ADVERTISEMENT

ಸಂಗತ: ‘ಲಕ್ಷ್ಮಿ’ ಹಣಕ್ಕೆ ಕೃಷ್ಣನ ಲೆಕ್ಕ!

ಈ ಯೋಜನೆಯಡಿ ಮಹಿಳೆಯರಿಗೆ ಸಿಗುವ ಹಣವು ಧಾರ್ಮಿಕ ಕಾರ್ಯಗಳ ಹೆಸರಿನಲ್ಲಿ ಅವರ ಕೈಜಾರಿ ಹೋಗದಂತೆ ನೋಡಿಕೊಳ್ಳಬೇಕಾಗಿದೆ

​ಪ್ರಜಾವಾಣಿ ವಾರ್ತೆ
Published 13 ಮೇ 2024, 19:46 IST
Last Updated 13 ಮೇ 2024, 19:46 IST
<div class="paragraphs"><p>.ಸಂಗತ</p></div>

.ಸಂಗತ

   

ಬಡವರಿಗೆ ಹಂಚಲು ಸರ್ಕಾರ ಕೊಟ್ಟ ಪಡಿತರ ಅಕ್ಕಿ, ಸಕ್ಕರೆಯನ್ನು ಖಾಸಗಿ ವರ್ತಕರಿಗೆ ಮಾರಾಟ ಮಾಡಿ, ಬಂದ ಹಣದಲ್ಲಿ ದೇವಾಲಯಗಳನ್ನು ನಿರ್ಮಿಸುವ ಕೆಲಸವನ್ನು ಕೆಲವು ಗ್ರಾಮಸ್ಥರು 1970- 80ರ ದಶಕದಲ್ಲಿ ಮಾಡುತ್ತಿದ್ದರು. ಇದು, ಆಗ ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸು ಅವರ ಗಮನಕ್ಕೆ ಬಂತು. ‘ಬಡವರ ಹೊಟ್ಟೆಯ ಅನ್ನವನ್ನು ಧಾರ್ಮಿಕ ಕಾರ್ಯದ ಹೆಸರಿನಲ್ಲಿ ಕಿತ್ತುಕೊಳ್ಳುವುದು ಹಿಂಸೆ’ ಎಂದು ಅರಸು ಗುಡುಗಿದ್ದರು. ಕಡ್ಡಾಯವಾಗಿ ಪಡಿತರ ಹಂಚಿಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.

ಈ ಸಂಗತಿ ಏಕೆ ನೆನಪಾಯಿತು ಎಂದರೆ, ಇತ್ತೀಚೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಬದಿಯಲ್ಲಿ ಕುಳಿತಿದ್ದ ಪರಿಚಿತ ಹಿರಿಯ ಮಹಿಳೆಯೊಬ್ಬರು ‘ಗೃಹಲಕ್ಷ್ಮಿ’ ಯೋಜನೆಯಡಿ ಸರ್ಕಾರದಿಂದ ತಮಗೆ ಬರುತ್ತಿರುವ ₹ 2000 ಹಣವನ್ನು ತಮ್ಮ ಗ್ರಾಮದ ಹಿರಿಯರು ದೇವಾಲಯ ನಿರ್ಮಾಣಕ್ಕೆ ಪಡೆದುಕೊಳ್ಳುತ್ತಿರುವು
ದಾಗಿ ತಿಳಿಸಿದರು. ‘ಗ್ರಾಮದ ಮಹಿಳೆಯರೆಲ್ಲ ಒಂದು ವರ್ಷ ಗೃಹಲಕ್ಷ್ಮಿ ಹಣವನ್ನು ದೇವಸ್ಥಾನದ ನಿರ್ಮಾಣಕ್ಕೆ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಗ್ರಾಮದ ಮಠಾಧಿಪತಿಗಳು ನೇತೃತ್ವ ವಹಿಸಿದ್ದಾರೆ. ಇಲ್ಲ ಎಂದು ಹೇಳಲು ಆಗದೆ ಒಪ್ಪಿಕೊಂಡಿದ್ದೇನೆ’ ಎಂದು ಬೇಸರದಿಂದ ಹೇಳಿದರು. ಮಹಿಳೆಯ ಈ ಮಾತು ಕೇಳಿದಾಗ, ಬಡವರ ಸೌಲಭ್ಯಗಳನ್ನು ಕಿತ್ತುಕೊಳ್ಳುವುದು ಹಿಂಸೆ ಎಂದು ಅರಸು ಅವರು ಗುಡುಗಿದ್ದು ಮತ್ತೆ ಕಿವಿಗೆ ಅಪ್ಪಳಿಸಿದಂತಾಯಿತು.

