ಬಿಜೆಪಿಯಿಂದ ಲೋಕಶಕ್ತಿ ಜತೆ ಹೊಂದಾಣಿಕೆಗೆ ಒಪ್ಪಿಗೆ
ಬೆಂಗಳೂರು, ಜೂನ್ 24– ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಗಳಲ್ಲಿ ಕೇಂದ್ರ ವಾಣಿಜ್ಯ ಸಚಿವ ರಾಮಕೃಷ್ಣ ಹೆಗಡೆ ನೇತೃತ್ವದ ಲೋಕಶಕ್ತಿಯೊಂದಿಗೆ ಹೊಂದಾಣಿಕೆಗೆ, ಪಕ್ಷದ ಅಧ್ಯಕ್ಷ ಕುಶಭಾವು ಠಾಕ್ರೆ ಅವರ ಸಮ್ಮುಖದಲ್ಲಿ ಇಂದು ಇಲ್ಲಿ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ಒಪ್ಪಿಗೆ ಸೂಚಿಸಿತು.
‘ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಲೋಕಶಕ್ತಿಯ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿ; ಹೊಂದಾಣಿಕೆಯನ್ನು ದೆಹಲಿ ವರಿಷ್ಠರು ಬಲವಂತವಾಗಿ ನಿಮ್ಮ ಮೇಲೆ ಹೇರುತ್ತಿದ್ದಾರೆ ಎಂಬ ಭಾವನೆ ನಿಮಗೆ ಬೇಡ’ ಎಂದು ಕುಶಭಾವು ಠಾಕ್ರೆ ಅವರು ನೇರವಾಗಿ ಕೇಳಿದಾಗ, ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಪದಾಧಿಕಾರಿಗಳು ಲೋಕಶಕ್ತಿಯ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಿದರು ಎಂದು ತಿಳಿದುಬಂದಿದೆ.
ಕಾರ್ಗಿಲ್ ಬಿಕ್ಕಟ್ಟು: ಪಾಕ್ ಜತೆ ಅಮೆರಿಕ ಸೇನಾ ಅಧಿಕಾರಿ ಚರ್ಚೆ
ಇಸ್ಲಾಮಾಬಾದ್, ಜೂನ್ 24 (ಪಿಟಿಐ)– ‘ಕಾರ್ಗಿಲ್ನಿಂದ ಅತಿಕ್ರಮಣಕಾರರನ್ನು ವಾಪಸ್ ಕರೆಸಿಕೊಳ್ಳಬೇಕು ಮತ್ತು ಗಡಿ ನಿಯಂತ್ರಣ ರೇಖೆಯನ್ನು ಗೌರವಿಸಬೇಕು’ ಎಂಬ ಅಮೆರಿಕದ ನಿಲುವಿನ ಬಗ್ಗೆ ಅತೃಪ್ತ ಗೊಂಡಿರುವ ಪಾಕಿಸ್ತಾನ, ಅಮೆರಿಕದ ಹಿರಿಯ ಸೇನಾ ಅಧಿಕಾರಿ ಈ ಸಂಬಂಧ ಪಾಕಿಸ್ತಾನಕ್ಕೆ ತಂದ ಸಂದೇಶ ‘ನ್ಯಾಯಬದ್ಧವಾಗಿಲ್ಲ ಮತ್ತು ಸಮತೋಲನದಿಂದ ಕೂಡಿಲ್ಲ’ ಎಂದು ಹೇಳಿದೆ.
ಸಂಕುಚಿತ ದೃಷ್ಟಿಕೋನ ಹೊಂದಿರುವ ಅಮೆರಿಕದ ನಿಲುವು ಯುದ್ಧದ ಬಗ್ಗೆ ಮಾತನಾಡಲು ಭಾರತಕ್ಕೆ ಉತ್ತೇಜನ ನೀಡಿದಂತಾಗಿರುವುದಲ್ಲದೆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯಾಲಯದ ವಕ್ತಾರ ತಾರಿಕ್ ಅಲ್ತಾಫ್ ಪತ್ರಕರ್ತರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.