ಚುನಾವಣಾ ಹಿಂಸೆಗೆ 41 ಬಲಿ: ಶೇ 56 ಮತದಾನ
ನವದೆಹಲಿ, ಅ. 3 (ಪಿಟಿಐ, ಯುಎನ್ಐ)– ಹತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿನ ಒಟ್ಟು 118 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ನಡೆದ ಕೊನೆಯ ಸುತ್ತಿನ ಮತದಾನದಲ್ಲಿ ವ್ಯಾಪಕ ಹಿಂಸಾಕೃತ್ಯಗಳು ನಡೆದು ಒಟ್ಟು 41 ಜನರು ಸತ್ತಿದ್ದಾರೆ. ಇಂದು ಒಟ್ಟಾರೆ ಸರಾಸರಿ
ಶೇಕಡ 56ರಷ್ಟು ಮತದಾನವಾಗಿದೆ.
ಮೃತರು ಮಣಿಪುರ, ತ್ರಿಪುರಾ, ಅಸ್ಸಾಂ, ಬಿಹಾರ ಹಾಗೂ ಉತ್ತರ ಪ್ರದೇಶಕ್ಕೆ ಸೇರಿದವರು. ಈ ರಾಜ್ಯಗಳಲ್ಲಿ ಹಲವರು ಗಾಯಗೊಂಡಿದ್ದಾರೆ.
ಇಂದು ಸತ್ತಿರುವವರೂ ಸೇರಿದಂತೆ ಚುನಾವಣೆಯ ಸಂಬಂಧ ದೇಶದಲ್ಲಿ ಸತ್ತವರ ಸಂಖ್ಯೆ ನೂರನ್ನು ದಾಟಿತು. ಮೊದಲ ಹಂತದ ಚುನಾವಣೆಯಲ್ಲಿ 6, ಎರಡನೇ ಹಂತದಲ್ಲಿ ಒಬ್ಬರು, ಮೂರನೇ ಹಂತದಲ್ಲಿ 8 ಹಾಗೂ ನಾಲ್ಕನೇ ಹಂತದ ಚುನಾವಣೆ ಸಮಯದಲ್ಲಿ 8 ಜನ ಸತ್ತಿದ್ದರು.
ಬೆಂಗಳೂರಿನಲ್ಲಿ ಗುಂಪು ಘರ್ಷಣೆ, ಕಲ್ಲು ತೂರಾಟ, ಲಾಠಿ ಪ್ರಹಾರ
ಬೆಂಗಳೂರು, ಅ. 3– ಗುಂಪು ಘರ್ಷಣೆ, ನಕಲಿ ಮತದಾನ, ಕಲ್ಲು ತೂರಾಟ, ವಾಹನಗಳ ಜಖಂ ಮತ್ತಿತರ ಸಣ್ಣಪುಟ್ಟ ಘಟನೆಗಳ ನಡುವೆ ಇಂದು ನಗರದಲ್ಲಿ ನಡೆದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಶೇಕಡ 52ರಷ್ಟು ಮತದಾನ ನಡೆದಿದೆ.
ಹನುಮಂತ ನಗರದಲ್ಲಿ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ಅವರ ಪತ್ನಿ ವರಲಕ್ಷ್ಮಿ ಅವರ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ವಿವಿಧ ಘಟನೆಗಳ ಸಂಬಂಧ ನಗರದ ಪೊಲೀಸರು ಒಟ್ಟು 61 ಜನರನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.