ADVERTISEMENT

ನಮ್ಮ ಈ ಮಾತನ್ನು ಆಲಿಸಿದ, ಬಸ್ಸಿನಲ್ಲಿದ್ದ ಇನ್ನೊಬ್ಬ ಮಹಿಳೆ ‘ನಮ್ಮ ಊರಿನಲ್ಲಿ ದೇವಿಯ ರಥ ನಿರ್ಮಿಸು ತ್ತಿದ್ದಾರೆ. ಅದಕ್ಕೆ ಎಲ್ಲರೂ ಗೃಹಲಕ್ಷ್ಮಿಯ ದುಡ್ಡು ಕೊಡಲೇಬೇಕು ಎಂದು ಮಠಾಧಿಪತಿಗಳು ಹೇಳಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ  ನಮ್ಮದು’ ಎಂದರು. ಆ ಮಹಿಳೆಯ ಮಾತಿನಲ್ಲಿ ಸಿಟ್ಟು, ಅಸಮಾಧಾನ, ದುಃಖ ಮಡುಗಟ್ಟಿತ್ತು.

ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಂಡು ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಪರಿಪಾಟ ಹಳ್ಳಿಗಳಲ್ಲಿ ಶುರುವಾಗಿದೆ. ಮಠಾಧಿಪತಿಗಳು, ಧಾರ್ಮಿಕ ಮುಖಂಡರು, ಹಿರಿಯರು ಇಂತಹ ಕೆಲಸಗಳ ನೇತೃತ್ವ ವಹಿಸುತ್ತಿದ್ದಾರೆ. ಇನ್ನು ಕೆಲವು ಗ್ರಾಮಗಳಲ್ಲಿ ನಿರ್ದಿಷ್ಟ ಸಮುದಾಯದವರು ತಮ್ಮ ಜಾತಿಯ ಜನ ಆರಾಧಿಸುವ ದೇವರ ಗುಡಿ ಕಟ್ಟಲು ಪ್ಲಾನ್ ಮಾಡುತ್ತಿದ್ದಾರೆ. ಇವರು ಕೂಡ ಗೃಹಲಕ್ಷ್ಮಿ ಹಣದ ಮೇಲೆ ಕಣ್ಣಿಟ್ಟಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ಎಷ್ಟೇ ಕಷ್ಟವಿದ್ದರೂ ಧಾರ್ಮಿಕ ಕಾರ್ಯ ಗಳಿಗೆ ಹಣ ಕೊಟ್ಟುಬಿಡುತ್ತಾರೆ. ಈ ಮನೋಧರ್ಮವನ್ನು ಬಳಸಿಕೊಂಡು ಗೃಹಲಕ್ಷ್ಮಿ ಹಣ ಕಿತ್ತುಕೊಳ್ಳುವುದು ಆತಂಕಕಾರಿ ಬೆಳವಣಿಗೆ.

ಮಹಿಳೆಯರ ನಿತ್ಯದ ಬದುಕಿನ ಅವಶ್ಯಕತೆಗಳಿಗೆ ನೆರವಾಗಿ ಅವರ ಕಷ್ಟ ದೂರ ಮಾಡುವ ಆಶಯದಿಂದ ಸರ್ಕಾರ ಗೃಹಲಕ್ಷ್ಮಿ ಯೋಜನೆ ರೂಪಿಸಿದೆ. ಇದು ಮಹಿಳಾ ಸಬಲೀಕರಣ ಪ್ರಕ್ರಿಯೆಯ ಮಹತ್ವದ ಹೆಜ್ಜೆಯಾಗಿದೆ. ಆದರೆ ಈ ಸಹಾಯಧನವನ್ನು ಗುಡಿ ಕಟ್ಟುವುದಕ್ಕೆ, ರಥ ನಿರ್ಮಾಣಕ್ಕೆ ಪಡೆದುಕೊಳ್ಳು
ವುದು ಯೋಜನೆಯ ಮೂಲ ಉದ್ದೇಶ ಮತ್ತು ಆಶಯಕ್ಕೆ ವಿರುದ್ಧವಾದುದು. ಗೃಹಲಕ್ಷ್ಮಿ ಸೌಲಭ್ಯ ಪಡೆಯುವ ಮಹಿಳೆಯರು ಹೆಚ್ಚಾಗಿ ಬಡವರಾಗಿದ್ದಾರೆ.
ಅವರಿಂದ ದೊಡ್ಡ ಮಟ್ಟದ (ವಾರ್ಷಿಕವಾಗಿ ತಲಾ ₹ 24 ಸಾವಿರ) ದೇಣಿಗೆ ಸಂಗ್ರಹಿಸುವುದು ಸರಿಯಲ್ಲ. ಬಡ ಕುಟುಂಬಗಳು ಆರ್ಥಿಕವಾಗಿ ಬಲಗೊಳ್ಳುವುದನ್ನು ಅಡ್ಡಿಪಡಿಸುವ ಹುನ್ನಾರ ಕೂಡ ಆಗಿರಬಹುದು ಎಂಬ ಅನುಮಾನ ಮೂಡುತ್ತದೆ.

