ADVERTISEMENT

ಸಂಗತ | ಎಸ್‌ಇಪಿ: ಗೊಂದಲ ನಿವಾರಣೆ

ಕೆಲವು ರೂಪಾಂತರಗಳೊಂದಿಗೆ ಪರಿಷ್ಕರಣೆಗೊಂಡ ಶಿಕ್ಷಣ ನೀತಿ

ಶಿವಲಿಂಗಸ್ವಾಮಿ ಎಚ್.ಕೆ.
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
   

ಯಾವುದೇ ಕಾಲಘಟ್ಟದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬಂದಾಗ, ಅದು ಸಾಮಾನ್ಯವಾಗಿ ಶಿಕ್ಷಣ ವ್ಯವಸ್ಥೆಯ ಹಲವಾರು ಆಯಾಮಗಳಲ್ಲಿ ವೈವಿಧ್ಯಮಯ ಪರಿಣಾಮಗಳಿಗೆ ಕಾರಣವಾಗುತ್ತದೆ. ಇಂತಹ ಪ್ರತಿ ನೀತಿಯೂ ಶೈಕ್ಷಣಿಕ ಸಂರಚನೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಪರಿಚಯಿಸುವ ಪ್ರಯತ್ನಗಳನ್ನು ಮಾಡುತ್ತದೆ. ಈ ಬದಲಾವಣೆಗಳು ಸಾಂಪ್ರದಾಯಿಕ ಅಭ್ಯಾಸಗಳನ್ನು ಬದಿಗೊತ್ತಿ ಹೊಸ ಪ್ರಯತ್ನಗಳಿಗೆ ಒತ್ತು ನೀಡಲು ಮುಂದಾದಾಗ, ತಕ್ಷಣವೇ ಅದಕ್ಕೆ ಹೊಂದಿಕೊಳ್ಳುವುದು ಮಕ್ಕಳು, ಅಧ್ಯಾಪಕರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ದೊಡ್ಡ ಸವಾಲಾಗುತ್ತದೆ. ಬೋಧನೆಗೆ ಅಧ್ಯಾಪಕರ ನಿಯೋಜನೆ ಮತ್ತು ಕೆಲವು ಶೈಕ್ಷಣಿಕ ಸಂಸ್ಥೆ ಗಳಲ್ಲಿ ಸಂಪನ್ಮೂಲ ನಿರ್ವಹಣೆ ಕಷ್ಟವಾಗುತ್ತದೆ. ಆದರೆ ಹೊಸ ಶಿಕ್ಷಣ ನೀತಿ ಎಂದಮೇಲೆ ಇಂತಹ ಬೆಳವಣಿಗೆ ಸರ್ವೇಸಾಮಾನ್ಯ.

ರಾಜ್ಯದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯಿಂದ 2021ರಲ್ಲಿ ಅನುಷ್ಠಾನಕ್ಕೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಎನ್‌ಇಪಿಯು ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಹೆಚ್ಚು ಪೂರಕವಾದ ವಿಷಯಗಳ ಬಗ್ಗೆ ಸಮಗ್ರವಾದ ಜ್ಞಾನವನ್ನು ಪಡೆಯಲು ಅವಕಾಶ ನೀಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಇದು ಕೆಲವು ವಿದ್ಯಾರ್ಥಿಗಳಿಗೆ ಒಪ್ಪಿತವಾದಂತೆ ತೋರಲಿಲ್ಲ. ಎನ್‌ಇಪಿ ಬಳಸುತ್ತಿದ್ದ ‘ಟೆಕ್ನಲಾಜಿಕಲ್ ಇಂಟಿಗ್ರೇಶನ್’, ‘ಕ್ರಿಟಿಕಲ್ ಥಿಂಕಿಂಗ್‌’ನಂತಹ ಕೆಲವು ಪದಗಳೇ ಬಹಳ ಮಂದಿಗೆ ಆಪ್ಯಾಯಮಾನವಾಗಲಿಲ್ಲ. ಆದ್ದರಿಂದ, ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌ ನೇತೃತ್ವದ ಈಗಿನ ಸರ್ಕಾರವು ಎನ್‌ಇಪಿ ಬದಲಾಗಿ ಎಸ್‌ಇಪಿ, ಅಂದರೆ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಪ್ರೊ. ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಅದರಂತೆ ಈಗ ಎಸ್‌ಇಪಿ ಜಾರಿಗೆ ಸುತ್ತೋಲೆ ಹೊರಡಿಸಿದೆ.

