ಯುದ್ಧದ ಸ್ಥಿತಿ ಎದುರಿಸಲು ಭಾರತ ಸಿದ್ಧ
ನವದೆಹಲಿ, ಜೂನ್ 23– ಯುದ್ಧ ಮಾಡಲೇ ಬೇಕೆನ್ನುವ ಪರಿಸ್ಥಿತಿ ಎದುರಾದರೆ, ನಾವು ಅದಕ್ಕೆ ಸಿದ್ಧರಾಗಿದ್ದೇವೆ ಎಂದು ಸೇನಾಪಡೆಯ ಮುಖ್ಯಸ್ಥ ಜನರಲ್ ವಿ.ಪಿ. ಮಲ್ಲಿಕ್ ಇಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಭಾರತದ ಹಿತಾಸಕ್ತಿಯನ್ನು ಕಾಪಾಡುವ ಪ್ರಶ್ನೆ ಬಂದಾಗ ಮತ್ತು ಕಾರ್ಗಿಲ್ನಲ್ಲಿ ಪಾಕಿಸ್ತಾನಿ ಸೈನಿಕರು ಹಾಗೂ ಅತಿಕ್ರಮಣ
ಕಾರರನ್ನು ಹಿಮ್ಮೆಟ್ಟಿಸುವಾಗ ಭಾರತದ ಸೇನೆಯು ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಲೇಬೇಕಾದ ಪರಿಸ್ಥಿತಿಯ ಬಗೆಗೆ ಕೇಂದ್ರ ಸಂಪುಟವು ಪರಿಶೀಲಿಸಲಿದೆ ಎಂದು ಅವರು ಹೇಳಿದರು.
ಕಾಯ್ದೆ ತಿದ್ದುಪಡಿ: ಸಹಕಾರ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಸಭಾತ್ಯಾಗ
ಬೆಂಗಳೂರು, ಜೂನ್ 23– ರಾಜಕೀಯ ಲಾಭಕ್ಕಾಗಿ ಸಹಕಾರ ಸಂಘಗಳಿಗೆ ನಾಮಕರಣ ಮಾಡಲು ಸಹಕಾರಿ ಕಾಯ್ದೆಗೆ ಸುಗ್ರೀವಾಜ್ಞೆ ಮುಖಾಂತರ ತಿದ್ದುಪಡಿ ತಂದಿರುವುದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂಬ ವಿರೋಧ ಪಕ್ಷಗಳ ಒತ್ತಾಯಕ್ಕೆ ಸಹಕಾರ ಸಚಿವರು ಮಣಿಯದಿದ್ದಾಗ, ಅದನ್ನು ಪ್ರತಿಭಟಿಸಿ ವಿರೋಧ ಪಕ್ಷಗಳ ಸದಸ್ಯರು ವಿಧಾನಸಭೆಯಲ್ಲಿ ಇಂದು ಸಭಾತ್ಯಾಗ ಮಾಡಿದರು.
ಸಹಕಾರ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿರುವ ತಾವು ಸಹಕಾರ ಸಂಘಗಳಿಗೆ ನಾಮಕರಣ ಮಾಡುವುದಕ್ಕೆ ವಿರೋಧಿ ಎಂದು ಹೇಳಿಕೊಳ್ಳುತ್ತಾ ಬಂದ ಹಿರಿಯ ಸಹಕಾರಿ ಧುರೀಣರಾದ ಸಹಕಾರ ಸಚಿವ ಎಸ್.ಎಸ್. ಪಾಟೀಲ ಅವರು ತಮ್ಮ ಪಕ್ಷಕ್ಕೆ ಬೇಕಾದವರನ್ನು ನಾಮಕರಣ ಮಾಡಲು ಸುಗ್ರೀವಾಜ್ಞೆ ಮುಖಾಂತರ ಕಾಯ್ದೆಗೆ ತಿದ್ದುಪಡಿ ತಂದಿರುವುದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿರೋಧ ಪಕ್ಷಗಳ ಸದಸ್ಯರು, ನಿಲುವಳಿ ಸೂಚನೆ ಮಂಡನೆಯ ಪೂರ್ವಭಾವಿ ಪ್ರಸ್ತಾವದ ಮೂಲಕ ಸಚಿವರ ರಾಜೀನಾಮೆಗೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.