಂದಿದೆ. ಹಬ್ಬಹರಿದಿನಗಳಲ್ಲಿ ಕೊಡುವ ರವಿಕೆ ಖಣವೂ ಅದರದೇ ಒಂದು ಅಂಗ. ನದಿ ಮತ್ತು ನೀರಿನ ಮೂಲಗಳು ಮನುಕುಲವನ್ನು ಪಾಲಿಸುವ, ಬದುಕನ್ನು ಪೊರೆಯುವ ಆಧಾರಗಳು. ಈ ಕಾರಣದಿಂದಲೇ ಗಂಗೆ, ಯಮುನೆ ಸೇರಿದಂತೆ ಎಲ್ಲ ನದಿ, ನೀರಿನ ಮೂಲಗಳನ್ನು ಆರಾಧಿಸುತ್ತಾ ಗೌರವಿಸುತ್ತಾ ಅದನ್ನು ಬಳಸಿಕೊಂಡು ಬದುಕುವ ಅಭ್ಯಾಸ ನಮಗಾಗಿರುವುದು.

ADVERTISEMENT

ನಾನು ಕೃಷಿ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದವಳು. ಬೇಸಿಗೆಯಲ್ಲಿ ನಮ್ಮ ತೋಟಗಳಿಗೆ ನೀರು ಹನಿಸುವ ಉದ್ದೇಶದಿಂದ ನೂರಾರು ವರ್ಷಗಳಿಂದ ನದಿಗೆ ‘ಕಟ್ಟ’ ಎನ್ನುವ ಅಡ್ಡ ಕಟ್ಟಿ, ನೀರನ್ನು ಆ ಪ್ರದೇಶದ ಎಲ್ಲರ ತೋಟಗಳಿಗೆ ಬಳಸುತ್ತೇವೆ. ಹಾಗೆ ಅಡ್ಡ ಕಟ್ಟಿದ ನಂತರ ನಮ್ಮ ತೋಟದ ತೋಡುಗಳಿಗೆ ನೀರು ಸರಸರ ಹರಿದು ಬಂದು ತೋಡು ತುಂಬಿದ ಮೇಲೆ ಮೊದಲು ನೀರನ್ನು ಪೂಜಿಸಿಯೇ ತೋಟಕ್ಕೆ ಬಳಸುವುದು. ಬದುಕಿಗೆ ಆಧಾರವಾಗುವ ನೀರಿಗೆ ದೈವೀಕತೆಯ ಸ್ಪರ್ಶವನ್ನು ನೀಡಿದ್ದು ಅದರೆಡೆಗೆ ಒಂದು ಗೌರವವಿರಲಿ ಎಂದು. ಆಗ ಅದನ್ನು ಅಗತ್ಯಕ್ಕೆ ತಕ್ಕಷ್ಟೇ ಸದ್ಬಳಕೆ ಮಾಡುವಂತೆ ಆಗುತ್ತದೆ ಎನ್ನುವುದೇ ಅದರ ಹಿಂದಿನ ಉದ್ದೇಶ.

ಈ ಪದ್ಧತಿ ಎಲ್ಲ ಕಡೆಯೂ ಇದೆ. ‘ಕೆರೆಯಂ ಕಟ್ಟಿಸು, ಬಾವಿಯಂ ಸವೆಸು’ ಎನ್ನುವ ಮಾತೂ ಮನುಷ್ಯನ ಜೀವನಕ್ಕೆ ಅಗತ್ಯವಿರುವ ನೀರನ್ನು ಪೊರೈಕೆ ಮಾಡುವುದೇ ಅತ್ಯಂತ ದೊಡ್ಡ ದಾನ, ಧರ್ಮವೆಂದು ಅರಿತುಕೊಂಡದ್ದಕ್ಕೆ ನಿದರ್ಶನ.

