ರಾಜೀವ್ ಗಾಂಧಿ, ಕ್ವಟ್ರೋಚಿ, ಛಡ್ಡಾ ವಿರುದ್ಧ ಆರೋಪ ಪಟ್ಟಿ
ನವದೆಹಲಿ, ಅ. 22 (ಪಿಟಿಐ): ಹನ್ನೆರಡು ವರ್ಷದ ಹಿಂದೆ ಇಡೀ ದೇಶವನ್ನೇ ತಲ್ಲಣಗೊಳಿಸಿದ ಬೋಫೋರ್ಸ್ ಫಿರಂಗಿ ವ್ಯವಹಾರದಲ್ಲಿ ರುಷುವತ್ತು ಪಡೆದ ಆರೋಪದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಭಾಗಿಯಾಗಿದ್ದಾರೆ ಎಂದು ಹಗರಣ ಕುರಿತು ತನಿಖೆ ನಡೆಸಿದ ಸಿಬಿಐ ಹೇಳಿದೆ.
ಆದರೆ ಇದೇ ಆರೋಪದ ಸಂಬಂಧ ಇಟಲಿ ಉದ್ಯಮಿ ಒಟಾವಿಯೋ ಕ್ವಟ್ರೋಚಿ, ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್, ಅನಿವಾಸಿ ಭಾರತೀಯ ಉದ್ಯಮಿ ವಿನ್ ಛಡ್ಡಾ ಹಾಗೂ ಮತ್ತಿಬ್ಬರ ವಿರುದ್ಧ ಇಂದು ನಿಯೋಜಿತ ಸಿಬಿಐ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಅತ್ಯುತ್ತಮ ರಸ್ತೆ: ಇನ್ನೂ ಮಾಯಾಮೃಗ
ಬೆಂಗಳೂರು, ಅ. 22– ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆಗಳಲ್ಲಿ ಓಡಾಡುವ ನಗರದ ನಾಗರಿಕರ ಕನಸು ಈ ವರ್ಷದ ಅಂತ್ಯಕ್ಕೆ ನನಸಾಗುವ ಸಾಧ್ಯತೆಗಳು ಈಗ ದೂರವಾಗಿವೆ.
ಬಹುದಿನಗಳ ಈ ಮಹತ್ವದ ಯೋಜನೆ ಇನ್ನೂ ಕಾಗದದ ರೂಪದಲ್ಲಿಯೇ ಇದ್ದು ವಾಸ್ತವ ರೂಪ ಪಡೆಯಲು ಮತ್ತಷ್ಟು ದಿನ ಕಾಯುವಂತಾಗಿದೆ.
ಉದ್ದೇಶಿತ ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಬಾಂಡ್ಗಳ ಮೂಲಕ ಸಂಗ್ರಹಿಸಿರುವ ಹಣ ಇದ್ದರೂ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿಲ್ಲ.
ಯೋಜನೆಯ ಫಲ ಈ ವರ್ಷದ ಅಂತ್ಯಕ್ಕೆ ನಗರದ ನಾಗರಿಕರಿಗೆ ದೊರೆಯಲಿವೆ ಎಂದು ಪಾಲಿಕೆ ಹತ್ತು ಹಲವು ಬಾರಿ ಪ್ರಕಟಿಸಿತ್ತು. ಆದರೆ ಈಗ ಪಾಲಿಕೆ ಹೇಳುವ ಪ್ರಕಾರ ‘ಸತತವಾಗಿ ಸುರಿದ ಮಳೆಯಿಂದಾಗಿ’ ಮತ್ತೆ ಕಾಮಗಾರಿಗಳು ಮುಂದಕ್ಕೆ ಹೋಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.