ಕಾರ್ನಾಡ್ಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
ನವದೆಹಲಿ, ಮಾರ್ಚ್ 27– ಖ್ಯಾತ ನಾಟಕಕಾರ, ನಿರ್ದೇಶಕ, ನಟ ಮತ್ತು ಬಹುಮುಖ ಪ್ರತಿಭೆಯ ಗಿರೀಶ ಕಾರ್ನಾಡ ಅವರಿಗೆ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಕರ್ನಾಟಕದ ಮೇರು ಸಾಧನೆಯನ್ನು ಕೊಂಡಾಡಿದರು.
ಇಲ್ಲಿಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣವಾದ ವಿಜ್ಞಾನ ಭವನದಲ್ಲಿ ಇಂದು ಸಂಜೆ ನಡೆದ ಸುಂದರ ಸಮಾರಂಭದಲ್ಲಿ ಭಾರತೀಯ ಜ್ಞಾನಪೀಠ ಸಂಸ್ಥೆಯ 34ನೇ ಪ್ರಶಸ್ತಿ ವಿತರಣೆಯು ನಡೆಯಿತು. ಜ್ಞಾನಪೀಠ ಪ್ರಶಸ್ತಿಯ ಸಿಂಹಪಾಲು ಇಂದು ಕರ್ನಾಟಕದ್ದಾಯಿತು. 1998ರ ಸಾಲಿನ ಈ ಪ್ರಶಸ್ತಿಯು ಕನ್ನಡಕ್ಕೆ ದೊರೆತ ಏಳನೇ ಜ್ಞಾನಪೀಠವಾಗಿದ್ದು, ಗಿರೀಶ ಕಾರ್ನಾಡ ಅದನ್ನು ತಮ್ಮದಾಗಿಸಿಕೊಂಡರು.
ವಾಜಪೇಯಿ ಅವರು ಕಾರ್ನಾಡ ಅವರ ಹಣೆಗೆ ಕುಂಕುಮ ಇಟ್ಟು, ತೆಂಗಿನಕಾಯಿ ನೀಡಿ, ಶಾಲು ಹೊದಿಸಿದರು. ಆನಂತರ ವಾಗ್ದೇವಿ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು ಐದು ಲಕ್ಷ ರೂಪಾಯಿ ಚೆಕ್ ನೀಡಿ ಆಶೀರ್ವದಿಸಿದರು.
ದೂರವಾಣಿ ದರ ಏರಿಕೆ ವಿವಾದ
ನವದೆಹಲಿ, ಮಾರ್ಚ್ 27 (ಯುಎನ್ಐ)– ಗ್ರಾಮೀಣ ಪ್ರದೇಶದ ಗ್ರಾಹಕರು ಹಾಗೂ ನಗರಗಳಲ್ಲಿರುವ ಕಡಿಮೆ ಆದಾಯ ಗುಂಪಿನ ಜನರಿಗೆ ದೂರವಾಣಿ ಬಾಡಿಗೆ ಹಾಗೂ ಕರೆ ದರ ಹೆಚ್ಚಿಸದಿರಲು ಸರ್ಕಾರ ನಿರ್ಧರಿಸುವುದರೊಂದಿಗೆ ದೂರವಾಣಿ ಪ್ರಾಧಿಕಾರದ ಹೊಸ ದರಪಟ್ಟಿ ವಿವಾದ ಬಗೆಹರಿದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.