ಮೊನ್ನೆಯಷ್ಟೇ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ಸ್ವಚ್ಛತಾ ಕಾರ್ಯ ನಡೆದಾಗ ಕುಮಾರ ಧಾರೆಯಲ್ಲಿ ತುಂಬಿದ್ದ ಬಟ್ಟೆಗಳ ರಾಶಿ, ದುಶ್ಶಾಸನ ಎಳೆದು ಹಾಕಿದ್ದ ದ್ರೌಪದಿಯ ಸೀರೆಯ ರಾಶಿಯಂತೆ ಟ್ರ್ಯಾಕ್ಟರ್ ತುಂಬ ಇತ್ತು. ಇದು ಅತ್ಯಂತ ಹೇಯಕರ. ನದಿಯೊಂದರ ಅಸ್ತಿತ್ವದ ಮೇಲೇ ಮನುಷ್ಯ ಮಾಡಿದ ಅನಾಚಾರವಿದು. ನದಿಸ್ನಾನ, ಸಮುದ್ರಸ್ನಾನ ಎನ್ನುವುದು ಶಾಸ್ತ್ರಗಳಲ್ಲಿ ಪ್ರಸ್ತಾಪವಾಗಿರುವುದಿದೆ. ಆದರೆ ಹೀಗೆ ಸ್ನಾನದ ನಂತರ ಉಟ್ಟ ಬಟ್ಟೆಯನ್ನು ಅಥವಾ ಬೇರೆ ಬಟ್ಟೆಯನ್ನು ನದಿಗೆ ಎಸೆಯುವ ಪದ್ಧತಿಯನ್ನು ಯಾವ ಶಾಸ್ತ್ರದಲ್ಲೂ ಹೇಳಿಲ್ಲ.

ಇಂತಹ ಹೆಚ್ಚಿನ ಮೌಢ್ಯಗಳಿಗೆ ಅನುಕರಣೆಯು ಬಲವಾದ ಕಾರಣವಾಗಿದೆ. ಯಾವುದೋ ಕಾಲದ ಅಥವಾ ಯಾರೋ ಯಾವುದೋ ಕಾರಣಕ್ಕಾಗಿ ಮಾಡಿದ್ದ ಇಂತಹ ಕೆಲವು ಆಚಾರಗಳನ್ನು ನೋಡಿ ಅನುಕರಿಸುವುದು ವಿದ್ಯಾವಂತ ಸಮಾಜಕ್ಕೆ ಸಲ್ಲದು. ಈ ರೀತಿ ಬಟ್ಟೆಗಳನ್ನು ಎಸೆಯುವುದು ಖಂಡಿತ ವಸ್ತ್ರದಾನವಾಗದು. ಸಂಕಟವನ್ನು ಕಳೆದುಕೊಳ್ಳುವ ಭಾವದಿಂದೇನಾದರೂ ಮಾಡುತ್ತಿದ್ದರೆ ಅದೂ ಆಗದು. ಏಕೆಂದರೆ ಮನುಷ್ಯನ ಜೀವನಾಡಿಯಾದ ನದಿಗಳನ್ನು ಹೀಗೆ ಕಸದ ತೊಟ್ಟಿಗಳಾಗಿಸುವಷ್ಟು ದೊಡ್ಡ ಪಾಪ ಇನ್ನೊಂದಿಲ್ಲ. ಭಕ್ತಿಯ ಹೆಸರಿನಲ್ಲಿ ಇಂತಹ ಕಣ್ಕಟ್ಟಿನ ಆಚರಣೆಗಳು ನಡೆದರೆ ಅದು ಮೌಢ್ಯವೇ ವಿನಾ
ನಿಜಭಕ್ತಿಯಾಗದು. ಭಕ್ತಿ ಎಂದರೆ ಅಂತಃಕರಣ. ಅದು ಎಂದಿಗೂ ಇನ್ನೊಂದನ್ನು ನೋಯಿಸದು.