ಎನ್‌ಇಪಿಯನ್ನು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ದೇಶದಾದ್ಯಂತ ಎಲ್ಲಾ ಶೈಕ್ಷಣಿಕ ಹಂತಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಬದಲಾವಣೆಗಳು ಸುಧಾರಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುತ್ತವೆ ಎಂದುಕೊಳ್ಳುತ್ತಿರುವಾಗ, ಎನ್‌ಇಪಿಯಲ್ಲಿರುವ ನ್ಯೂನತೆಗಳು ಬಹಳಷ್ಟು ಸರ್ಕಾರಿ ಕಾಲೇಜುಗಳಲ್ಲಿ ಬೆಳಕಿಗೆ ಬರಲಾರಂಭಿಸಿದವು. ಮೇಲ್ನೋಟಕ್ಕೆ ಉಪಯುಕ್ತ ಎನಿಸುವಂತಿದ್ದರೂ ಎನ್‌ಇಪಿಯನ್ನು ಹಿಂಪಡೆದು ಎಸ್‌ಇಪಿ ಅನುಷ್ಠಾನಕ್ಕೆ ತರಲು ನಾಲ್ಕು ಪ್ರಮುಖ ಕಾರಣಗಳಿವೆ:

ADVERTISEMENT

ಮೊದಲನೆಯದಾಗಿ, ಸ್ನಾತಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ಆನರ್ಸ್ ಕೋರ್ಸ್‌ ಪರಿಚಯಿಸಲಾಗಿತ್ತು ಮತ್ತು ನಂತರ ಪಿಎಚ್‌.ಡಿಗೆ ನೇರ ಪ್ರವೇಶಕ್ಕೆ ಅವಕಾಶ ಒದಗಿಸಲಾಗಿತ್ತು. ಆದರೆ ಇದು ಸರ್ಕಾರಿ ಕಾಲೇಜುಗಳಲ್ಲಿ ಮೂಲ ಸೌಕರ್ಯ ಮತ್ತು ಅಧ್ಯಾಪಕರ ಕೊರತೆಯಿಂದ ಗೊಂದಲಮಯ ಅಂಶವಾಗಿ ಕಂಡುಬಂತು.  ಹಾಗಾಗಿ, ಸಾಂಪ್ರದಾಯಿಕ ಕೋರ್ಸುಗಳನ್ನು ಬಯಸಿ ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ, ಬಹಳ ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರವೇಶಕ್ಕೆ ಅರ್ಜಿ ಹಾಕುವವರ ಸಂಖ್ಯೆ ಇಳಿಮುಖವಾಗಲಾರಂಭಿಸಿತು.

ಎರಡನೆಯದಾಗಿ, ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಒಟ್ಟಾರೆ ವರ್ಧಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ, ಅಂತರಶಿಸ್ತೀಯ ಸಂಸ್ಕೃತಿಯನ್ನು ಬೆಳೆಸಲು ನೀಡುತ್ತಾ ಬಂದಿದ್ದ ಆಂತರಿಕ ಅಂಕಗಳನ್ನು 20ರಿಂದ 40ಕ್ಕೆ ಏರಿಸಿದ್ದು ಮತ್ತಷ್ಟು ಆತಂಕ ಮತ್ತು ಗೊಂದಲಕ್ಕೆ ಕಾರಣವಾಯಿತು.

ಮೂರನೆಯದಾಗಿ, ಎನ್‌ಇಪಿ ಪರಿಚಯಿಸಿದ ಅತಿ ಮುಖ್ಯ ಬದಲಾವಣೆಯೆಂದರೆ, ಮೂರು ಸಹವರ್ತಿ ವಿಷಯಗಳನ್ನು ನೀಡುವ ಸಾಂಪ್ರದಾಯಿಕ ಪದ್ಧತಿಯನ್ನು ಪರಿಷ್ಕರಿಸಿ ಬರೀ ಎರಡಕ್ಕೆ ಒತ್ತು ನೀಡಿದ್ದು. ಈ ಬದಲಾವಣೆಯ ಉದ್ದೇಶ ಮೂರು ಕ್ಷೇತ್ರಗಳ ಕಡೆ ಗಮನಹರಿಸುವ ಬದಲು ಎರಡು ವಿಷಯಗಳ ಬಗ್ಗೆ ಸಮಗ್ರವಾದ ತಿಳಿವಳಿಕೆ ಒದಗಿಸುವುದಾಗಿತ್ತು. ಆದರೆ ಈ ಬದಲಾವಣೆಯನ್ನು ಸ್ವಾಗತಿಸಲು ಉನ್ನತ ಶಿಕ್ಷಣಾರ್ಥಿಗಳು ಹಿಂಜರಿದದ್ದು ಗಮನಾರ್ಹ.

