ಕಲಾಪದಲ್ಲಿ ಕರ್ನಾಟಕ ಸದಸ್ಯರ ನಿರಾಸಕ್ತಿ
ನವದೆಹಲಿ, ಅ. 20 – ಕರ್ನಾಟಕದ ಅನೇಕ ಸದಸ್ಯರು ಗೈರುಹಾಜರಾಗುವ ಮೂಲಕ ಲೋಕಸಭೆ ಕಲಾಪದಲ್ಲಿ ನಿರಾಸಕ್ತಿ ತೋರುವ ಪರಂಪರೆ 13ನೇ ಲೋಕಸಭೆಯ ಪ್ರಥಮ ಅಧಿವೇಶನದ ಮೊದಲ ದಿನವೇ ಕಂಡುಬಂದಿತು.
ಸೋನಿಯಾ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಬಳ್ಳಾರಿ ಕ್ಷೇತ್ರ ಬಿಟ್ಟು ಒಟ್ಟು 27 ಮಂದಿ ಸದಸ್ಯರ ಪೈಕಿ, ಇಬ್ಬರು ಸಚಿವರು ಸೇರಿದಂತೆ ಹದಿನೆಂಟು ಮಂದಿ ಮಾತ್ರ ಇಂದು ಪ್ರಮಾಣವಚನ ಸ್ವೀಕರಿಸಿದರು.
ಉಳಿದವರು ಸದನದ ಆರಂಭದ ದಿನ ಗೈರುಹಾಜರಾಗಿದ್ದುದು ಎದ್ದು ಕಾಣುತ್ತಿತ್ತು. ಸಚಿವ ಅನಂತ ಕುಮಾರ್ ಮತ್ತು ವಿ.ಧನಂಜಯ ಕುಮಾರ್ ಸೇರಿದಂತೆ ಸಿ.ಕೆ.ಜಾಫರ್ ಷರೀಫ್, ಮಾರ್ಗರೇಟ್ ಆಳ್ವ, ಜಿ.ಎಸ್.ಬಸವರಾಜು, ರಮೇಶ ಜಿಗಜಿಣಗಿ, ಎ.ವೆಂಕಟೇಶ ನಾಯಕ್, ಕೆ.ಎಚ್.ಮುನಿಯಪ್ಪ, ಜಿ.ಪುಟ್ಟಸ್ವಾಮಿ ಗೌಡ, ಆರ್.ಎಸ್.ಪಾಟೀಲ ಅವರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.
ಪುಟ್ಟಸ್ವಾಮಿ ಗೌಡ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಸೋಲಿಸಿದ್ದಾರೆ ಎಂದು ತುಮಕೂರಿನಿಂದ ಆಯ್ಕೆಯಾಗಿರುವ ಕಾಂಗ್ರೆಸ್ನ ಜಿ.ಎಸ್.ಬಸವರಾಜು ಸದನದ ಗಮನ ಸೆಳೆದರು.
ಇಂದಿನಿಂದ ಲಾರಿ ಮುಷ್ಕರ ‘ಎಸ್ಮಾ’ ಜಾರಿ ಎಚ್ಚರಿಕೆ
ನವದೆಹಲಿ, ಅ. 20 (ಯುಎನ್ಐ)– ಲಾರಿ ಮಾಲೀಕರ ಸಂಘಗಳು ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ಮುಷ್ಕರದಿಂದ ಅವಶ್ಯಕ ವಸ್ತುಗಳ ಬೆಲೆ ಏರುವುದನ್ನು ತಡೆಯಲು ರಾಜ್ಯ ಸರ್ಕಾರಗಳು ಅವಶ್ಯಕ ಸೇವೆ ಕಾಯ್ದೆ (ಎಸ್ಮಾ) ವಿಧಿಸಬಹುದು ಎಂದು ಕೇಂದ್ರ ಸರ್ಕಾರ ಇಂದು ರಾತ್ರಿ ಪ್ರಕಟಿಸಿದೆ.
ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ನಾಳೆ ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟ ಕಾಲದ ಲಾರಿ ಮುಷ್ಕರ ಪ್ರಾರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.