ಜಯಾ ರಾಜಕೀಯ ವಿಷಕನ್ಯೆ: ಮಹಾಜನ್
ನವದೆಹಲಿ, ಮೇ 10 (ಪಿಟಿಐ)– ತಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡವರನ್ನೇ ಕಚ್ಚುವ ಎಐಎಡಿಎಂಕೆ ನಾಯಕಿ ಜಯಲಲಿತಾ ‘ರಾಜಕೀಯ ವಿಷಕನ್ಯೆ’ ಎಂದು ಕೇಂದ್ರ ಸಚಿವ ಪ್ರಮೋದ್ ಮಹಾಜನ್ ಅವರು ಬಣ್ಣಿಸಿದ್ದಾರೆ.
‘ಜಯಲಲಿತಾ ರಾಜಕೀಯ ಹೊಂದಾಣಿಕೆ ಮಾಡಿಕೊಂಡವರಿಗೆಲ್ಲ ಬೆನ್ನ ಹಿಂದೆ ಚೂರಿ ಹಾಕಿದ್ದಾರೆ. ಅದು ಅವರ ಸ್ವಭಾವ’ ಎಂದು ಮಹಾಜನ್ ಖಾಸಗಿ ಟಿವಿ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ವಿಷಕನ್ಯೆ ಎಂದು ತಿಳಿದೂ ಅವರೊಂದಿಗೆ ಏಕೆ ಹೊಂದಾಣಿಕೆ ಮಾಡಿಕೊಂಡಿರಿ?’ ಎಂದು ಕೇಳಿದ ಪ್ರಶ್ನೆಗೆ ‘ಆ ಸಂದರ್ಭದಲ್ಲಿ ಅದು ರಾಜಕೀಯವಾಗಿ ಅನಿವಾರ್ಯವಾಗಿತ್ತು’ ಎಂದರು.
ಇಂಡಿಯನ್ ಏರ್ಲೈನ್ಸ್ ಖಾಸಗೀಕರಣಕ್ಕೆ ಕ್ರಮ
ನವದೆಹಲಿ, ಮೇ 10 (ಯುಎನ್ಐ, ಪಿಟಿಐ)– ಸರ್ಕಾರಿ ಸ್ವಾಮ್ಯದ ಇಂಡಿಯನ್ ಏರ್ಲೈನ್ಸ್ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಮಹತ್ವದ ನಿರ್ಣಯವನ್ನು ಹಣಕಾಸು ವ್ಯವಹಾರಗಳ ಸಂಸದೀಯ ಸಮಿತಿ ಇಂದು ತೆಗೆದುಕೊಂಡಿದೆ.
ಇಂಡಿಯನ್ ಏರ್ಲೈನ್ಸ್ ಸಂಸ್ಥೆಯ ಖಾಸಗೀಕರಣಕ್ಕೆ ಕೇಳ್ಕರ್ ಸಮಿತಿ ಶಿಫಾರಸು ಮಾಡಿತ್ತು. ಸಮಿತಿಯ ಸಭೆಯ ನಂತರ ಈ ವಿಷಯವನ್ನು ಪತ್ರಕರ್ತರಿಗೆ ತಿಳಿಸಿದ ಅಧಿಕೃತ ವಕ್ತಾರರು ‘ಈ ಹಿನ್ನೆಲೆಯಲ್ಲಿ ಸರ್ಕಾರವು 325 ಕೋಟಿ ರೂ.ಗಳ ಪಾಲು ಬಂಡವಾಳವನ್ನು ನೀಡಲು ಒಪ್ಪಿಗೆ ಸೂಚಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.