ಕಡೆಯದಾಗಿ, ಅಧಿಕ ಸಂಖ್ಯೆಯಲ್ಲಿ ಮುಕ್ತ ಆಯ್ಕೆಯ ವಿಷಯಗಳನ್ನು (ಓಪನ್‌ ಎಲೆಕ್ಟಿವ್ಸ್‌) ಪರಿಚಯಿಸಿದ್ದು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿತ್ತು. ಜೊತೆಗೆ, ಕಾಲೇಜುಗಳಲ್ಲಿ ಅಧ್ಯಾಪಕರ ಕಾರ್ಯಭಾರದಿಂದ ಹಿಡಿದು ಮೂಲ ಸೌಕರ್ಯಗಳವರೆಗೆ ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡಿದ್ದು ಸಹ ಎಲ್ಲರ ಅನುಭವಕ್ಕೆ ಬಂದಿತ್ತು. ಎಸ್‌ಇಪಿಯು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುವ ಮೊದಲು ಇದ್ದಂತೆಯೇ ಮೂರು ಪ್ರಧಾನ ವಿಷಯಗಳನ್ನು ಉಳಿಸಿಕೊಳ್ಳುತ್ತದೆ. ಹಾಗೆಯೇ ವೃತ್ತಿಪರ ಬೆಳವಣಿಗೆಗೆ ಪೂರಕವಾಗುವಂತೆ, ಮೂರನೇ ವರ್ಷದಲ್ಲಿ ಆಯ್ಕೆ ಮಾಡಿಕೊಂಡ ಮೂರು ವಿಷಯಗಳಲ್ಲಿ ಒಂದನ್ನು ಮಾತ್ರ ‘ಡೀಪ್ ಸ್ಪೆಷಲೈಸೇಶನ್’ ವಿಷಯವಾಗಿ ಕಲಿಯುವ ಅವಕಾಶ ಮಾಡಿಕೊಡಲಾಗಿದೆ. 

ಅತಿಶಯ ಎನಿಸುವಷ್ಟು ಮುಕ್ತ ಆಯ್ಕೆ ವಿಷಯಗಳನ್ನು ಅಳವಡಿಸಿದ್ದ ಎನ್‌ಇಪಿ ಪಠ್ಯಕ್ರಮದ ವಿನ್ಯಾಸವನ್ನು ಈಗ ಬದಲಿಸಲಾಗಿದೆ. ವಿದ್ಯಾರ್ಥಿಗಳು ಹಿಂದಿನಂತೆಯೇ ಪ್ರಧಾನ ವಿಷಯಗಳನ್ನು ಕಲಿಯಲಿದ್ದಾರೆ. ಇದರಿಂದಾಗಿ ಅಧ್ಯಾಪಕರ ನಿಯೋಜನೆ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಂಪನ್ಮೂಲ ನಿರ್ವಹಣೆಯಲ್ಲಿ ತೊಡಕು ಎದುರಾಗುವುದಿಲ್ಲ. ನಾಲ್ಕು ವರ್ಷದ ಆನರ್ಸ್ ಕೋರ್ಸ್‌ ಸಹ ಎನ್‌ಇಪಿಯಡಿ ಈಗಾಗಲೇ ಪ್ರವೇಶಾತಿ ಪಡೆದವರಿಗೆ ಮಾತ್ರ ಲಭ್ಯವಿರುತ್ತದೆ. ನಾಲ್ಕು ವರ್ಷದ ಪದವಿ ಮುಗಿಸಿ ನೇರವಾಗಿ ಪಿಎಚ್‌.ಡಿಗೆ ಪ್ರವೇಶ ಪಡೆಯುವುದು ಇನ್ನು ಮುಂದೆ ಸಾಧ್ಯವಾಗದು. ಒಟ್ಟಿನಲ್ಲಿ, ಸ್ಥಳೀಯ ರೂಪಾಂತರಗಳೊಂದಿಗೆ ಅನುಷ್ಠಾನಕ್ಕೆ ಬರಲಿರುವ ಎಸ್‌ಇಪಿಯು ಗೊಂದಲಗಳಿಗೆ ತೆರೆ ಎಳೆಯಲಿದೆ.

ಲೇಖಕ: ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾಲಯ, ತುಮಕೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.