ಅಗತ್ಯಕ್ಕೆ ತಕ್ಕಂತೆ ಹಣ ಹಂಚಿಕೆಗೆ ಆಗ್ರಹ
ಬೆಂಗಳೂರು, ಮೇ 28– ರಾಷ್ಟ್ರದ ಸಂಯುಕ್ತ ರಾಜ್ಯ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿ
ಯಿಂದ ಪ್ರತಿಯೊಂದು ರಾಜ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಣಕಾಸಿನ ವ್ಯವಹಾರದಲ್ಲಿ ಸ್ಥಿರತೆ ತರುವ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪನ್ಮೂಲಗಳ ಹಂಚಿಕೆ ಆಗಬೇಕೆಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಒತ್ತಾಯಿಸಿದರು.
ಉದಾರೀಕರಣ ಹಾಗೂ ಜಾಗತೀಕರಣ ಹಿನ್ನೆಲೆಯಲ್ಲಿ ಸಂಪನ್ಮೂಲ ಹಂಚಿಕೆಯಲ್ಲಿ ಹಿಂದಿನ ಆಯೋಗಗಳು ಅನುಸರಿಸಿದ ಮಾನದಂಡಗಳಿಗೆ ಬದಲಾಗಿ 21ನೇ ಶತಮಾನಕ್ಕೆ ದಿಕ್ಸೂಚಿಯಾಗುವಂತಹ ಬದಲಿ ಮಾನದಂಡಗಳನ್ನು ಅನುಸರಿಸಬೇಕೆಂದು ಅವರು ರಾಜ್ಯಕ್ಕೆ ಭೇಟಿ ನೀಡಿರುವ 11ನೇ ಹಣಕಾಸು ಆಯೋಗದ ಸಭೆಯಲ್ಲಿ ಭಾಗವಹಿಸಿ ರಾಜ್ಯದ ಅಹವಾಲನ್ನು ಮಂಡಿಸಿದರು.
ಉಗ್ರಗಾಮಿಗಳಿಂದ ಸೇನಾ ಹೆಲಿಕಾಪ್ಟರ್ ನಾಶ– 4 ಸಾವು
ನವದೆಹಲಿ, ಮೇ 28 (ಪಿಟಿಐ)– ಜಮ್ಮು– ಕಾಶ್ಮೀರದ ಡ್ರಾಸ್ ವಲಯದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳ ವಿರುದ್ಧದ ಮುಂದುವರಿದ ಕಾರ್ಯಾಚರಣೆಯಲ್ಲಿ ಇಂದು ಪಾಲ್ಗೊಂಡಿದ್ದ ಭಾರತೀಯ ವಾಯುಪಡೆಯ ಎಂಐ–17 ಹೆಲಿಕಾಪ್ಟರ್ ಅನ್ನು ಪಾಕ್ ಬೆಂಬಲಿತ ಉಗ್ರಗಾಮಿಗಳು ಕ್ಷಿಪಣಿ ಉಡಾಯಿಸಿ ಹೊಡೆದುರುಳಿಸಿದ್ದಾರೆ.
ಈ ದಾಳಿಯಲ್ಲಿ ಇಬ್ಬರು ಚಾಲಕ ಸಿಬ್ಬಂದಿಯೂ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಈ ಮಧ್ಯೆ ವಾಸ್ತವ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಸೇನೆಯನ್ನು ಜಮಾಯಿಸುತ್ತಿದೆ ಎಂದು ಭಾರತ ಆರೋಪಿಸಿದ್ದು, ಇದರಿಂದ ಶಿಮ್ಲಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ದೂರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.