ನವದೆಹಲಿ: ಫೆ. 25 – ಉನ್ನತ ದರ್ಜೆಯ ಪ್ರಯಾಣ ದರಗಳಲ್ಲಿ ತೀವ್ರ ಏರಿಕೆ ಹಾಗೂ ಸರಕು ಸಾಗಣೆ ದರದಲ್ಲಿ ಶೇಕಡ 4ರಷ್ಟು ಏರಿಕೆಯ ಮೂಲಕ ಮುಂದಿನ (1999–2000) ಹಣಕಾಸು ವರ್ಷದಲ್ಲಿ ಒಟ್ಟು 900 ಕೋಟಿ ರೂಪಾಯಿ ಹೆಚ್ಚು ವರಮಾನ ಸಂಗ್ರಹಿಸಲು ರೈಲ್ವೆ ಸಚಿವ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ.
ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ ರೈಲ್ವೆ ಆಯವ್ಯಯ ಮುಂಗಡ ಪತ್ರದ ಅಂದಾಜಿನಂತೆ, ಸರಕು ಸಾಗಣೆ ದರ ಹೆಚ್ಚಳದಿಂದ ಒಟ್ಟು 700 ಕೋಟಿ ರೂಪಾಯಿ ಬಂದರೆ, ಮಿಕ್ಕಿದ 200 ಕೋಟಿ ರೂಪಾಯಿಯು ಪ್ರಯಾಣದರ ಹೆಚ್ಚಳವೂ ಸೇರಿದಂತೆ ಇತರ ಬಾಬ್ತುಗಳಿಂದ ಸಿಗುವುದು.
ಹೆಚ್ಚಿಸಲಾದ ದರಗಳು 1999ರ ಏಪ್ರಿಲ್ ಒಂದರಿಂದ ಜಾರಿಗೆ ಬರಲಿವೆ.
ರೈಲುಗಳಲ್ಲಿ ಸಿಗರೇಟ್ ಬೀಡಿ ಮಾರಾಟ ನಿಷೇಧ
ನವದೆಹಲಿ, ಫೆ. 25 ರೈಲ್ವೆ ಪ್ಲಾಟ್ಫಾರ್ಮ್ ಹಾಗೂ ಪ್ರಯಾಣಿಕರ ರೈಲುಗಳಲ್ಲಿ ಸಿಗರೇಟ್ ಮತ್ತು ಬೀಡಿ ಮಾರಾಟವನ್ನು ಬರುವ ಜೂನ್ 5 ‘ಪರಿಸರ ದಿನ’ದಿಂದ ನಿಷೇಧಿಸಲಾಗುವುದು ಎಂದು ರೈಲ್ವೆ ಸಚಿವ ನಿತೀಶ್ ಕುಮಾರ್ ಲೋಕಸಭೆಯಲ್ಲಿ ಇಂದು ತಿಳಿಸಿದರು.
ಪರಿಸರ ಸಂಬಂಧಿ ವಿಷಯಗಳಲ್ಲಿ ತಮ್ಮ ಇಲಾಖೆಯ ಬದ್ಧತೆಯನ್ನು ಬಿಂಬಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ರೈಲು ಪ್ರಯಾಣಿಕರ ದೂರುಗಳ ಬಗ್ಗೆ ಮಾತನಾಡಿದ ಸಚಿವರು ‘ಗ್ರಾಹಕರ ಹಿತರಕ್ಷಣಾ ಸಂಸ್ಥೆಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.