ಉದ್ರಿಕ್ತ ಸ್ಥಿತಿ ಶಮನಗೊಳಿಸಲು ಪಾಕಿಸ್ತಾನಕ್ಕೆ ಅಮೆರಿಕದ ಸಲಹೆ
ಇಸ್ಲಾಮಾಬಾದ್, ಜೂನ್ 25 (ಪಿಟಿಐ): ಕಾರ್ಗಿಲ್ ವಿಷಯದಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವನ್ನು ತಳೆದಿರುವ ಅಮೆರಿಕ, ಗಡಿ ನಿಯಂತ್ರಣ ರೇಖೆಯಲ್ಲಿ ಈಗಿರುವ ಉದ್ರಿಕ್ತ ಸ್ಥಿತಿಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನದ ಅಧ್ಯಕ್ಷ ನವಾಜ್ ಷರೀಫ್ ಅವರಿಗೆ ಇಂದು ತಿಳಿಸಿತು. ಆದರೆ, ಕಾಶ್ಮೀರ ಸಮಸ್ಯೆ ಬಗೆಹರಿಸುವವರೆಗೂ ಇಂತಹ ಪರಿಸ್ಥಿತಿ ಮುಂದುವರಿಯುತ್ತದೆ ಎಂದು ಷರೀಫ್ ಹೇಳಿದರು.
ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಸಂದೇಶವನ್ನು ಅಮೆರಿಕದ ಉನ್ನತ ಮಟ್ಟದ ನಿಯೋಗ ಇಂದು ಷರೀಫ್ ಅವರಿಗೆ ತಲುಪಿಸಿತು. ಅಮೆರಿಕದ ಸೆಂಟ್ರಲ್ ಕಮಾಂಡ್ನ ಕಮಾಂಡರ್ ಇನ್ ಚೀಫ್ ಅಂಟೋನಿ ಜಿನ್ನಿ ಅವರು ನಿಯೋಗದ ನೇತೃತ್ವ ವಹಿಸಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ರಾಘವನ್ ವೀರಮರಣ
ನವದೆಹಲಿ, ಜೂನ್ 25– ಭಾರತೀಯ ಸೇನಾ ಪಡೆಗಳು ಇಂದು ಬಟಾಲಿಕ್ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಏಳು ಮಂದಿ ಪಾಕಿಸ್ತಾನಿ ಸೈನಿಕರು ಬಲಿಯಾಗಿದ್ದು, ಇತರೆ ಇಬ್ಬರು ಗಾಯಗೊಂಡಿದ್ದಾರೆ.
ಈ ಮಧ್ಯೆ ಕುಮಾನ್ ರೆಜಿಮೆಂಟ್ನ ನೇತೃತ್ವ ವಹಿಸಿ, ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನದ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಲೆಫ್ಟಿನೆಂಟ್ ಕರ್ನಲ್ ಎನ್.ವಿ. ರಾಘವನ್ ಅವರು ಉಗ್ರಗಾಮಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.