ಕಲ್ಕತ್ತ, ಮೇ 21 (ಯುಎನ್ಐ, ಪಿಟಿಐ): ಶರದ್ ಪವಾರ್, ಸಂಗ್ಮಾ ಮತ್ತು ತಾರಿಖ್ ಅನ್ವರ್ ಅವರನ್ನು ಪಕ್ಷದಿಂದ ಏಕಾಏಕಿ ಉಚ್ಚಾಟಿಸುವ ಮೂಲಕ ಕಾಂಗ್ರೆಸ್ ಪಕ್ಷ ಫ್ಯಾಸಿಸ್ಟ್ ಧೋರಣೆಯನ್ನು ಅನುಸರಿಸಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಟೀಕಿಸಿದ್ದಾರೆ.
ವಿದೇಶಿ ಮೂಲ ಕುರಿತಂತೆ ಉಚ್ಚಾಟಿತ ಕಾಂಗ್ರೆಸ್ ನಾಯಕರಾದ ಶರದ್ ಪವಾರ್ ಮತ್ತಿತರರು ಸಲಹೆ ಮಾಡಿದ ವಿಷಯವನ್ನು ಸಮಗ್ರವಾಗಿ ಚರ್ಚಿಸುವುದನ್ನು ಬಿಟ್ಟು ಅವರ ವಾದವನ್ನು ಹತ್ತಿಕ್ಕಲು ಕಾಂಗ್ರೆಸ್ ಯತ್ನಿಸಿದೆ, ಇದು ಖಂಡನೀಯ ಎಂದು ಪ್ರಧಾನಿ ಅವರು ಇಂದು ಇಲ್ಲಿ ಪ್ರಕಟಿಸಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊಸ ಪಕ್ಷ ಸ್ಥಾಪಿಸಲು ಶರದ್ ಪವಾರ್ ನಿರ್ಧಾರ
ಪುಣೆ, ಮೇ 21 (ಪಿಟಿಐ)– ಹೊಸ ರಾಜಕೀಯ ರಂಗವೊಂದನ್ನು ಸ್ಥಾಪಿಸುವುದಾಗಿ ಕಾಂಗ್ರೆಸ್ಸಿನಿಂದ ಉಚ್ಚಾಟಿತರಾದ ಹಿರಿಯ ರಾಜಕಾರಣಿ ಶರದ್ ಪವಾರ್ ಇಂದು ಪ್ರಕಟಿಸಿದರು.
‘ಈ ರಂಗದಲ್ಲಿ ಕಾಂಗ್ರೆಸ್ಸಿನ ತತ್ವಗಳ ಬಗ್ಗೆ ಪ್ರೀತ್ಯಾದರಗಳಿರುವ ಪಕ್ಷಗಳು ಹಾಗೂ ಜನರು ಇರುತ್ತಾರೆ’ ಎಂದು ಹೇಳಿದ ಅವರು, ‘ಈ ರಂಗ ಕಾಂಗ್ರೆಸ್ ಪಕ್ಷ ಹೊಂದಿರುವಂಥ ಯಾವುದೇ ದೋಷಗಳನ್ನು ಹೊಂದಿರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ರಂಗದ ಸ್ಥಾಪನೆ ಕಾರ್ಯ ಮುಂದಿನ ಎಂಟು ದಿನಗಳಲ್ಲಿ ಸಾಕಾರಗೊಳ್ಳುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.