ಸಾಮೂಹಿಕ ಪೂಜೆ, ಪ್ರವಚನ, ಧಾರ್ಮಿಕ ಸಮಾರಂಭಗಳ ವೇದಿಕೆಗಳಲ್ಲಿ, ಗೃಹಲಕ್ಷ್ಮಿಯ ಹಣ ನೀಡಿದ ಮಹಿಳೆಯರ ಹೆಸರುಗಳನ್ನು ಪ್ರಕಟಿಸುವುದು, ಅವರನ್ನು ಸನ್ಮಾನಿಸುವುದು ನಡೆಯುತ್ತಿದೆ. ನೋವಿನ ಸಂಗತಿ ಎಂದರೆ, ಕೆಲವು ಮಹಿಳಾ ಮಂಡಳಗಳು ಮಹಿಳೆಯರ ಮನವೊಲಿಸಿ ಹಣ ಪಡೆಯುತ್ತಿವೆ. ಇದೊಂದು ಸಮಷ್ಟಿ ಕೆಲಸ ಎಂದು ಮಹಿಳಾ ಸಂಘಟನೆಗಳ ಸದಸ್ಯರು ಸಮರ್ಥಿಸಿಕೊಳ್ಳುತ್ತಿರುವು ದನ್ನು ನೋಡಿ ಬೇಸರ ಎನಿಸುತ್ತದೆ. ಉಳ್ಳವರು ಶಿವಾಲಯವ ಮಾಡುವರು/ ನಾನೇನು ಮಾಡುವೆ, ಬಡವನಯ್ಯ/ಎನ್ನ ಕಾಲೇ ಕಂಬ, ದೇಹವೇ ದೇಗುಲ/ಶಿರವೇ ಹೊನ್ನ ಕಳಶವಯ್ಯ ಎಂಬ ಬಸವಣ್ಣನವರ ವಚನ, ಬಡವರ ಹಣ ಪಡೆದು ಗುಡಿ ಕಟ್ಟುವವರಿಗೆ  ಮಾರ್ಮಿಕವಾಗಿ ಉತ್ತರ ನೀಡುತ್ತದೆ.

ಗೃಹಲಕ್ಷ್ಮಿ ಹಣ, ಮಹಿಳೆಯರಿಗೆ ಬೇರೆ ಬೇರೆ ನೆಲೆಯಲ್ಲಿ ಅನುಕೂಲಕರವಾಗಿ ಒದಗಿಬಂದಿದೆ. ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧ ಕೊಳ್ಳಲು, ತರಕಾರಿ ಖರೀದಿಸಲು, ಹಟ ಮಾಡುವ ಮೊಮ್ಮಕ್ಕಳಿಗೆ ಚಾಕೊಲೇಟ್‌, ಬಿಸ್ಕೆಟ್ ಕೊಡಿಸಲು ಈ ಹಣ ನೆರವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ  ಕೈಯಲ್ಲಿ ಸ್ವಲ್ಪ ದುಡ್ಡಿರುವುದು ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಹಾಗೆಯೇ ಬೇರೆಯವರ ಬಳಿ ಸಹಾಯ ಯಾಚಿಸುವ ಸಂದರ್ಭಗಳು ಕಡಿಮೆಯಾಗುತ್ತವೆ.

ಮಹಿಳೆಯರ ಆರ್ಥಿಕ ಶಕ್ತಿಯು ಅವರ ಕೌಟುಂಬಿಕ ಉನ್ನತಿಗೆ ಕಾರಣವಾಗುತ್ತದೆ. ಮಹಿಳೆಯ ಬಳಿ ಸದಾಕಾಲ ಸ್ವಲ್ಪವಾದರೂ ಸ್ವಂತದ ಹಣ ಇರುವುದು ಆಕೆಯ ಸುರಕ್ಷತೆಯ ಮೊದಲ ಹೆಜ್ಜೆಯಾಗಿದೆ ಎಂದು ಅಮೆರಿಕದ ಲೇಖಕಿ ಕ್ಲೇರ್ ಬೂತ್ ಲುಸೆ ಹೇಳುವ ಮಾತು ಬಹಳ ವಾಸ್ತವದಿಂದ ಕೂಡಿದೆ.

ಪ್ರಗತಿಪರ ಧೋರಣೆಯ ಹಿರಿಯರು, ಸಾಮಾಜಿಕ ಕಾರ್ಯಕರ್ತರು ಗೃಹಲಕ್ಷ್ಮಿಯ ಹಣವು ಧಾರ್ಮಿಕ ಕಾರ್ಯಗಳ ಹೆಸರಿನಲ್ಲಿ ಮಹಿಳೆಯರ ಕೈಜಾರಿ ಹೋಗದಂತೆ ಮಾರ್ಗದರ್ಶನ ಮಾಡಬೇಕು. ಸರ್ಕಾರ ಎಚ್ಚರಿಕೆಯ ಸುತ್ತೋಲೆ ಹೊರಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.