ಪ್ರತಿ ಆಚಾರಕ್ಕೂ ಪರ್ಯಾಯ ಇದ್ದೇ ಇರುತ್ತದೆ. ನಮ್ಮ ಮಿತಿಯಲ್ಲಿ ಸಂಪ್ರದಾಯಗಳನ್ನು ಆಚರಿಸುವ ವಿವೇಕವನ್ನು ಆಧುನಿಕ ಶಿಕ್ಷಣ ನೀಡಿದೆ. ನಗರಗಳಲ್ಲಿ ಚೌತಿಯ ಗಣಪನನ್ನು ಪೂಜಿಸಿ ನಂತರ ಬಕೆಟ್ಟಿನಲ್ಲಿ ವಿಸರ್ಜಿಸಿ ಕೃತಾರ್ಥರಾಗುವವರು ನಾವೇ ಅಲ್ಲವೆ?! ಹಾಗೇ ಇಂಥ ಆಚಾರ ನಡೆಯಲೇಬೇಕು ಎನ್ನುವವರು ನದಿಯಲ್ಲಿ ಸ್ನಾನ ಮಾಡಿದ ನಂತರ ಬಟ್ಟೆಯನ್ನು ಕಸದ ಬುಟ್ಟಿಯಲ್ಲಿ ಅಥವಾ ಬೇರೆ ಕಡೆ ಹಾಕಬಹುದು ಇಲ್ಲವೇ ಬಟ್ಟೆ ಉತ್ತಮವಾಗಿದ್ದರೆ ಅಗತ್ಯವಿರುವವರಿಗೂ ನೀಡಬಹುದು.

ದಾನಕ್ಕೆ ನೂರಾರು ಮುಖಗಳಿವೆ. ಮುಖ್ಯವಾಗಿ ನಮ್ಮಲ್ಲಿ ಮೂಡಬೇಕಾಗಿರುವುದು ಕಾಳಜಿ. ನೀರು, ಆಹಾರದಂತಹ ಅಗತ್ಯಗಳನ್ನು ಹಾಳು ಮಾಡುವ ಯಾವುದೇ ಆಚರಣೆಯೂ ಯಾವುದೇ ಉತ್ತಮ ಫಲ ನೀಡದು ಎನ್ನುವ ಅತ್ಯಂತ ಮೂಲಭೂತ ಜ್ಞಾನ ನಮ್ಮದಾಗಬೇಕು.

ನದಿ ದಡದ ದೇವಾಲಯಗಳ ಆಡಳಿತ ಮಂಡಳಿ ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು. ದೇವಾಲಯಗಳು, ನದಿತೀರಗಳು ಪಾಪ ಕಳೆದುಕೊಳ್ಳುವ ಕೇಂದ್ರಗಳಲ್ಲ. ಅವು ಮನಸ್ಸಿಗೆ ಸಾಂತ್ವನ ನೀಡುವ ಸ್ಥಳಗಳು. ಸಾಂತ್ವನವೂ ಪ್ರಕೃತಿಗೆ, ಮುಖ್ಯವಾಗಿ ನಮ್ಮದೇ ಬದುಕಿಗೆ ಮಾರಕವಾಗಬಾರದು ಅಲ್ಲವೇ? ನೀರು, ಗಾಳಿ ಕಲುಷಿತವಾದರೆ ನಮ್ಮ ಬದುಕೂ ಸಮಾಪನವಾದಂತೆಯೇ. ನದಿದಂಡೆಗಳಲ್ಲಿ ಈ ರೀತಿ ವಸ್ತ್ರ ಎಸೆಯಬಾರದೆನ್ನುವ ಸೂಚನಾ ಫಲಕಗಳನ್ನು ಹಾಕಬೇಕು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನೂ ಸರ್ಕಾರ ನೀಡಬೇಕು.

ಪ್ರತಿ ವಿಷಯ ವಾಟ್ಸ್‌ಆ್ಯಪ್‌ನಲ್ಲಿ ಮಿಂಚಿನ ವೇಗದಲ್ಲಿ ಸಂಚರಿಸುವ ಈ ಹೊತ್ತಿನಲ್ಲಿ ಇಂಥ ಸಂದೇಶಗಳು ತಲುಪಿದರೆ ಸಣ್ಣ ಬದಲಾವಣೆ ಮೂಡಬಹುದೇನೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.