ಬೆಂಗಳೂರು, ಮಾರ್ಚ್ 1– ಸಂಪುಟ ವಿಸ್ತರಣೆ ಹಾಗೂ ಖಾತೆಗಳ ಮರು ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಕೈಗೊಂಡಿರುವ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಬೆಂಬಲಿಗ ಸಚಿವರು ಇಂದು ನಡೆದ ಸಂಪುಟ ಸಭೆಗೆ ಗೈರುಹಾಜರಾಗಿದ್ದರು.
ದೇವೇಗೌಡರ ಬೆಂಬಲಿಗರೆಂದೇ ಗುರುತಿಸಲಾಗಿರುವ ಹಿಂದುಳಿದ ವರ್ಗಗಳ ಸಚಿವ ಮಾಲೀಕಯ್ಯ ಗುತ್ತೇದಾರ್, ಸಣ್ಣ ನೀರಾವರಿ ಸಚಿವ ತಿಪ್ಪೇಸ್ವಾಮಿ, ಗೌಡರ ಪುತ್ರ ಹಾಗೂ ವಸತಿ ಸಚಿವ ಎಚ್.ಡಿ. ರೇವಣ್ಣ, ಸಣ್ಣ ಉಳಿತಾಯ ಸಚಿವ ಬಿ. ಸತ್ಯನಾರಾಯಣ ಮೊದಲಾದವರು ಇಂದಿನ ಸಂಪುಟ ಸಭೆಗೆ ಗೈರುಹಾಜರಾಗಿರುವುದು ಮಹತ್ವದ ಬೆಳವಣಿಗೆ.
ಪಂಚಾಯ್ತಿ ಸದಸ್ಯರ ಅಧಿಕಾರ ಮುಂದುವರಿಕೆಗೆ ನಿರ್ಧಾರ
ಬೆಂಗಳೂರು, ಮಾರ್ಚ್ 1– ಗ್ರಾಮ ಪಂಚಾಯ್ತಿಗಳಿಗೆ ಮತ್ತೆ ಚುನಾವಣೆ ನಡೆಯುವವರೆಗೆ ಆಯಾ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನೇ ನಾಮಕರಣ ಮಾಡುವ ಮೂಲಕ ಮುಂದುವರಿಸಲು ಇಂದು ಇಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಗ್ರಾಮ ಪಂಚಾಯ್ತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹಾಗೂ ಕ್ಷೇತ್ರಗಳನ್ನು ಪುನರ್ವಿಂಗಡಿಸಲು ಸರ್ಕಾರ ಸುಗ್ರೀವಾಜ್ಞೆ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಚುನಾವಣೆ ಮುಂದಕ್ಕೆ ಹೋಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.