ಬುಧವಾರ 20–1–1999
ಪಟೇಲ್ ಮಧ್ಯಸ್ಥಿಕೆ – ಶಂಕರ್ ಪದಚ್ಯುತಿ ಬಿಕ್ಕಟ್ಟು ಇತ್ಯರ್ಥ
ಬೆಂಗಳೂರು, ಜ. 19 - ರಾಜ್ಯ ಜನತಾ ದಳದ ಅಧ್ಯಕ್ಷ ಸ್ಥಾನದಿಂದ ಬಿ.ಎಲ್.ಶಂಕರ್ ಅವರನ್ನು ಪದಚ್ಯುತಿಗೊಳಿಸಿದ ವಿಧಾನದ ಬಗ್ಗೆ ಹಿರಿಯ ಒಕ್ಕಲಿಗ ಸಚಿವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದಲ್ಲಿ ಉದ್ಭವಿಸಿದ್ದ ಹೊಸ ಬಿಕ್ಕಟ್ಟು ಇಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಮಧ್ಯಸ್ಥಿಕೆಯಿಂದಾಗಿ ಸದ್ಯಕ್ಕೆ ಬಗೆಹರಿದಿದೆ.
ಶಂಕರ್ ಪದಚ್ಯುತಿ ವಿಚಾರದಲ್ಲಿ ತೀವ್ರ ಅಸಮಾಧಾನಗೊಂಡಿದ್ದ ಹಿರಿಯ ಒಕ್ಕಲಿಗ ಸಚಿವರು ಕದನ ವಿರಾಮ ಘೋಷಿಸಿ ಪಕ್ಷದ ಬಿಕ್ಕಟ್ಟು ಪರಿಹರಿಸುವ ಸಂಬಂಧ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಅವರು ಪ್ರಕಟಿಸಿರುವ ತೀರ್ಮಾನಕ್ಕೆ ಬದ್ಧರಾಗಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಂಕರ್ ಅವರಿಗೆ ಸೂಕ್ತ 'ನ್ಯಾಯ ದೊರಕಿಸುವ ಅಧಿಕಾರವನ್ನು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರಿಗೆ ವಹಿಸಿರುವ ಹಿರಿಯ ಒಕ್ಕಲಿಗ ಸಚಿವರು ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಜನತಾದಳದ ಅಧ್ಯಕ್ಷರಾಗಿ ನಾಳೆ ಅಧಿಕಾರ ವಹಿಸಿಕೊಳ್ಳುವ ಸಮಾರಂಭದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ.
ಕ್ರಿಕೆಟ್: ‘ಶಿವಸೇನೆ ಬೆದರಿಕೆ ಗಂಭೀರವಲ್ಲ’
ಮುಂಬೈ, ಜ. 19 - ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಚೇರಿ ಮೇಲೆ ದಾಳಿ ನಡೆಸಿದ ಯಾರೂ ರಕ್ಷಣೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮಹರಾಷ್ಟ್ರದ ಉಪ ಮುಖ್ಯಮಂತ್ರಿ ಗೋಪಿನಾಥ್ ಮುಂಡೆ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ಆದರೆ ಪ್ರಕರಣ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ‘ದುಷ್ಕರ್ಮಿಗಳ ವಿರುದ್ಧ ಕಾನೂನು ತನ್ನದೇ ಆದ ಕ್ರಮವನ್ನು ಕೈಗೊಳ್ಳಲಿದೆ' ಎಂದು ಅವರು ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.