ಪಾಕಿಸ್ತಾನಕ್ಕೆ ಬ್ರಿಟನ್ ತರಾಟೆ
ನವದೆಹಲಿ, ಜುಲೈ 1– ಕಾರ್ಗಿಲ್ ವಲಯಕ್ಕೆ ನುಸುಳಿ ಅದನ್ನು ಆಕ್ರಮಿಸಿಕೊಳ್ಳುವ ಪ್ರಯತ್ನವು ‘ಗಂಭೀರ ಸಮಸ್ಯೆ’ಯನ್ನು ಉಂಟು ಮಾಡಲಿದೆ ಎಂಬುದಾಗಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಪಾಕಿಸ್ತಾನಿ ಪ್ರಧಾನಿಗೆ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾರ್ಗಿಲ್ ವಲಯದಲ್ಲಿ ಉಂಟಾಗಿರುವ ಪಾಕಿಸ್ತಾನಿ ಸೈನಿಕರ ಅತಿಕ್ರಮಣಕಾರಿ ಘಟನೆಯ ಬಗೆಗೆ ಭಾರತವು ಅಂತರರಾಷ್ಟ್ರೀಯ ಬೆಂಬಲ ಗಳಿಸಲು ನಡೆಸಿರುವ ಯತ್ನದಲ್ಲಿ ಈಗ ಮತ್ತೊಂದು ಪ್ರಬಲ ರಾಷ್ಟ್ರವಾದ ಬ್ರಿಟನ್ನ ಬೆಂಬಲ ಗಳಿಸುವಲ್ಲಿ ಯಶಸ್ವಿಯಾದಂತಾಗಿದೆ.
ಬತ್ತಿದ ಬಾವಿಗಳ ವಿದ್ಯುತ್ ಬಿಲ್ ಬಾಕಿ ಮನ್ನಾ
ಬೆಂಗಳೂರು, ಜುಲೈ 1– ನೈಸರ್ಗಿಕ ಕಾರಣಗಳಿಂದ ನೀರು ಬತ್ತಿಹೋಗಿರುವ ತೆರೆದ ಬಾವಿಗಳ ರೈತರು ಕೆಇಬಿಗೆ ಕೊಡಬೇಕಾಗಿರುವ ವಿದ್ಯುತ್ ದರದ ಬಾಕಿ ಅದರ ಮೇಲಿನ ಬಡ್ಡಿ ಹಾಗೂ ಸುಸ್ತಿಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ಕೃಷಿ ಸಚಿವ ಸಿ. ಬೈರೇಗೌಡ ಅವರು ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು.
ಬಾವಿಗಳಲ್ಲಿ ನೀರಿಲ್ಲದೆ ಇದ್ದರೂ ವಿದ್ಯುತ್ ಸಂಪರ್ಕ ಬೇಡವೆಂದು ಕೆಇಬಿಗೆ ತಿಳಿಸದೆ ಅನೇಕ ರೈತರು ಉಪಯೋಗಿಸದಿರುವ ವಿದ್ಯುತ್ಗೆ ಬಾಕಿ ಕೊಡಬೇಕಾಗಿದೆ. ರೈತರು ಈ ಸಂಬಂಧ ವಿದ್ಯುತ್ ಸಂಪರ್ಕ ಬೇಡವೆಂದು ಕೆಇಬಿಗೆ ತಿಳಿಸಿ ವಿದ್ಯುತ್ ಸಂಪರ್ಕವನ್ನು ಹಿಂತಿರುಗಿಸಿದ ರೈತರಿಗೆ ಬಾಕಿ ಮನ್ನಾದ ಅನುಕೂಲ ದೊರೆಯುತ್ತದೆ ಎಂದು ಶೂನ್ಯವೇಳೆಯಲ್ಲಿ ಸಚಿವರು ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.